ಸಾರಾಂಶ
ಸೊರಬ: ಭಾರತ ವಿಶಿಷ್ಟ ಪರಂಪರೆಯನ್ನು ಹೊಂದಿರುವುದಕ್ಕೆ ಶಿವಶರಣರ, ಸಂತ ಯೋಗಿಗಳ ಮತ್ತು ದಾರ್ಶನಿಕರ ತಪಸ್ಸು ಅಡಗಿದೆ. ಹಾಗಾಗಿ ಇಂಥ ಪುಣ್ಯ ಭೂಮಿಯಲ್ಲಿ ಜನಿಸಿದ ಪ್ರತಿಯೊಬ್ಬ ಮನುಷ್ಯ ಜನ್ಮ ಸಾರ್ಥಕತೆ ಪಡೆಯುತ್ತದೆ ಎಂದು ತಪೋಕ್ಷೇತ್ರ ಕಣ್ವಕುಪ್ಪೆ ಗವಿಮಠ ಹಾಗೂ ದಕ್ಷಿಣ ಕೇದಾರ ವೈರಾಗ್ಯಧಾಮದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಶನಿವಾರ ಪಟ್ಟಣದ ಡಾ.ರಾಜ್ ರಂಗಮಂದಿರದಲ್ಲಿ ಶ್ರೀ ಸುರಭಿ ಚಾರಿಟೇಬಲ್ ಟ್ರಸ್ಟ್ನಿಂದ ಹಮ್ಮಿಕೊಂಡಿದ್ದ ಸಾಮೂಹಿಕ ಶ್ರೀ ಸತ್ಯನಾರಾಯಣಪೂಜೆ ಮತ್ತು ರಾಜ್ಯ ಸುರಭಿ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.ಭಗವಂತನ ಸೇವೆಯಿಂದ ನಾವು ಮಾಡುವ ಕಾಯಕದಲ್ಲಿ ಯಶಸ್ಸುಗಳಿಸಲು ಸಾಧ್ಯವಾಗುತ್ತದೆ. ಆಲಸ್ಯ ಮತ್ತು ಮೈಗಳ್ಳತನವನ್ನು ತನ್ನ ಜೊತೆಯವರೇ ದೂರಮಾಡುತ್ತಾರೆ. ಆದ್ದರಿಂದ ಭಗವಂತನ ಕೃಪೆಗೆ ಒಳಗಾಗಬೇಕಾದರೆ ನಿರ್ಲಭವನ್ನು ತೊರೆಯಬೇಕು. ಸಮಾಜದ ಉನ್ನತದಾರಿಯಲ್ಲಿ ನಡೆದವರಿಗೆ ಯಶಸ್ಸಿನ ಪ್ರಾಪ್ತಿಯಾಗುತ್ತದೆ ಎಂದರು.
ಸುರಭಿವಾಣಿ ಪತ್ರಿಕೆಯ ೧೧ನೇ ವಾರ್ಷಿಕ ವಿಶೇಷ ಸಂಚಿಕೆ ಬಿಡುಗಡೆ ಮಾಡಿದ ಜಡೆ ಸಂಸ್ಥಾನ ಮಠದ ಡಾ.ಮಹಾಂತ ಸ್ವಾಮೀಜಿ ಮಾತನಾಡಿ, ಮೌಢ್ಯವನ್ನು ಅಳಿಸಿ ಮೌಲ್ಯವನ್ನು ಬಿತ್ತುವ ಕಾರ್ಯ ಪತ್ರಿಕೆಗಳಿಂದ ಮಾತ್ರ ಸಾಧ್ಯವಾಗುತ್ತಿದೆ. ಸಮಾಜದಲ್ಲಿನ ಒಳಿತು- ಕೆಡುಕುಗಳನ್ನು ಬಿತ್ತರಿಸುವ ಪತ್ರಿಕೆಗಳಿಂದ ಆಸ್ವಾದಿಸುವ ಮತ್ತು ಯಾವುದನ್ನು ಗ್ರಹಿಸಬೇಕು ಎನ್ನುವ ಮನೋಧರ್ಮ ನಮ್ಮ ಮೇಲಿದೆ ಎಂದರು.ನಿಸ್ವಾರ್ಥ ಮನೋಭಾವದಿಂದ ಸಮಾಜಮುಖಿ ಚಟುವಟಿಕೆಯಲ್ಲಿ ತೊಡಗಿಕೊಂಡವರೊಂದಿಗೆ ಕೈಜೋಡಿಸಿದಾಗ ಸಮಾಜದ ಒಳಿತೂ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸುರಭಿ ಚಾರಿಟೇಬಲ್ ಟ್ರಸ್ಟ್ ಸಮಾಜಮುಖಿ ಚಟುವಟಿಕೆಗಳಿಗೆ ಹಲವು ಯೋಜನೆಗಳನ್ನು ರೂಪಿಸಿದ್ದು, ಎಲ್ಲರ ಸಹಕಾರ ಬೇಕಾಗಿದೆ ಎಂದರು.ಸುರಭಿ ಸೇವಾ ಚಾರಿಟೆಬಲ್ ಟ್ರಸ್ಟ್ನ ಅಧ್ಯಕ್ಷ ಎಸ್.ಜಿ.ರಾಮಚಂದ್ರ ಪ್ರಾಸ್ತಾವಿಕವಾಗಿ ಮಾತನಾಡುದರು.ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸುರಭಿಶ್ರೀ ರಾಜ್ಯ ಪ್ರಶಸ್ತಿ ಮತ್ತು ಸುರಭಿ ಪ್ರಶಸ್ತಿ ಪ್ರದಾನ ಮಾಡಲಾಯಿತು.ರಾಮದಾಸ ಬಿ.ರಾಯ್ಕರ್ ಬೆಂಗಳೂರು, ನಿವೃತ್ತ ಯೋಧ ತುಕಾರಾಂ ಮಂಜುನಾಥ ವೆರ್ಣೇಕರ್, ಮಕ್ಕಳ ತಜ್ಞ ಡಾ.ಶ್ರೀನಾಥ, ರಾಮಕೃಷ್ಣ ಸೋಮರಾಯ ವಿಠ್ಠಲಕರ್ ರಾಣೇಬೆನ್ನೂರು, ಮಂಗಳ ಚಂದ್ರಹಾಸ ಶೇಟ್ ಬೆಂಗಳೂರು, ಕೃಷಿಕ ಸದಾನಂದಗೌಡ ಕಡಸೂರು, ಉದ್ಯಮಿ ಜಾವಿದ್ ಅಹಮದ್, ಪುರೋಹಿತ ನಾರಾಯಣ ಭಟ್ ಮರಾಠೆ, ಜಿ.ಪಂ. ಮಾಜಿ ಸದಸ್ಯ ಗುರುಕುಮಾರ ಪಾಟೀಲ್, ಟ್ರಸ್ಟ್ನ ಮಹಿಳಾ ಘಟಕದ ಅಧ್ಯಕ್ಷೆ ವಾಣಿಶ್ರೀ, ಶ್ವೇತಾ ಮೊದಲಾದವರು ಹಾಜರಿದ್ದರು.