ಕನ್ನಡಪ್ರಭ ವಾರ್ತೆ ಅಮೀನಗಡ

ಮಠಗಳು ಗ್ರಾಮೀಣ ಬಾಗದಲ್ಲಿ ಹೆಚ್ಚು ಶೈಕ್ಷಣಿಕ ಪ್ರಗತಿಯನ್ನು ಸಾಧಿಸುವುದರೊಂದಿಗೆ, ಭಕ್ತರನ್ನು ಧಾರ್ಮಿಕ ಮಾರ್ಗದಲ್ಲಿ ಸಾಗಲು ದಾರಿದೀಪಗಳಾಗಿವೆ ಎಂದು ಮುನವಳ್ಳಿ ಸೋಮಶೇಖರಮಠದ ಮುರುಗೇಂದ್ರ ಶ್ರೀಗಳು ಹೇಳಿದರು. ಪಟ್ಟಣದಲ್ಲಿ ಆ.1ರಂದು ಪ್ರಭುಶಂಕರೇಶ್ವರ ಗಚ್ಚಿನಮಠದ 12ನೇ ಪೀಠಾಧಿಪತಿ ಶಂಕರರಾಜೇಂದ್ರ ಶ್ರೀಗಳ 53ನೇ ಹುಟ್ಟುಹಬ್ಬದ ನಿಮಿತ್ತ, ಪ್ರತಿಷ್ಠಿತ ಸಂಗಮೇಶ್ವರ ವಿದ್ಯಾವರ್ಧಕ ಸಂಘ, ಅಕ್ಕನ ಬಳಗ, ಪ್ರಭುಶಂಕರೇಶ್ವರ ಸಾಂಸ್ಕೃತಿಕ ವೇದಿಕೆ ಸಹಯೋಗದಲ್ಲಿ ಹಮ್ಮಿಕೊಂಡಿರುವ, ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಔಷಧ ವಿತರಣಾ ಸಮಾರಂಭದ, ಪ್ರಚಾರ ಸಾಮಾಗ್ರಿ ಬಿಡುಗಡೆ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು. ಲಿಂಗೈಕ್ಯ ರಾಜಗುರು ಪ್ರಭುರಾಜೇಂದ್ರಶ್ರೀಗಳು ಶತಮಾನಗಳ ಹಿಂದೆ ಅಕ್ಷರ ಕ್ರಾಂತಿ ಆರಂಭಿಸಿದ ಪರಿಣಾಮ, ಇಂದು ಸಂಗಮೇಶ್ವರ ವಿದ್ಯಾವರ್ಧಕ ಸಂಘ ಬೃಹದಾಕಾರವಾಗಿ ಬೆಳೆದು, ಗ್ರಾಮೀಣ ಭಾಗದ ಜನತೆ ಶೈಕ್ಷಣಿಕ ಪ್ರಗತಿ ಸಾಧಿಸಲು ಇಂದಿನ ಪೀಠಾಧಿಪತಿ ಶಂಕರರಾಜೇಂದ್ರ ಶ್ರೀಗಳ ಕೊಡುಗೆ ಅಪಾರ ಎಂದರು.ಸಾನ್ನಿಧ್ಯ ವಹಿಸಿದ್ದ ಖೇಡಗಿಯ ಶಿವಬಸವರಾಜೇಂದ್ರ ಶ್ರೀಗಳು, ಪ್ರಭುಶಂಕರೇಶ್ವರ ಗಚ್ಚಿನಮಠದ 12ನೇ ಪೀಠಾಧಿಪತಿ ಶಂಕರರಾಜೇಂದ್ರ ಶ್ರೀಗಳು, ತಮ್ಮ 53ನೇ ಹುಟ್ಟುಹಬ್ಬದ ಆಚರಣೆಯನ್ನು ಗ್ರಾಮೀಣ ಭಾಗದ ಜನತೆಯ ಆರೋಗ್ಯ ಉತ್ತಮಗೊಳ್ಳಲೆಂಬ ಉದ್ದೇಶದಿಂದ, ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳುವ ಮೂಲಕ ಆಚರಿಸಿಸುತ್ತಿರುವುದು ಅರ್ಥಪೂರ್ಣ ಎಂದರು.

ಜಂಬಗಿ ಹಿರೇಮಠದ ಅಡವಿಶಿದ್ದೇಶ್ವರ ಶಿವಾಚಾರ್ಯ ಶ್ರೀ ಸಾನ್ನಿಧ್ಯ ವಹಿಸಿದ್ದರು.ಸಂಘದ ಚೇರ್‌ಮನ್ ಐ.ಎಸ್.ಲಿಂಗದಾಳ ಮಾತನಾಡಿದರು. ಸಂಘದ ನಿರ್ದೇಶಕರಾದ ಸಿ.ಡಿ.ಇಲಕಲ್, ಆರ್.ಕೆ.ಗೌಡರ, ಎಸ್.ಜಿ.ಕನ್ನೂರ, ಡಾ.ಎಂ.ವಿ.ಹಾದಿಮನಿ, ಉಮೇಶ ಸಜ್ಜನ, ಮುತ್ತಣ್ಣ ಸಜ್ಜನ, ಪ್ರಾಚಾರ್ಯ ಎಂ.ಎನ್.ವಂದಾಲ, ನಿವೃತ್ತ ಉಪ ಪ್ರಾಚಾರ್ಯ ಆರ್.ಜಿ.ಸನ್ನಿ ಇತರರಿದ್ದರು.