ಸಾರಾಂಶ
ಕೊಪ್ಪಳ(ಯಲಬುರ್ಗಾ): ಬೇಸಿಗೆ ಶಿಬಿರವು ಮಕ್ಕಳಲ್ಲಿ ಕ್ರೀಯಾಶೀಲ ಚಟುವಟಿಕೆ ಹೆಚ್ಚಿಸುತ್ತದೆ ಎಂದು ಪಿಡಿಒ ವೀರಭದ್ರಗೌಡ ಮೂಲಿಮನಿ ಹೇಳಿದರು.
ಜಿಲ್ಲೆಯ ಯಲಬುರ್ಗಾ ತಾಲೂಕಿನ ಮುಧೋಳ ಗ್ರಾಮದಲ್ಲಿ ಗ್ರಂಥಾಲಯ ಮಾಹಿತಿ ಕೇಂದ್ರದಲ್ಲಿ ಗ್ರಾಪಂ ಹಾಗೂ ಗ್ರಂಥಾಲಯ ಸಹಯೋಗದಲ್ಲಿ ಬೇಸಿಗೆಯಲ್ಲಿ ನಡೆದಿದ್ದ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಮಕ್ಕಳಲ್ಲಿ ಓದುವ ಹವ್ಯಾಸ ಕ್ರಿಯಾಶೀಲತೆ ಉತ್ತೇಜಿಸಿ ವ್ಯಕ್ತಿತ್ವ ರೂಪಿಸಲು ಗ್ರಾಪಂ ಮಟ್ಟದಲ್ಲಿ ಬೇಸಿಗೆ ಶಿಬಿರ ಆಯೋಜಿಸಲಾಗಿತ್ತು. ಅದರ ಯಶಸ್ಸಿಗೆ ಪೋಷಕರು ಕೈಜೋಡಿಸಿದ್ದು ಸಂತಸ ತಂದಿದೆ ಎಂದರು.ಶಾಲಾ ಮಕ್ಕಳು, ಅದರಲ್ಲೂ ಗ್ರಾಮೀಣ ಭಾಗದವರಿಗೆ ತಮ್ಮ ದೈನಂದಿನ ಚಟುವಟಿಕೆಯ ಜತೆಗೆ ಉತ್ತಮ ಹವ್ಯಾಸ ರೂಪಿಸಲು ರಾಜ್ಯ ಸರ್ಕಾರ ಬೇಸಿಗೆ ಶಿಬಿರ ಆಯೋಜಿಸಿತ್ತು. ಮಕ್ಕಳಲ್ಲಿ ಓದುವ ಹವ್ಯಾಸ ರೂಢಿಸುವುದು, ನೈತಿಕ, ನಾಯಕತ್ವ ವಿಷಯ, ಅಂಕಿ-ಸಂಖ್ಯೆ, ವಿಜ್ಞಾನ ವಿಷಯ, ಕಾರ್ಯಯೋಜನೆ ರೂಪಿಸುವುದು, ಕೌಶಲ ಅಭಿವೃದ್ಧಿಪಡಿಸಿಕೊಳ್ಳುವುದನ್ನು ಶಿಬಿರದಲ್ಲಿ ಹೇಳಿಕೊಡಲಾಗಿದೆ. ವಿಜ್ಞಾನ, ಗಣಿತ ಚಟುವಟಿಕೆ ನಡೆಸಲು ಸ್ಥಳೀಯ ಶಿಕ್ಷಕರು, ಸ್ವಯಂ ಪ್ರೇರಿತ ಸಂಪನ್ಮೂಲ ವ್ಯಕ್ತಿಗಳನ್ನು ಬಳಸಿಕೊಂಡಿದ್ದೇವೆ. ಗ್ರಂಥಾಲಯದ ಪರಿಚಯ ಮಾಡಿಸುವುದು, ಎಲ್ಲರಿಂದಲೂ ಗಟ್ಟಿ ಓದು, ಬರೆಯುವ ಸಾಮರ್ಥ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ ಹೆಚ್ಚಿಸುವ ಚಟುವಟಿಕೆ ಕೈಗೊಳ್ಳಲಾಗಿದೆ. ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ ಹಲವಾರು ಯೋಜನೆ ಸರ್ಕಾರ ಜಾರಿಗೆ ತಂದಿದೆ ಎಂದರು.
ಗ್ರಾಪಂ ಅಧ್ಯಕ್ಷೆ ಮಮತಾಜಬೇಗಂ ಹಿರೇಮನಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಸದಸ್ಯರಾದ ಬಾಷುಸಾಬ್ ಆರಬಳ್ಳಿನ, ಕಳಕಪ್ಪ ಹಿರೇಹಾಳ, ದುರಗಪ್ಪ ವಡ್ಡರ, ಚನ್ನಬಸಯ್ಯ ಪೂಜಾರ, ಪ್ರಾಚಾರ್ಯ ಬಸವರಾಜ, ಅಂಗನವಾಡಿ ಕಾರ್ಯಕರ್ತೆಯರಾದ ಬಸಮ್ಮ ಉಣಚಗೇರಿ, ರತ್ನಾ ದೇವಕ್ಕಿ, ಹುಸೇನಸಾಬ್ ಹಿರೇಮನಿ, ಮಲ್ಲಪ್ಪ ಜತ್ತಿ, ಶಿವಶರಣಪ್ಪ ಬಳಿಗಾರ, ರುದ್ರಪ್ಪ ಓಲಿ, ಈರಮ್ಮ ಮಂಡಲಗೇರಿ, ಶಾಂತಾ ಹಲಗೇರಿ, ವೀರಭದ್ರಪ್ಪ ನಿಡಗುಂದಿ, ನವೀನ ನಾಯಕ್, ಕರಸಿದ್ದಪ್ಪ ತಮ್ಮಿನಾಳ, ಮೈಲಾರಪ್ಪ, ನಿಂಗಪ್ಪ ಪಲ್ಲೇದ ಇದ್ದರು.ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಹಾಗೂ ಭಾಗವಹಿಸಿದ ಎಲ್ಲ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.