ಕನ್ನಡ ನಾಡು-ನುಡಿ ರಕ್ಷಣೆಯನ್ನು ಕೇವಲ ಒಂದು ವರ್ಗಕ್ಕೆ ಸೀಮಿತಗೊಳಿಸದೆ, ಕನ್ನಡ ಅಳಿವು ಉಳಿವಿಗಾಗಿ ನಮ್ಮೆಲ್ಲ ಹೋರಾಟ ಬಹು ಮುಖ್ಯವಾಗಿದೆ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.

ರಟ್ಟೀಹಳ್ಳಿ: ಕನ್ನಡ ನಾಡು-ನುಡಿ ರಕ್ಷಣೆಯನ್ನು ಕೇವಲ ಒಂದು ವರ್ಗಕ್ಕೆ ಸೀಮಿತಗೊಳಿಸದೆ, ಕನ್ನಡ ಅಳಿವು ಉಳಿವಿಗಾಗಿ ನಮ್ಮೆಲ್ಲ ಹೋರಾಟ ಬಹು ಮುಖ್ಯವಾಗಿದೆ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.

ತಾಲೂಕಿನ ಹಳ್ಳೂರ ಗ್ರಾಮದಲ್ಲಿ ನಡೆದ ತಾಲೂಕು 3ನೇ ಸಾಹಿತ್ಯ ಸಮ್ಮೇಳನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ನಾಡಿನಲ್ಲಿ ಕನ್ನಡ ಭಾಷೆ ಉಳಿವಿಗಾಗಿ ಹೋರಾಡುವಂತ ಅನಿವಾರ್ಯತೆ ಇಂದಿಗೂ ಒದಗಿಬಂದಿರುವುದು ವಿಪರ್ಯಾಸವೇ ಸರಿ, ಇಂತಹ ಸಂದರ್ಭದಲ್ಲಿ ಹೋರಾಟವನ್ನು ಕೇವಲ ಒಂದು ವರ್ಗಕ್ಕೆ ಸೀಮಿತಗೊಳಿಸದೇ ಎಲ್ಲರೂ ಒಗ್ಗಟ್ಟಾಗಿ ಹೋರಾಡುವುದು ಮುಖ್ಯ. ಇದರ ಮಧ್ಯ ಕನ್ನಡ ಪರಿಷತ್‍ನ ಅಧ್ಯಕ್ಷರು, ಸದಸ್ಯರು ಹಗಲು-ರಾತ್ರಿ ಪರಿಶ್ರಮ ಪಟ್ಟು ನಾಲ್ಕು ಸಾವಿರ ಇತಿಹಾಸ ಉಳ್ಳ ಪುಟ್ಟ ಗ್ರಾಮವಾದ ಹಳ್ಳೂರಿನಲ್ಲಿ ಮನೆ ಮನಗಳಲ್ಲಿ ಸಾಹಿತ್ಯದ ಕಂಪನ್ನು ಪಸರಿಸಿರುವುದು ಅತ್ಯಂತ ಸಂತಸ, ಅನೇಕ ಭಾಷೆಗಳ ದಬ್ಬಾಳಿಕೆ ಮತ್ತು ಆಂಗ್ಲಭಾಷೆಯ ವ್ಯಾಮೋಹದ ಮಧ್ಯ ಕನ್ನಡವನ್ನು ಮತ್ತೆ ತನ್ನತ್ತ ಸೆಳೆಯಲು ಹಾಗೂ ಮುಂದಿನ ಪೀಳಿಗೆಗೆ ಕನ್ನಡವನ್ನು ಮತ್ತಷ್ಟು ಹತ್ತಿರಗೊಳಿಸುವಂತ ಸಾಹಿತ್ಯ ಸಮ್ಮೇಳನಗಳು, ಕವಿ ಗೋಷ್ಠಿಗಳು ಪ್ರತಿ ತಾಲೂಕು, ಹೋಬಳಿ, ಜಿಲ್ಲಾ ಮಟ್ಟದಲ್ಲಿ ಹೆಚ್ಚೆಚ್ಚು ನಡೆಸುವುದು ಅತ್ಯಂತ ಸೂಕ್ತವಾಗಿದೆ ಎಂದರು. ಹಳ್ಳೂರು ಗ್ರಾಮದ ಲಕ್ಷ್ಮೀ ರಂಗನಾಥ ದೇವಸ್ಥಾನದ ಟ್ರಸ್ಟಿಗಳು