ಜನೌಷಧಿ ಕೇಂದ್ರಗಳ ಬಂದ್‌ಗೊಳಿಸುವ ಕ್ರಮ ಖಂಡನೀಯ

| Published : May 30 2025, 11:56 PM IST

ಸಾರಾಂಶ

ಚನ್ನಗಿರಿ: ಬಡಜನರಿಗೆ ಕಡಿಮೆ ಮೊತ್ತದಲ್ಲಿ ಗುಣಮಟ್ಟದ ಔಷಧಿಗಳು ದೊರೆಯಲಿ ಎಂಬ ಉದ್ದೇಶದಿಂದ ಪ್ರಧಾನಮಂತ್ರಿ ಅವರು ಎಲ್ಲಾ ರಾಜ್ಯಗಳಲ್ಲಿ ಜನೌಷಧಿ ಕೇಂದ್ರಗಳನ್ನು ಸ್ಥಾಪಿಸಿದ್ದಾರೆ. ಆದರೆ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೇಸ್ ಸರ್ಕಾರ ಈ ಕೇಂದ್ರಗಳನ್ನು ಮುಚ್ಚಿಸಲು ಮುಂದಾಗಿರುವುದು ಖಂಡನೀಯ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಮಲಹಾಳ್ ಡಿ.ಸಿ. ಕುಮಾರಸ್ವಾಮಿ ಹೇಳಿದರು.

ಚನ್ನಗಿರಿ: ಬಡಜನರಿಗೆ ಕಡಿಮೆ ಮೊತ್ತದಲ್ಲಿ ಗುಣಮಟ್ಟದ ಔಷಧಿಗಳು ದೊರೆಯಲಿ ಎಂಬ ಉದ್ದೇಶದಿಂದ ಪ್ರಧಾನಮಂತ್ರಿ ಅವರು ಎಲ್ಲಾ ರಾಜ್ಯಗಳಲ್ಲಿ ಜನೌಷಧಿ ಕೇಂದ್ರಗಳನ್ನು ಸ್ಥಾಪಿಸಿದ್ದಾರೆ. ಆದರೆ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೇಸ್ ಸರ್ಕಾರ ಈ ಕೇಂದ್ರಗಳನ್ನು ಮುಚ್ಚಿಸಲು ಮುಂದಾಗಿರುವುದು ಖಂಡನೀಯ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಮಲಹಾಳ್ ಡಿ.ಸಿ. ಕುಮಾರಸ್ವಾಮಿ ಹೇಳಿದರು.

ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಶುಕ್ರವಾರ ಕಾಂಗ್ರೆಸ್ ಸರ್ಕಾರ ವಿರುದ್ಧ ತಾಲೂಕು ಬಿಜೆಪಿ ಹಮ್ಮಿಕೊಂಡಿದ್ದ ಮೌನ ಪ್ರತಿಭಟನೆ ನೇತೃತ್ವ ವಹಿಸಿ ಅವರು ಮಾತನಾಡಿದರು. ದೇಶದಲ್ಲಿನ ಎಲ್ಲ ಜನರ ಆರೋಗ್ಯದ ದೃಷ್ಠಿ ಮತ್ತು ಕಡಿಮೆ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಔಷಧಿಗಳನ್ನು ಜನರಿಗೆ ನೀಡುವ ಉದ್ದೇಶದಿಂದ ಜನೌಷಧಿ ಕೇಂದ್ರಗಳನ್ನು ತೆರೆಯಲಾಗಿದೆ. ಆದರೆ, ಈ ಕೇಂದ್ರಗಳ ಮುಚ್ಚಿಸುವ ಮೂಲಕ ಕಾಂಗ್ರೆಸ್ ಸರ್ಕಾರ ಜನರ ಜೀವನದ ಜೊತೆ ಆಟ ವಾಡುತ್ತಿದೆ ಎಂದ ಅವರು, ದೇಶದ ಭದ್ರತೆ ಮತ್ತು ಜನರ ಕಾಳಜಿಗೆ ಕಾಂಗ್ರೆಸ್ ಸರ್ಕಾರ ಮಾರಕವಾಗಿದೆ ಎಂದು ಕಿಡಿಕಾರಿದರು.

ಬಿಜೆಪಿ ಮುಖಂಡ ಪಿ.ಬಿ.ನಾಯಕ ಮಾತನಾಡಿ, ಭಾರತ ದೇಶ ನರೇಂದ್ರ ಮೋದಿ ನೇತೃತ್ವದಲ್ಲಿ ಬಲಗೊಳ್ಳುತ್ತಿದೆ. ಇದನ್ನು ಸಹಿಸಲಾರದ ಕಾಂಗ್ರೆಸ್ ಸರ್ಕಾರ ಕೇಂದ್ರ ಸರ್ಕಾರದ ಜನಪ್ರಿಯ ಯೋಜನೆಗಳನ್ನು ರದ್ದುಪಡಿಸುತ್ತಿದೆ. ಸರ್ಕಾರದಲ್ಲಿ ಈಗಾಗಲೇ ಖಜಾನೆ ಖಾಲಿಯಾಗಿದೆ. ಹಣವನ್ನು ಸಂಗ್ರಹಿಸಲು ಬಾರ್‌ಗಳಿಗೆ ಲೈಸನ್ಸ್ ಕೊಡುತ್ತಿದೆ. ಆದರೆ, ಜನೋಪಯೋಗಿ ಜನೌಷಧಿ ಕೇಂದ್ರಗಳನ್ನು ಮುಚ್ಚಿಸುತ್ತಿರುವ ಕ್ರಮ ಖಂಡನೀಯ. ರಾಜ್ಯ ಸರ್ಕಾರ ಜನಔಷಧಿ ಕೇಂದ್ರವನ್ನು ಮುಚ್ಚಿಸಿದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರದ ವಿರುದ್ಧ ಜನತೆ ದಂಗೆ ಏಳಲಿದ್ದಾರೆ ಎಂದರು.

ಪ್ರತಿಭಟನೆಯಲ್ಲಿ ತಾಲೂಕು ಮುಖಂಡರಾದ ದಿಗ್ಗೇನಹಳ್ಳಿ ನಾಗರಾಜ್, ತರಕಾರಿ ಮಂಜುನಾಥ್, ಬುಳ್ಳಿ ಗಣೇಶ್, ತಾಲೂಕು ಯುವ ಮೋರ್ಚಾ ಮಾಜಿ ಅಧ್ಯಕ್ಷ ಹರೋನಹಳ್ಳಿ ಮಲ್ಲಿಕಾರ್ಜುನ್, ಪುರಸಭಾ ಸದಸ್ಯರಾದ ಪಟ್ಲಿ ನಾಗರಾಜ್, ನಂಜುಂಡಪ್ಪ, ಸಿ.ಆರ್. ಅಣ್ಣಯ್ಯ, ಕಾಯಿ ಮಂಜುನಾಥ್, ಕುಮಾರಪ್ಪ, ಪಾರಿ ಪರಮೇಶ್, ಪಿ.ಲೋಹಿತ್ ಕುಮಾರ್ ಮೊದಲಾದವರು ಹಾಜರಿದ್ದರು.