ಬೈಕ್‌ ಕರ್ಕಶ ಶಬ್ದ ಮಾಡುತ್ತಿದ್ದ ವಿದ್ಯಾರ್ಥಿಗಳಿಗೆ ಎಎಸ್‌ಐ ಗಂಗರಾಜು ಸೈಲೆಂಟ್‌ ಆಗಿ ಹೋಗಿ ಎಂದು ಹೇಳಿದ್ದರಂತೆ. ಈ ವೇಳೆ ಪೊಲೀಸರ ಎಚ್ಚರಿಕೆಗೆ ಕ್ಯಾರೆ ಎನ್ನದೇ ಒಬ್ಬ ವಿದ್ಯಾರ್ಥಿ ಬೈಕ್‌ ಜೋರು ಸೌಂಡ್‌ ಮಾಡಿದ್ದಾನೆ. ಬೇರೆ ವಿದ್ಯಾರ್ಥಿಗಳು ಬೇಡ ಅಂದ್ರೂ ಅವನೊಬ್ಬ ಪೊಲೀಸ್ ಏನು? ಮಾಡ್ತಾನೆ? ಎಂದು ಮತ್ತೆ ಶಬ್ದ ಮಾಡಿದ್ದಾನೆ.

ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ:

ಕರ್ತವ್ಯದಲ್ಲಿದ್ದ ಎಎಸ್‌ಐ ಹಾಗೂ ಕಾನ್ಸ್‌ಟೇಬಲ್‌ ಮೇಲೆ ಕಾಲೇಜು ವಿದ್ಯಾರ್ಥಿಗಳು ಹಲ್ಲೆ ನಡೆಸಿರುವ ಘಟನೆ ನಗರ ಹೊರವಲಯದ ಬೀಡಗಾನಹಳ್ಳಿ ಸಮೀಪದ ನಾಗಾರ್ಜುನ ಕಾಲೇಜು ಬಳಿ ಶುಕ್ರವಾರ ಸಂಜೆ ನಡೆದಿದ್ದು, ಹಲ್ಲೆ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ .

ತಾಲೂಕಿನ ನಂದಿಗಿರಿಧಾಮ ಪೊಲೀಸ್‌ ಠಾಣೆಯ ಎಎಸ್‌ಐ ಗಂಗರಾಜು ಮತ್ತು ಕಾನ್ಸ್‌ಟೇಬಲ್ ಗಂಗರಾಜು ಮೇಲೆ ಪುಂಡ ವಿದ್ಯಾರ್ಥಿಗಳು ಗುಂಪು ಕಟ್ಟಿಕೊಂಡು ಹಲ್ಲೆ ನಡೆಸಿದ್ದಾರೆ. ಕಾಲೇಜಿನಲ್ಲಿ ಶುಕ್ರವಾರ ಕಾರ್ಯಕ್ರಮವಿದ್ದ ಕಾರಣ ಸಿನಿಮಾ ನಟ ನಟಿಯರು ಆಗಮಿಸಿದ್ದರು. ಭದ್ರತೆಗೆ ಪೊಲೀಸರು ಕಾಲೇಜಿನ ಗೇಟ್‌ ಬಳಿ ತೆರಳಿದ್ದರು. ಈ ವೇಳೆ ಹತ್ತಾರು ಮಂದಿ ವಿದ್ಯಾರ್ಥಿಗಳು ಸೈಲೆನ್ಸರ್‌ ಆಲ್ಟರ್‌ ಮಾಡಿಕೊಂಡಿದ್ದ ಬೈಕ್‌ಗಳಲ್ಲಿ ಕರ್ಕಶ ಶಬ್ದ ಮಾಡಿಕೊಂಡು ಓಡಾಡಿದ್ದರು.

