ರಾಮನಗರ: ದೇಶದ ಮೊದಲ ಅತ್ಯಾಧುನಿಕ ಕೃತಕ ಬುದ್ಧಿಮತ್ತೆ ಆಧಾರಿತ ವಿಶ್ವದರ್ಜೆಯ ಎಐ ಸಿಟಿ (ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆ - ಬಿಡದಿ ಟೌನ್ ಶಿಪ್ ) ನಿರ್ಮಾಣದಿಂದ ಬೆಂಗಳೂರು ದಕ್ಷಿಣ ಜಿಲ್ಲೆಯ ಆರ್ಥಿಕ ಸ್ಥಿತಿ ಬದಲಾವಣೆಯಾಗಲಿದೆ ಎಂದು ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಹೇಳಿದರು.
ನಗರದಲ್ಲಿ ಬಮೂಲ್ ಕಲ್ಯಾಣ ಟ್ರಸ್ಟ್ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಅತಿ ಹೆಚ್ಚು ಹಾಲು ಪೂರೈಸುವ ರೈತರಿಗೆ ಕ್ಯಾನ್ ವಿತರಿಸುವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ವಿಶೇಷ ಸಚಿವ ಸಂಪುಟ ಕಳೆದ 20 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಬಿಡದಿ ಟೌನ್ ಶಿಪ್ ಯೋಜನೆಗೆ ಅನುಮೋದನೆ ನೀಡಿದೆ. ಸುಮಾರು 18 ಸಾವಿರ ಕೋಟಿ ವೆಚ್ಚದಲ್ಲಿ ಈ ಟೌನ್ಶಿಪ್ ನಿರ್ಮಾಣವಾಗಲಿದ್ದು, ಇದರಿಂದ ಸುತ್ತಮುತ್ತಲ ಜನರಿಗೆ ಅನುಕೂಲವಾಗಲಿದೆ ಎಂದರು.ಎಐ ಸಿಟಿ ನಿರ್ಮಾಣವಾದರೆ ಜಿಲ್ಲೆಯ ಆರ್ಥಿಕ ಸ್ಥಿತಿ ಬದಲಾವಣೆ ತರಲಿದೆ. ಒಂದೂವರೆ ತಿಂಗಳೊಳಗೆ ಅಂತಿಮ ಅಧಿಸೂಚನೆ ಹೊರಡಿಸಿ ಭೂ ಸ್ವಾಧೀನ ಪ್ರಕ್ರಿಯೆ ಪ್ರಾರಂಭಿಸಲಾಗುವುದು. ಕೆಲವರು ರಿಯಲ್ ಎಸ್ಟೇಟ್ಗಾಗಿ ಈ ಯೋಜನೆ ಜಾರಿಗೆ ತಂದಿರುವುದಾಗಿ ಆರೋಪಿಸುತ್ತಿದ್ದಾರೆ. ಎಲ್ಲ ಊರಿನಲ್ಲಿ ನಮ್ಮ ಆಸ್ತಿಯೇ ಇಲ್ಲ. ಬೇರೆಯವರು ಖಾಸಗಿ ವ್ಯಕ್ತಿಗಳ ಹೆಸರಿನಲ್ಲಿ ಆಸ್ತಿ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿಯನ್ನು ಪರೋಕ್ಷವಾಗಿ ಟೀಕಿಸಿದರು.
ಏರ್ ಪೋರ್ಟ್ ನಿರ್ಮಾಣದ ಚಿಂತನೆ:ಜಿಲ್ಲೆಯ ಸುತ್ತಮುತ್ತ ಏರ್ಪೋರ್ಟ್ ನಿರ್ಮಾಣ ಮಾಡಬೇಕು ಎಂಬುದು ಡಿ.ಕೆ.ಶಿವಕುಮಾರ್ ಕನಸು. ಇದರಿಂದ ರೈತರಿಗೆ ನಷ್ಟವಾಗುತ್ತದೆ ನಿಜ. ಯಾವುದೇ ಒಳ್ಳೆಯ ಯೋಜನೆಗಳನ್ನು ಮಾಡಲು ಹೊರಟಾಗ ಮತ್ತೊಬ್ಬರಿಗೆ ಕೆಟ್ಟದಾಗುತ್ತದೆ. ಇದು ಪ್ರಕೃತಿಯ ನಿಯಮ. ಆದರೆ, ನಾವು ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಕೆಲಸ ಮಾಡುತ್ತಿದ್ದೇವೆಯೇ ಹೊರತು ವೈಯಕ್ತಿಕ ಹಿತಾಸಕ್ತಿ ಏನು ಇಲ್ಲ ಎಂದು ಹೇಳಿದರು.
