ಸಾರಾಂಶ
ಬಿಜೆಪಿ ಸರ್ಕಾರ ಬೆಲೆ ಏರಿಕೆ, ಹಣ ದುಬ್ಬರ, ರುಪಾಯಿ ಅಪಮೌಲ್ಯದ ಬಗ್ಗೆ ಚಕಾರವೆತ್ತದೆ ಭಾವನಾತ್ಮಕ ವಿಷಯಗಳನ್ನು ಮುನ್ನೇಲೆಗೆ ತಂದು ಜನರಿಗೆ ದ್ರೋಹ ಮಾಡಿದ್ದಾರೆ ಎಂದು ರಾಯಚೂರಿನಲ್ಲಿ ನಡೆದ ‘ಬಿಜೆಪಿ ಸೋಲಿಸಿ ಭಾರತ ಉಳಿಸಿ’ ರಾಜಕೀಯ ಸಮಾವೇಶದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷದ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ ಹೇಳಿದರು.
ಕನ್ನಡಪ್ರಭ ವಾರ್ತೆ ರಾಯಚೂರು
2014 ಮತ್ತು 19 ರ ಲೋಕಸಭಾ ಚುನಾವಣೆಯಲ್ಲಿ ಸುಳ್ಳಹೇಳಿ ಅಧಿಕಾರ ನಡೆಸಿರುವ ಪ್ರಧಾನಿ ನರೇಂದ್ರ ಮೋದಿಗೆ ತಕ್ಕ ಪಾಠ ಕಲಿಸಲು ಬಿಜೆಪಿ ಸೋಲಿಸಬೇಕು ಎಂದು ಭಾರತ ಕಮ್ಯುನಿಸ್ಟ್ ಪಕ್ಷದ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ ಹೇಳಿದರು.ಭಾರತ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಮಂಡಳಿಯಿಂದ ‘ಬಿಜೆಪಿ ಸೋಲಿಸಿ ಭಾರತ ಉಳಿಸಿ’ ಘೋಷಣೆಯೊಂದಿಗೆ ಸ್ಥಳೀಯ ಸ್ವಾಗತ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಾಜಕೀಯ ಸಮಾವೇಶವನ್ನು ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಕುರಿತು ರಚಿಸಿರುವ ಕೈಪಿಡಿಯನ್ನು ಬಿಡುಗಡೆ ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಬಿಜೆಪಿ ಸರ್ಕಾರ ಬೆಲೆ ಏರಿಕೆ, ಹಣ ದುಬ್ಬರ, ರುಪಾಯಿ ಅಪಮೌಲ್ಯದ ಬಗ್ಗೆ ಚಕಾರವೆತ್ತದೆ ಭಾವನಾತ್ಮಕ ವಿಷಯಗಳನ್ನು ಮುನ್ನೇಲೆಗೆ ತಂದು ಜನರಿಗೆ ದ್ರೋಹ ಮಾಡಿದ್ದಾರೆ ಎಂದರು.
ಮಾಜಿ ಸಚಿವ ತನ್ವೀರ್ ಸೇಠ್ ಮಾತನಾಡಿ, ಬಿಜೆಪಿ ನೇತೃತ್ವದ ಸರ್ಕಾರ ೧೦ ವರ್ಷಗಳಲ್ಲಿ ಎಲ್ಲ ವರ್ಗದ ಜನಸಮುದಾಯಗಳು ಸಂಕಟ ಅನುಭವಿಸಿವೆ. ಶ್ರೀಮಂತರ ೧೬ ಸಾವಿರ ಕೋಟಿ ಸಾಲ ಮನ್ನಾ ಮಾಡಿದಲ್ಲದೇ ಸಾರ್ವಜನಿಕ ಆಸ್ತಿಗಳನ್ನು ಖಾಸಗಿ ಕಂಪನಿಗಳಿಗೆ ಮಾರಾಟ ಮಾಡುವ ಹುನ್ನಾರದಿಂದ ಬಂಡವಾಳ ತೊಡಗಿಸಲು ಅವಕಾಶ ಮಾಡಿಕೊಟ್ಟಿರುವುದು ಅಕ್ಷಮ್ಯವಾಗಿದೆ ಎಂದರು.ವಕ್ಫ್ ಬೋರ್ಡ್ ಅಧ್ಯಕ್ಷ ಮೌಲಾನ ಶರೀಫ್ ಖಾನ್, ಕಾಂಗ್ರೆಸ್ ಮುಖಂಡ ಶಾಲಂ, ಸಿಪಿಐ ಮುಖಂಡರಾದ ವೆಂಕೋಬ ಮಿಯಾಪುರ, ವೆಂಕನಗೌಡ ಗದ್ರಟಗಿ, ಚನ್ನಮ್ಮ ಮಾನ್ವಿ, ಸಂಗಯ್ಯ ಹಿರೇಮಠ, ಪೀರಾ, ಆನಂದ, ಸಿದ್ರಾಮಯ್ಯ ಸ್ವಾಮಿ ಮಾನ್ವಿ, ಶಾಂತಪ್ಪ ಅನ್ವರಿ, ಮಹಿನುದ್ದೀನ್ ಹಟ್ಟಿ, ಎಲ್ಲಪ್ಪ ಇದ್ದರು. ಡಿ.ಎಚ್.ಕಂಬಳಿ ನಿರೂಪಿಸಿದರು. ಸಿಪಿಐ ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ ಕ್ಯಾತನಟ್ಟಿ ಅಧ್ಯಕ್ಷತೆ ವಹಿಸಿದ್ದರು.