ಪಾಂಡವಪುರ: ಸಾಲಬಾಧೆ ತಾಳಲಾರದೆ ರೈತರೊಬ್ಬರು ತಮ್ಮ ಜಮೀನಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಕನಗನಮರಡಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಾಗರಾಜು ಪುತ್ರ ಕೆ.ಎನ್. ಹರೀಶ್ (47) ಮೃತರು. ಹರೀಶ್ ಅವರು ವ್ಯವಸಾಯದ ಉದ್ದೇಶಕ್ಕಾಗಿ ಬ್ಯಾಂಕ್‌ಗಳಲ್ಲಿ ಸಾಲ, ಅಲ್ಲದೆ ಪರಿಚಯಸ್ಥರ ಬಳಿ ಕೈ ಸಾಲವನ್ನು ಕೂಡ ಮಾಡಿದ್ದರು ಎನ್ನಲಾಗಿದೆ. ಈ ಸಂಬಂಧ ದೂರು ನೀಡಿರುವ ತಂದೆ ನಾಗರಾಜು ಅವರು, ಗುರುವಾರ ತನ್ನ ಪುತ್ರ ಕೆ.ಎನ್. ಹರೀಶ್ ಪಾಂಡವಪುರದಲ್ಲಿ ಭೇಟಿಯಾಗಿ ನಾನು ಮಾಡಿರುವ ಬ್ಯಾಂಕ್ ಸಾಲದ ಬಗ್ಗೆ ಬ್ಯಾಂಕಿನವರು ಕರೆದಿದ್ದು, ಸಾಲವನ್ನು ತೀರಿಸುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ತಿಳಿಸಿದ್ದ. ತಾನು ಬೆಳೆದ ಕಬ್ಬಿನ ಬೆಳೆ ನೀರು ಇಲ್ಲದೆ ಒಣಗಿ ಹೋಗಿ ನಷ್ಟವುಂಟಾಗಿದೆ. ವ್ಯವಸಾಯದ ಉದ್ದೇಶಕ್ಕಾಗಿ ತಾನು ಮಾಡಿರುವ ಸಾಲವನ್ನು ತೀರಿಸುವ ವಿಚಾರದಲ್ಲಿ ಮನನೊಂದು ತನ್ನ ಸ್ವ ಜಮೀನಿನಲ್ಲಿ ತೇಗದ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪಾಂಡವಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪಾಂಡವಪುರ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಹರೀಶ್ ಅವರ ಮೃತದೇಹವನ್ನು ಕುಟುಂಬದವರಿಗೆ ನೀಡಲಾಯಿತು.