ಜಿಲ್ಲೆಯ ಜನರು ನಾಲ್ವರು ಶಾಸಕರನ್ನು ಗೆಲ್ಲಿಸಿದ್ದು, ಅವರ ಋಣ ತೀರಿಸುವ ಕೆಲಸ ಮಾಡಬೇಕಿದೆ. ಕೆರೆ ತುಂಬಿಸುವುದು ಸೇರಿದಂತೆ ಸುಮಾರು 2 ಸಾವಿರ ಕೋಟಿ ರುಪಾಯಿಯ ನೀರಾವರಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಈ ರೀತಿ ಸಾಕಷ್ಟು ಕನಸುಗಳನ್ನು ಇಟ್ಟುಕೊಂಡು ಕೆಲಸ ಮಾಡುತ್ತಿದ್ದೇವೆ. ಈ ಜಿಲ್ಲೆ ವಿಶ್ವದ ಭೂಪಟದಲ್ಲಿ ಗುರುತಿಸುವಂತಾಗಬೇಕೆಂಬ ಚಿಂತನೆ ನಮ್ಮದಾಗಿದೆ ಎಂದು ಡಿ.ಕೆ.ಸುರೇಶ್ ತಿಳಿಸಿದರು.
ಬಾಕ್ಸ್............
ಸಿಲಿಂಡರ್ ದರ ಹೆಚ್ಚಳಕ್ಕೆ ಕೇಂದ್ರವೇ ಉತ್ತರಿಸಬೇಕು: ಡಿಕೆಸುರಾಮನಗರ:
ಪಂಚರಾಜ್ಯಗಳ ಚುನಾವಣೆ ಮುಗಿಯುತ್ತಿದ್ದಂತೆ ಸಿಲಿಂಡರ್ ದರ ಹೆಚ್ಚಳ ಮಾಡಿರುವುದಕ್ಕೆ ಕೇಂದ್ರ ಸರ್ಕಾರವೇ ಉತ್ತರ ಹೇಳಬೇಕು ಎಂದು ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಪ್ರತಿಕ್ರಿಯಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಲಿಂಡರ್ ದರ ಹೆಚ್ಚಳದ ಬಗ್ಗೆ ನನ್ನ ಬದಲು ಕೇಂದ್ರ ಸರ್ಕಾರವನ್ನು ಕೇಳಬೇಕು. ಇಲ್ಲಿರುವ ಕೇಂದ್ರದ ಪ್ರತಿನಿಧಿಗಳು ಉತ್ತರ ಕೊಡುತ್ತಾರೆ ಎಂದರು.
ಪಂಚರಾಜ್ಯಗಳಲ್ಲಿ ಉತ್ತಮ ಫಲಿತಾಂಶ ಬರುವ ನಿರೀಕ್ಷೆ ಇದೆ. ರಾಜ್ಯದ ಎರಡೂ ಕ್ಷೇತ್ರಗಳ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುತ್ತಾರೆ. ತಮಿಳುನಾಡು ಹಾಗೂ ಕೇರಳದಲ್ಲಿ ಇಂಡಿಯಾ ಒಕ್ಕೂಟ ಗೆಲುವು ಸಾಧಿಸಲಿದೆ. ಇತರ ರಾಜ್ಯಗಳಲ್ಲೂ ಉತ್ತಮ ಫಲಿತಾಂಶ ಬರುವ ವಿಶ್ವಾಸ ಇದೆ ಎಂದರು.ಮೇ15ರಂದು ಡಿಕೆಶಿಗೆ ಶುಭಸುದ್ದಿ ಸಿಗುವ ವಿಚಾರವಾಗಿ ಕೇಳಿದ ಪ್ರಶ್ನೆಗೆ ಆ ಬಗ್ಗೆ ನನಗೇನು ಗೊತ್ತಿಲ್ಲ. ನನಗೆ ಯಾವುದೇ ಮಾಹಿತಿ ಇಲ್ಲ. ಇಕ್ಬಾಲ್ ಹುಸೇನ್ ಹೇಳಿದ್ದರೆ ಅವರನ್ನೇ ಕೇಳಿ. ಅವರು ಓರ್ವ ಶಾಸಕ ಅವರಿಗೆ ಮಾಹಿತಿ ಇರಬಹುದು. ನನಗೆ ಆ ಬಗ್ಗೆ ಗೊತ್ತಿಲ್ಲ. ನಾನು ದೆಹಲಿಗೆ ಹೋಗುವುದು ಹೊಸದೇನಲ್ಲ. ನಾನು 15 ವರ್ಷದಿಂದ ದೆಹಲಿಗೆ ಹೋಗುತ್ತಿದ್ದೇನೆ. ಅಪರೂಪಕ್ಕೆ ಏನು ದೆಹಲಿಗೆ ಹೋಗುತ್ತಿಲ್ಲ. ಕೆಲಸ ಇದ್ದಾಗೆಲ್ಲ ಹೋಗಿ ಬರುತ್ತೇನೆ ಎಂದರು.
ಸದ್ಯಕ್ಕೆ ಮುಖ್ಯಮಂತ್ರಿಗಳ ಬದಲಾವಣೆ ಇಲ್ಲ ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿ.ಕೆ.ಸುರೇಶ್, ಪಕ್ಷ ಅದನ್ನು ತೀರ್ಮಾನ ಮಾಡುತ್ತದೆ. ಅವರು ಪಕ್ಷದ ಅಧ್ಯಕ್ಷರು, ಅವರು ಏನು ಹೇಳುತ್ತಾರೊ ಅದರಂತೆ ಪಕ್ಷ ನಡೆದುಕೊಳ್ಳುತ್ತೆ ಎಂದು ಹೇಳಿದರು.1ಕೆಆರ್ ಎಂಎನ್ 2.ಜೆಪಿಜಿ
ಡಿ.ಕೆ.ಸುರೇಶ್.