ಬೈಕ್‌ ಕರ್ಕಶ ಶಬ್ದ ಮಾಡುತ್ತಿದ್ದ ವಿದ್ಯಾರ್ಥಿಗಳಿಗೆ ಎಎಸ್‌ಐ ಗಂಗರಾಜು ಸೈಲೆಂಟ್‌ ಆಗಿ ಹೋಗಿ ಎಂದು ಹೇಳಿದ್ದರಂತೆ. ಈ ವೇಳೆ ಪೊಲೀಸರ ಎಚ್ಚರಿಕೆಗೆ ಕ್ಯಾರೆ ಎನ್ನದೇ ಒಬ್ಬ ವಿದ್ಯಾರ್ಥಿ ಬೈಕ್‌ ಜೋರು ಸೌಂಡ್‌ ಮಾಡಿದ್ದಾನೆ. ಬೇರೆ ವಿದ್ಯಾರ್ಥಿಗಳು ಬೇಡ ಅಂದ್ರೂ ಅವನೊಬ್ಬ ಪೊಲೀಸ್ ಏನು? ಮಾಡ್ತಾನೆ? ಎಂದು ಮತ್ತೆ ಶಬ್ದ ಮಾಡಿದ್ದಾನೆ. ಈ ವೇಳೆ ಕೆರಳಿದ ಎಎಸ್‌ಐ ಗಂಗರಾಜು ವಿದ್ಯಾರ್ಥಿಯ ಮೇಲೆ ಲಾಠಿ ಬೀಸಿದ್ದು‌, ವಿದ್ಯಾರ್ಥಿಗೆ ಗಾಯವಾಗಿ ರಕ್ತ ಬಂದಿದೆ ಎನ್ನಲಾಗಿದೆ. ಇದರಿಂದ ಕೆರಳಿದ ಪುಂಡ ವಿದ್ಯಾರ್ಥಿಗಳು ರಕ್ತ ಬರುವ ಹಾಗೆ ಹೊಡಿತೀಯಾ? ಅಂತ ಎಎಸ್‌ಐ ಮೇಲೆ ಮುಗಿಬಿದ್ದು ಹಲ್ಲೆ ಮಾಡಿದ್ದಾರೆ. ಬಿಡಿಸಲು ಪ್ರಯತ್ನಿಸಿದ ಕಾನ್‌ಸ್ಟೇಬಲ್‌ನನ್ನು ನೂಕಿ ಹಲ್ಲೆ ಮಾಡಿದ್ದಾರೆ.

ನಂದಿಗಿರಿಧಾಮ ಪೊಲೀಸ್‌ ಠಾಣೆಯಲ್ಲಿ ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ತಲೆಮರೆಸಿಕೊಂಡಿರುವ ಪುಂಡರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಕೋಟ್‌....

ಪೊಲೀಸರ ಮೇಲೆ ಹಲ್ಲೆ ಘಟನೆ ನಡೆದಿರುವುದು ಸತ್ಯ. ವಿದ್ಯಾರ್ಥಿಗಳು ಸೈಲೆನ್ಸರ್‌ ಆಲ್ಟರ್‌ ಮಾಡಿಕೊಂಡಿದ್ದ ಬೈಕ್‌ಗಳಲ್ಲಿ ಕರ್ಕಶವಾಗಿ ಶಬ್ದ ಮಾಡುತ್ತಾ ಮಾಲಿನ್ಯ ಮಾಡುತ್ತಿದ್ದರು. ಅವರಿಗೆ ನಮ್ಮ ಎಎಸ್ಐ ಬುದ್ಧಿವಾದ ಹೇಳಿದಾಗ ಮಾತಿಗೆ ಮಾತು ಬೆಳೆದು ಈ ಘಟನೆ ನಡೆದಿದೆ. ನಮ್ಮ ಪೊಲೀಸರು ಯಾರಿಗೂ ರಕ್ತ ಬರುವಂತೆ ಹೊಡೆದಿಲ್ಲ. ಈ ಕುರಿತು ನಂದಿಗಿರಿಧಾಮ ಠಾಣೆಯಲ್ಲಿ ಹಲ್ಲೆ ಮಾಡಿದವರ ವಿರುದ್ಧ ಪ್ರಕರಣ ದಾಖಲಾಗಿದೆ.

ಕುಶಲ್ ಚೌಕ್ಸೆ,

ಜಿಲ್ಲಾ ಪೊಲೀಲಿಸ್ ವರಿಷ್ಠಾಧಿಕಾರಿ ಸಿಕೆಬಿ-4,5 ಮತ್ತು 6 -ನಾಗಾರ್ಜುನ ಕಾಲೇಜು ಬಳಿ ಏಳೆಂಟು ಮಂದಿ ವಿದ್ಯಾರ್ಥಿಗಳು ಪೊಲೀಸರ ಮೇಲೆ ಹಲ್ಲೆ ಮಾಡುತ್ತಿರುವುದು.