ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ನಾಡಿನಾದ್ಯಂತ ಪ್ರಭು ಯೇಸು ಕ್ರಿಸ್ತರ ಪುನರುತ್ಥಾನದ ಪಾಸ್ಕ ಕಾಲದ (ಈಸ್ಟರ್) ಹಬ್ಬವು ಕ್ರೈಸ್ತ ಬಾಂಧವರಿಗೆ ಪ್ರಮುಖ ಆಚರಣೆಯಾಗಿದೆ. ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯ ವತಿಯಿಂದ ಸಂತ ಮೇರಿ ಶಾಲೆ ಆವರಣದಲ್ಲಿ 7 ದಿನಗಳಿಂದಲೂ ವಿಶೇಷ ರೀತಿಯಲ್ಲಿ ಬಲಿ ಪೂಜೆ ಹಾಗೂ ವಿಶೇಷ ಪ್ರಾರ್ಥನೆ, ಆರ್ಶಿವಚನಗಳನ್ನು ಮೈಸೂರು ಜಹಗೇರಿ ಧರ್ಮ ಕೇಂದ್ರದ ಧರ್ಮಗುರುಗಳಾದ ರೇ.ಫಾ. ಪ್ರೇಮ್‌ ಕುಮಾರ್, ಸಂತ ಅಂತೋಣಿ ದೇವಾಲಯದ ಧರ್ಮಗುರುಗಳಾದ ರೇ.ಫಾ. ವಿಜಯ ಕುಮಾರ್, ಕ್ರೈಸ್ತ ಭಗಿನಿಯರು ಹಾಗೂ ಕ್ರೈಸ್ತ ಬಾಂಧವರು ಶ್ರದ್ಧಾ ಭಕ್ತಿಯಿಂದ ನೆರವೇರಿಸಿದರು.

ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು ಈಸ್ಟರ್ (ಪಾಸ್ಕ) ಹಬ್ಬವನ್ನು ಸಡಗರ ಸಂಭ್ರಮದಿಂದ ಮನೆಗಳಲ್ಲಿ ಆಚರಿಸಿಕೊಂಡರು.

ಭುವಿಯಲ್ಲಿ ಮಾನವರ ರಕ್ಷಣೆ ಮಾಡುವ ಸಲುವಾಗಿ ಪ್ರಭು ಯೇಸು ಕ್ರಿಸ್ತರು ಶಿಲುಬೆಯ ಮರದಲ್ಲಿ ಪ್ರಾಣ ಆರ್ಪಿಸಿದರು. ಅವರು ನುಡಿದಂತೆ 3ನೇ ದಿನ ಸಮಾಧಿಯಿಂದ ಪುನರುತ್ಥಾನಗೊಂಡಿರುವುದನ್ನು ಕ್ರೈಸ್ತ ಬಾಂಧವರು ಕ್ರಿಸ್ತರು ಮರಣವನ್ನು ಜಯಿಸಿದ ಹಬ್ಬವಾಗಿ ಆಚರಿಸುತ್ತಾರೆ. ಶನಿವಾರ ರಾತ್ರಿ 11 ಗಂಟೆಗೆ ಸಂತ ಅಂತೋಣಿ ಶಾಲಾ ಆವರಣದಲ್ಲಿ ಮೈಸೂರಿನ ಜಹಗೇರಿ ಧರ್ಮ ಕೇಂದ್ರದ ಧರ್ಮಗುರು ರೇ.ಫಾ. ಪ್ರೇಮ್‌ ಕುಮಾರ್ ಹಾಗೂ ಸಂತ ಅಂತೋಣಿ ದೇವಾಲಯದ ಧರ್ಮಗುರುಗಳಾದ ರೇ.ಪಾ. ವಿಜಯ ಕುಮಾರ್ ಅವರು ಜೇನು ಮೇಣದಿಂದ ತಯಾರಿಸಿದ ದೊಡ್ಡ ಮೊಂಬತ್ತಿಯನ್ನು ಆಶೀರ್ವದಿಸಿ ಅದನ್ನು ಬೆಳಗಿಸಿ, ಭಕ್ತಾಧಿಗಳೊಂದಿಗೆ ಮೆರವಣಿಗೆ ಮೂಲಕ ಸಂತ ಮೇರಿ ಶಾಲಾ ಆವರಣದ ಪೀಠದಲ್ಲಿ ತಂದು ಪ್ರತಿಷ್ಠಾಪಿಸಿ ಆಚರಣೆಗೆ ಮುನ್ನುಡಿ ಇಡಲಾಯಿತು.

ನಂತರ ನಡೆದ ಪ್ರಾರ್ಥನಾ ಕೂಟ ಹಾಗೂ ಆಡಂಬರ ದಿವ್ಯ ಬಲಿಪೂಜೆಯಲ್ಲಿ ಸಮಾಧಿಗೊಳಿಸಲಾದ ಯೇಸುವು ಪುನರ್‌ತ್ಥಾನಗೊಂಡ ರೂಪಕ ದೃಶ್ಯದ ಅಂಗವಾಗಿ ಪ್ರಭು ಕ್ರಿಸ್ತರ ಪ್ರತಿಮೆಯನ್ನು ಪ್ರತಿಷ್ಠಾಪಿಸಿ ಬಲಿಪೂಜೆ ಸಮರ್ಪಿಸಿದರು. ದಿವ್ಯ ಬಲಿಪೂಜೆಯಲ್ಲಿ ಸಂತ ಕ್ಲಾರ ಕಾನ್ವೆಂಟಿನ ಕನ್ಯಾಸ್ತ್ರೀಯರ ಗಾಯನ ವೃಂದದೊಂದಿಗೆ ನೆರೆದಿದ್ದ ಭಕ್ತಾಧಿಗಳು ದೇವಾಲಯದಲ್ಲಿ ಪುನರುತ್ಥಾನದ ಬಲಿಪೂಜೆ ಪ್ರಾರ್ಥನೆಯಲ್ಲಿ ತೊಡಗಿಸಿಕೊಂಡು ನಂತರ ಪ್ರಭು ಯೇಸು ಕ್ರಿಸ್ತರ ಪುನರುತ್ಥಾನದ (ಈಸ್ಟರ್) ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಹಬ್ಬದ ಸಡಗರಕ್ಕೆ ಮುನ್ನುಡಿ ಬರೆದರು. ಈಸ್ಟರ್ ಹಬ್ಬದ ಮೊಟ್ಟೆ ಮತ್ತು ಕಾಫಿಯನ್ನು ನೆರೆದಿದ್ದ ಭಕ್ತಾಧಿಗಳಿಗೆ ವಿತರಿಸಲಾಯಿತು.