ರಾಮನಗರ: ನಗರದ 2ನೇ ವಾರ್ಡ್ ವ್ಯಾಪ್ತಿಯ ವಿನಾಯಕ ನಗರ ಬಡಾವಣೆಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಸೋಮವಾರ ಭೂಮಿಪೂಜೆ ನೆರವೇರಿಸಿದರು.
ವಿನಾಯಕ ನಗರ ಬಡಾವಣೆಯ ಗಣಪತಿ ದೇವಾಲಯದ ಬಳಿ ಸಿಸಿ ರಸ್ತೆ ಕಾಮಗಾರಿಗೆ ಪೂಜೆ ಸಲ್ಲಿಸಿದ ಕೆ.ಶೇಷಾದ್ರಿ, ಕಳೆದ 10 ರಿಂದ 12 ವರ್ಷಗಳಿಂದ ಈ ಭಾಗದ ನಾಗರಿಕರು ರಸ್ತೆ ನಿರ್ಮಾಣಕ್ಕಾಗಿ ಒತ್ತಾಯಿಸುತ್ತಲೇ ಬಂದಿದ್ದರು. ಆದರೆ, ಅನೇಕ ಕಾರಣಗಳಿಂದ ಅದು ಸಾಧ್ಯವಾಗಿರಲಿಲ್ಲ. ಇದೀಗ ಸಿಸಿ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಲಾಗುತ್ತಿದೆ. ನಗರೋತ್ಥಾನ ಯೋಜನೆ ಅಡಿಯಲ್ಲಿ 1.36 ಕೋಟಿ ರು. ವೆಚ್ಚದಲ್ಲಿ ವಾಟರ್ ಟ್ಯಾಂಕ್ ವೃತ್ತದಿಂದ ಕಾಮನಗುಡಿ, ರಾಮದೇವರ ದೇವಸ್ಥಾನದಿಂದ-ರಾಘವೇಂದ್ರ ದೇವಸ್ಥಾನದವರೆಗೆ ರಸ್ತೆ ಅಭಿವೃದ್ಧಿ ಪಡಿಸಲಾಗುತ್ತಿದೆ. ಆ ಅನುದಾನದಲ್ಲಿಯೇ ವಿನಾಯಕ ನಗರದ ಆರು ರಸ್ತೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದರು.ನಗರದ ಸರ್ವಾಂಗೀಣ ಅಭಿವೃದ್ಧಿಗೆ ನಗರಸಭೆ ಬದ್ಧವಾಗಿದ್ದು, ಯುಐಡಿಎಫ್ ಹಾಗೂ ನಗರೋತ್ಥಾನ ಯೋಜನೆ ಅಡಿಯಲ್ಲಿ ಆದ್ಯತೆ ಮೇರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ನಗರದ ಎಲ್ಲ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ತಿಳಿಸಿದರು.
ರಸ್ತೆ ನಿರ್ಮಾಣ ಕಾಮಗಾರಿಯ ಗುಣಮಟ್ಟದಲ್ಲಿ ರಾಜಿ ಪ್ರಶ್ನೆಯೇ ಇಲ್ಲ. ಗುತ್ತಿಗೆದಾರರು ಸ್ಥಳೀಯರೇ ಆಗಿರುವುದರಿಂದ ಕಾಮಗಾರಿಯಲ್ಲಿ ಗುಣಮಟ್ಟ ಕಾಪಾಡುವ ನಂಬಿಕೆ ಇದೆ. ಇಲ್ಲಿವರೆಗೆ ಅವರು ನಿರ್ವಹಿಸಿರುವ ಕಾಮಗಾರಿಯಲ್ಲಿ ಎಲ್ಲೂ ಅಪಸ್ವರ ಕೇಳಿ ಬಂದಿಲ್ಲ. ಎಂಜಿನಿಯರ್ ಗಳು ಗುಣಮಟ್ಟದ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕು ಎಂದು ಕೆ.ಶೇಷಾದ್ರಿ ಸೂಚನೆ ನೀಡಿದರು.ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಗೋವಿಂದರಾಜು, ಎಇಇ ವಿಶ್ವನಾಥ್ , ಜೆಇ ನಿರ್ಮಲಾ, ರಾಮನಗರ ಟಿಎಪಿಸಿಎಂಎಸ್ ಅಧ್ಯಕ್ಷ ದೊಡ್ಡಿ ಸುರೇಶ್ , ಮುಖಂಡರಾದ ರಾಜು, ಶಿವರಾಜು, ಲೋಕೇಶ್ , ಮಲ್ಲಿಕಾರ್ಜುನ್ ಮತ್ತಿತರರು ಹಾಜರಿದ್ದರು.
6ಕೆಆರ್ ಎಂಎನ್ 2.ಜೆಪಿಜಿ
ರಾಮನಗರದ ವಿನಾಯಕನಗರ ಬಡಾವಣೆಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಭೂಮಿ ಪೂಜೆ ನೆರವೇರಿಸಿದರು.