ಹಾಗೂ ಧರ್ಮದರ್ಶಿಗಳು ಅರಣ್ಯ ಸಂರಕ್ಷಿತ ಪ್ರದೇಶದಲ್ಲಿ ಸುಮಾರು 22 ಸಾವಿರಕ್ಕೂ ಹೆಚ್ಚು ವಿವಿಧ ಬಗೆಯ ಗಿಡ-ಮರಗಳನ್ನು ನೆಟ್ಟು ಪೋಷಿಸುವಂತ ಮಹತ್ತಕಾರ್ಯ ಮಾಡಿರುವುದು ಅತ್ಯಂತ ಶ್ಲಾಘನೀಯ. ಇದರಿಂದ ದೇವಸ್ಥಾನಕ್ಕೆ ಲಕ್ಷಾಂತರ ರುಪಾಯಿ ಆದಾಯ ಬರುವಂತಾಗಿರುವುದರಿಂದ ಅವರ ಸೇವೆಯನ್ನು ಸರಕಾರದ ಗಮನಕ್ಕೆ ತಂದು ಗ್ರಾಮವನ್ನು ಪ್ರವಾಸಿ ತಾಣ ಮಾಡುವಂತೆ ಹಳ್ಳೂರು ಹಾಗೂ ಮದಗ ಮಾಸೂರ ಅಭಿವೃದ್ದಿಗಾಗಿ ಮತ್ತೆ ಪ್ರಾರಂಭವಾಗುವ ಅಧಿವೇಶನದಲ್ಲಿ ಸಂಬಂಧ ಪಟ್ಟ ಸಚಿವ ಎಚ್.ಕೆ. ಪಾಟೀಲ್ ಅವರ ಗಮನ ಸೆಳೆಯಲಾಗುವುದು ಎಂದರು.3ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಜಯಕವಿ ಡಾ. ಜಯಪ್ಪ ಹೊನ್ನಾಳ್ಳಿ ಮಾತನಾಡಿ, ಕನ್ನಡ ನಾಡು-ನುಡಿ ಹಬ್ಬಗಳನ್ನು ಮಾಡುವ ಮುಖ್ಯ ಉದ್ದೇಶ ಕನ್ನಡವನ್ನು ಪ್ರತಿಯೊಬ್ಬರಲ್ಲಿ ಜಾಗೃತಿ ಮೂಡಿಸಿ ಎಲ್ಲರೂ ಕನ್ನಡಕ್ಕೆ ಹೆಚ್ಚು ಮನ್ನಣೆ ನೀಡುವ ದೃಷ್ಟಿಯಿಂದಾಗಿ ಇಂತಹ ಕಾರ್ಯಕ್ರಮಗಳ ಅವಶ್ಯಕ. ಕನ್ನಡ ಭಾಷೆ ವೈಜ್ಞಾನಿಕತೆಯಿಂದ ಕೂಡಿದ್ದು ಕನ್ನಡಕ್ಕೆ 8 ಜ್ಞಾನ ಪೀಠ ಪ್ರಶಸ್ತಿ ದೊರೆತಿರುವುದು ಕನ್ನಡಿಗರು ಹೆಮ್ಮೆ ಪಡುವಂತಾಗಿದೆ.ಇತ್ತೀಚಿನ ದಿನಗಳಲ್ಲಿ ನಾವೆಲ್ಲರೂ ನವೆಂಬರ್‌ ಕನ್ನಡಿಗರಾಗದೆ ವರ್ಷ ಪೂರ್ತಿ ಕನ್ನಡಿಗರಾದರೇ ಮಾತ್ರ ನಮ್ಮ ಮುಂದಿನ ಪೀಳಿಗೆ ಕನ್ನಡದ ಆಸ್ತಿಯನ್ನು ನೀಡಬೇಕಾಗಿದೆ. 12 ರಾಜ್ಯಗಳಲ್ಲಿರುವ ಹಿಂದಿ ಭಾಷೆಗೆ 11 ಜ್ಞಾನ ಪೀಠ ಪ್ರಶಸ್ತಿಗಳು ಬಂದಿವೆ. ಆದರೆ ಕನ್ನಡ ಭಾಷೆಗೆ 8 ಜ್ಞಾನ ಪೀಠ ಪ್ರಶಸ್ತಿಗಳು ಬಂದಿದೆ. ಆದ್ದರಿಂದ ಕನ್ನಡಿಗರು ಎಲ್ಲ ರಂಗಗಳಲ್ಲೂ ಮುಂದಿದ್ದೇವೆ, ಬೇರೆ ಬೇರೆ ಭಾಷೆಗಳು ನಮ್ಮ ಜ್ಞಾನಕ್ಕಾದರೆ ಕನ್ನಡ ನಮ್ಮ ಅಸ್ಮಿತೆಯಾಗಬೇಕು ಎಂದರು.

