ಕನ್ನಡಪ್ರಭ ವಾರ್ತೆ ಟೇಕಲ್
ಕೊಂಡಶೆಟ್ಟಹಳ್ಳಿ ಗ್ರಾಮದ ಸನಾವುಲ್ಲಾ ಖಾನ್, ಮೊಸಿನಾಬೇಗಂ ದಂಪತಿಯ ಪುತ್ರ ತೌಸಿಫ್ ಉಲ್ಲಾ ಈ ಬಾರಿಯ ಕೇಂದ್ರಿಯ ಲೋಕಸೇವಾ ಆಯೋಗ ಪರೀಕ್ಷೆಯಲ್ಲಿ 741ನೇ ರ್ಯಾಂಕ್ ಪಡೆದು ತಾಲೂಕಿಗೆ ಹಾಗೂ ಕೋಲಾರ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.ತೌಸಿಫ್ ಉಲ್ಲಾಖಾನ್ ಮಾಲೂರು ನಗರದ ವಿವೇಕಾನಂದ ಶಾಲೆಯಲ್ಲಿ ತನ್ನ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಪಡೆದು ಅನಂತರ ಕಾಲೇಜು ಶಿಕ್ಷಣವನ್ನು ಕೋಲಾರ ನಗರದ ಮಹಿಳಾ ಸಮಾಜದಲ್ಲಿ ಪಡೆದ ಉನ್ನತ ಶಿಕ್ಷಣಕ್ಕೆ ಬೆಂಗಳೂರಿನ ಆರ್.ವಿ. ಕಾಲೇಜಿನಲ್ಲಿ ಪಡೆದಿದ್ದಾರೆ.ಬಾಲ್ಯದಿಂದಲೂ ಶಿಕ್ಷಣದ ಬಗ್ಗೆ ಹೆಚ್ಚು ಆಸಕಿ ಹೊಂದಿದ್ದ ತೌಸಿಫ್ ಉಲ್ಲಾಖಾನ್ ತಂದೆ-ತಾಯಿ ಮತ್ತು ಕುಟುಂಬಸ್ಥರ ಮಾರ್ಗದರ್ಶನದಂತೆ ಉತ್ತಮ ಶಿಕ್ಷಣವನ್ನು ಪಡೆದಿದ್ದಾರೆ. ತಂದೆ-ತಾಯಿ ತಮಗೆ ಎಷ್ಟೇ ಕಷ್ಟ ಬಂದರೂ ಆತನ ಶಿಕ್ಷಣಕ್ಕೆ ಯಾವುದೇ ರೀತಿ ಕೊರತೆಯಾಗದಂತೆ ನೋಡಿಕೊಂಡು ಉತ್ತಮ ಶಿಕ್ಷಣ ಕೊಡಿಸಿದ್ದಾರೆ.
ತಮ್ಮ ಪರಿಶ್ರಮದಿಂದ ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್ಸಿ) ಪರೀಕ್ಷೆಯಲ್ಲಿ ಮಾಲೂರು ತಾಲೂಕಿನಿಂದ ಮೊದಲಿಗನಾಗಿ, ಕೋಲಾರ ಜಿಲ್ಲೆಯಲ್ಲಿ 5ನೇಯವರಾಗಿ 741ನೇ ರ್ಯಾಂಕ್ ಪಡೆದು ಹೆಸರು ತಂದಿದ್ದಾರೆ.ಈ ಸಂತಸದ ಕ್ಷಣಗಳನ್ನು ಅವರ ತಂದೆ-ತಾಯಿ ಹಾಗೂ ಕುಟುಂಬಸ್ಥರು ಹಂಚಿಕೊಂಡಿದ್ದು, ಮಕ್ಕಳನ್ನು ಕಷ್ಟಪಟ್ಟು ಸಾಕಿ ಉತ್ತಮ ಶಿಕ್ಷಣ ನೀಡುವುದು ಪ್ರತಿಯೊಬ್ಬ ತಂದೆ-ತಾಯಿಗಳ ಕರ್ತವ್ಯವಾಗಿದೆ. ಅದರಂತೆಯೇ ಮಕ್ಕಳು ತಮ್ಮ ತಂದೆ ತಾಯಿಗೆ ಪ್ರತಿಫಲವಾಗಿ ಇಂತಹ ಮಹತ್ವದ ಪರೀಕ್ಷೆಗಳನ್ನು ಬರೆದು ಉನ್ನತ ಶ್ರೇಣಿಯಲ್ಲಿ ಉದ್ಯೋಗಸ್ಥರಾಗಿ, ಉನ್ನತ ಸ್ಥಾನದಲ್ಲಿ ಕಾರ್ಯನಿರ್ವಹಿಸಿ ಬಡಜನತೆಗೆ ಸೇವೆ ಸಲ್ಲಿಸಿದಾಗ ಮಾತ್ರ ತಂದೆ ತಾಯಿಗಳ ಶ್ರಮ ಸಾರ್ಥಕವಾಗುತ್ತದೆ ಎಂದಿದ್ದಾರೆ.
ಪ್ರಸ್ತುತ ಕುಟುಂಬ ಬಂಗಾರಪೇಟೆಯಲ್ಲಿ ವಾಸವಿದೆ. ಮೊದಲ ಮಗ ತೌಸಿಫ್ ಉಲ್ಲಾಖಾನ್ ಯುಪಿಸ್ಸಿಯಲ್ಲಿ ಸಾಧನೆ ಮಾಡಿದರೆ, ಎರಡನೇ ಮಗ ಇಂಜಿನಿಯರಿಂಗ್ ಪದವೀಧರ, ಮೂರನೇ ಮಗ ಎಂಬಿಬಿಎಸ್ ಡಾಕ್ಟರ್ ಆಗಿ ಹೊಸಕೋಟೆ ಎಂವಿಜೆ ಆಸ್ಪತ್ರೆಯಲ್ಲಿ ತರಬೇತಿಯಲ್ಲಿದ್ದಾರೆ. ಒಟ್ಟಾರೆ ಈ ಕುಟುಂಬದಲ್ಲಿ ಶಿಕ್ಷಣಕ್ಕೆ ಹೆಚ್ಚು ಒತ್ತನ್ನು ನೀಡಿದ್ದಾರೆ.