ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಚಾಂಶುಗರ್ಸ್ ಕಾರ್ಖಾನೆಯಲ್ಲಿ ಪ್ರಸಕ್ತ ಸಾಲಿನ ಕಬ್ಬು ಅರೆಯುವ ಕಾರ್ಯಕ್ಕೆ ಕಾರ್ಖಾನೆ ಹಿರಿಯ ಉಪಾಧ್ಯಕ್ಷ ಆರ್.ಮಣಿ ಚಾಲನೆ ನೀಡಿದರು.ನಂತರ ಮಾತನಾಡಿದ ಅವರು, ಕಾರ್ಖಾನೆಯಲ್ಲಿ ಪ್ರತಿದಿನ 5000 ಮೆಟ್ರಿಕ್ ಟನ್ ಕಬ್ಬನ್ನು ನುರಿಸುವ ಸಾಮರ್ಥ್ಯ ಹೊಂದಿದೆ. ಈ ಸಾಲಿನಲ್ಲಿ 7 ಲಕ್ಷ ಮೆಟ್ರಿಕ್ ಟನ್ ಕಬ್ಬು ಅರೆಯುವ ಗುರಿ ಹೊಂದಿದೆ. 2026-27ನೇ ಸಾಲಿಗೆ ಕೇಂದ್ರ ಸರ್ಕಾರ ನಿಗದಿ ಪಡಿಸಿರುವ ನ್ಯಾಯಯುತ ಮತ್ತು ಲಾಭದಾಯಕ ಬೆಲೆಯನ್ನು ನೀಡಲು ಬದ್ಧವಾಗಿದೆ ಎಂದು ಭರವಸೆ ನೀಡಿದರು.
ಸಕಾಲದಲ್ಲಿ ಕಬ್ಬು ಕಟಾವು ಮಾಡಲು ರೈತರಿಗೆ ಅನುವಾಗುವಂತೆ ಬಳ್ಳಾರಿ, ತಮಿಳುನಾಡು ಮತ್ತು ಮಹಾರಾಷ್ಟ್ರ ಭಾಗಗಳಿಂದ ಕಾರ್ಮಿಕರ ವ್ಯವಸ್ಥೆ ಮಾಡಲಾಗಿದೆ. ಸೂಕ್ತ ದರದಲ್ಲಿ ಕಬ್ಬು ಕಟಾವು ಮಾಡಲು ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದರು.ಪ್ರಸ್ತುತ ಸಾಲಿನಲ್ಲಿ ಸರಬರಾಜು ಆಗುವ ಕಬ್ಬಿಗೆ ಸಕಾಲದಲ್ಲಿ ಹಣ ಬಟವಾಡೆಗೆ ಕ್ರಮ ವಹಿಸಲಾಗಿದೆ. ಕಬ್ಬು ನಾಟಿ ಮಾಡಲು ಕಾರ್ಖಾನೆ ವತಿಯಿಂದ ರೈತರಿಗೆ ಬಡ್ಡಿ ರಹಿತ ಸಾಲದ ರೂಪದಲ್ಲಿ ಎಕರೆಗೆ 2.5 ಯಿಂದ 3 ಟನ್ ಬಿತ್ತನೆ ಕಬ್ಬು ನೀಡಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಮಳೆ ಇಲ್ಲದೆ ರೈತರ ಕಬ್ಬು ಒಣಗುತ್ತಿರುವ ಹಿನ್ನೆಲೆ ರೈತರ ಹಿತ ದೃಷ್ಟಿಯಿಂದ ಕಬ್ಬು ನುರಿಸಲು ಆರಂಭಿಸಲಾಗಿದೆ. ರೈತರಿಗೆ ನೀಡಬೇಕಾಗಿರುವ ₹50 ನೀಡುವ ವಿಚಾರ ನ್ಯಾಯಾಲಯದಲ್ಲಿರುವುದರಿಂದ ಶೀಘ್ರ ಇತ್ಯರ್ಥವಾದರೆ ರೈತರ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು.
ಇದಕ್ಕೂ ಮುನ್ನ ಗಣಪತಿ ಹೋಮ, ಚಾಮುಂಡೇಶ್ವರಿ ಪೂಜೆ ನಡೆಸಿ ಪೂರ್ಣಾಹುತಿ ನೀಡಿದ ನಂತರ ಕಾರ್ಖಾನೆಗೆ ಚಾಲನೆ ನೀಡಿ, ಪ್ರಸಾದ ವಿನಿಯೋಗ ನಡೆಯಿತು. ಕಾರ್ಖಾನೆಗೆ ಮೊದಲು ಕಬ್ಬು ತಂದ ಎತ್ತಿನಗಾಡಿ, ಟ್ರ್ಯಾಕ್ಟರ್, ಲಾರಿಗೆ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಖಾನೆ ಹಿರಿಯ ಪ್ರಧಾನ ವ್ಯವಸ್ಥಾಪಕ ಸೆಂಥಿಲ್, ಪ್ರಧಾನ ವ್ಯಸ್ಥಾಪಕ ಎಂ.ರವಿ, ಕಬ್ಬು ವಿಭಾಗದ ಸಹಾಯಕ ಪ್ರಧಾನ ವ್ಯವಸ್ಥಾಪಕ ಮಹದೇವು ಪ್ರಭು, ಸಹಾಯಕ ಪ್ರಧಾನ ವ್ಯವಸ್ಥಾಪಕ ಮಣಿಮಾರನ್, ಆಡಳಿತ ವಿಭಾಗದ ಅಧಿಕಾರಿಗಳಾದ ನಿತೇಶ್, ನಿಂಗಯ್ಯ ಸೇರಿದಂತೆ ರೈತ ಮುಖಂಡರು ಉಪಸ್ಥಿತರಿದ್ದರು.