ತಳಿರು ತೋರಣಗಳಿಂದ ಸಿಂಗಾರಗೊಂಡ ಸಾರೋಟಿನಲ್ಲಿ ಸರ್ವಾಧ್ಯಕ್ಷ ಜಯಕವಿ ಡಾ. ಜಯಪ್ಪ ಹೊನ್ನಾಳ್ಳಿ ಅವರನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

ಮುಂಜಾನೆ 7.30ಕ್ಕೆ ಹಳ್ಳೂರ ಗ್ರಾಮದ ಧರ್ಮದರ್ಶಿ ಬಿ.ಎಂ. ಮೆಣಸಿನಕಾಯಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ತಹಸೀಲ್ದಾರ್ ಶ್ವೇತಾ ಅಮರಾವತಿ ನಾಡಧ್ವಜ ಹಾಗೂ ಪರಿಷತ್ ಧ್ವಜಾರೋಹಣವನ್ನು ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಸಿ. ತುಮ್ಮಿನಕಟ್ಟಿ ನೆರವೇರಿಸಿದರು.ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಕಾರ್ಯಕ್ರಮದ ಸಾನಿಧ್ಯವಹಿಸಿದ್ದರು. ಎ.ಜಿ. ರಾಘವೇಂದ್ರ ಸ್ಮರಣ ಸಂಚಿಕೆಯನ್ನು ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ, ಕೃತಿಗಳನ್ನು ಮಾಜಿ ಮುಖ್ಯ ಸಚೇತಕ ಡಿ.ಎಂ. ಸಾಲಿ ಬಿಡುಗಡೆಗೊಳಿಸಿ ಮಾತನಾಡಿದರು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಕೃಷಿ ವಸ್ತ ಪ್ರದರ್ಶನ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ನಾರಾಯಣಪ್ಪ ಗೌರಕ್ಕನವರ ಪುಸ್ತಕ ಮಳಿಗೆ, ಕಸಪಾ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ ಆರೋಗ್ಯ ತಪಾಸಣೆ ಶಿಬಿರ, ಹಳ್ಳೂರ ಗ್ರಾ.ಪಂ. ಅಧ್ಯಕ್ಷೆ ಲತಾ ಮಂಜುನಾಥ ಹರಿಜನ ಚಿತ್ರಕಲಾ ಪ್ರದರ್ಶನ ಮಳಿಗೆ ಉದ್ಘಾಟಿಸಿದರು. ಡಾ. ಟಿ.ಸಿ. ಪೂರ್ಣಿಮಾ, ತಾಲೂಕು ಪಂಚಾಯತ್ ಇಓ ಎನ್. ರವಿಕುಮಾರ, ಶಂಭಣ್ಣ ಗೂಳಪ್ಪನವರ, ನಗರ ಘಟಕ ಕಸಾಪ ಅಧ್ಯಕ್ಷ ಗಣೇಶ ವೇರ್ಣೇಕರ, ವಸಂತ ದ್ಯಾವಕ್ಕಳವರ, ಡಾ. ಮಂಜುನಾಥ ತಲ್ಲೂರ, ಮಂಜುನಾಥ ತಳವಾರ, ದೀಪಕ ಕಾಲ್ಪಾಲ್, ನಾಗನಗೌಡ ಕೋಣ್ತಿ, ಬಿಇಓ ಎನ್. ಶ್ರೀಧರ, ಅಕ್ಷರ ದಾಸೋಹ ಅಧಿಕಾರಿ ಎಚ್. ಎಚ್. ಜಾಡರ, ರಂಗಪ್ಪ ವಾಲ್ಮೀಕಿ, ಎಸ್.ಟಿ. ಲಮಾಣಿ, ನಿಕಟ ಪೂರ್ವ ಅಧ್ಯಕ್ಷ ಎನ್.ಸಿ. ಕಠಾರೆ, ದ್ಯಾವನಗೌಡ, ಡಾ. ಚಿದಾನಂದ, ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಗಿರೀಶ ಬಾರ್ಕಿ, ಕರಿಯಪ್ಪ ಕೊರವರ, ಶಿವಾನಂದ ಪೂಜಾರ, ರಾಜು ಹರವಿಶೆಟ್ಟರ್, ಸುರೇಶ ಮಲ್ನಾಡದ, ಮಲ್ಲಿಕಾರ್ಜುನ್ ಹೇರಕಾರ್, ಬೀರೇಶ ಕರಡೆಣ್ಣನವರ, ಎ.ಬಿ. ಪಾಟೀಲ್, ಹೇಮಪ್ಪ ನಿಂಬೆಗೊಂದಿ, ಕುಸುಮಾವತಿ ಮೇಗಳಮನಿ, ಕೆ.ಆರ್. ಕೋಣ್ತಿ, ಗುಡ್ಡಾಚಾರಿ ಕಮ್ಮಾರ ಇದ್ದರು.