ಉದ್ಯೋಗಾವಕಾಶಗಳನ್ನು ನೀಡಿ ಆರ್ಥಿಕ ಸಬಲತೆ ನೀಡುವ ತೀರ ಅಗತ್ಯವಿದೆ ಎಂದು ರೋಶನಿ ಸಮಾಜ ಸೇವಾ ಸಂಸ್ಥೆಯ ಸಹ ನಿರ್ದೇಶಕಿ ಶಾಂತಿ ಡಿಸೋಜಾ ತಿಳಿಸಿದರು.
ಹಾನಗಲ್ಲ: ಮಹಿಳೆಯರಲ್ಲಿನ ಕೌಶಲ್ಯವನ್ನು ಅಭಿವೃದ್ಧಿಪಡಿಸುವ ಮೂಲಕ ಉದ್ಯೋಗಾವಕಾಶಗಳನ್ನು ನೀಡಿ ಆರ್ಥಿಕ ಸಬಲತೆ ನೀಡುವ ತೀರ ಅಗತ್ಯವಿದೆ ಎಂದು ರೋಶನಿ ಸಮಾಜ ಸೇವಾ ಸಂಸ್ಥೆಯ ಸಹ ನಿರ್ದೇಶಕಿ ಶಾಂತಿ ಡಿಸೋಜಾ ತಿಳಿಸಿದರು.
ಹಾನಗಲ್ಲ ತಾಲೂಕಿನ ಹೊಂಕಣ ಗ್ರಾಮದಲ್ಲಿ ಬೆಂಗಳೂರಿನ ಎಫ್.ವಿ.ಟಿ.ಆರ್.ಎಸ್ ಸಂಸ್ಥೆ ಸಹಯೋಗದಲ್ಲಿ ಇಲ್ಲಿನ ರೋಶನಿ ಸಮಾಜ ಸೇವಾ ಸಂಸ್ಥೆ ಆಯೋಜಿಸಿದ ಹೊಲಿಗೆ ತರಬೇತಿ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು.ಯುವ ಸಮುದಾಯವನ್ನು ನಿರುದ್ಯೋಗದಿಂದ ಮುಕ್ತಗೊಳಿಸುವ ಸಂಕಲ್ಪ ನಮ್ಮೆಲ್ಲರದಾಗಬೇಕಾಗಿದೆ. ವಿವಿಧ ಉದ್ಯೋಗಾವಕಾಶಗಳಿಗೆ ತರಬೇತಿ ನೀಡಿದರೆ ಖಂಡಿತ ಯುವಕ ಯುವತಿಯರು ಉತ್ತಮ ಉದ್ಯೋಗದ ಮೂಲಕ ಆರ್ಥಿಕ ಸಬಲತೆ ಹೊಂದಬಲ್ಲರು. ಅನಗತ್ಯವಾಗಿ ಸಮಯ ವ್ಯರ್ಥ ಮಾಡದೇ ಕಾಲವನ್ನು ದುಡಿಮೆಗಾಗಿ ಬಳಸಿಕೊಳ್ಳುವ ಸಂಕಲ್ಪ ನಮ್ಮದಾಗಬೇಕು. ಆರ್ಥಿಕ ಸಬಲತೆ ಬದುಕನ್ನು ಹಸನಗೊಳಿಸಬಲ್ಲದು. ಅದಕ್ಕಾಗಿ ನಾವೆಲ್ಲ ಒಟ್ಟಾಗಿ ಯೋಜಿಸಿ ಯೋಚಿಸಿ ಕಾರ್ಯಪ್ರವೃತ್ತರಾಗೋಣ ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಗ್ರಾಮ ಪಂಚಾಯತ್ ಕಾರ್ಯದರ್ಶಿ ಮೂಕಪ್ಪ ಜಾಡರ್, ಕೌಟುಂಬಿಕ ಸಮಸ್ಯೆಗಳಿಂದ ಅರ್ಧದಲ್ಲಿಯೇ ಶಾಲೆ ಬಿಟ್ಟು ಶಿಕ್ಷಣ ಪಡೆಯದೆ ಇರುವ ಮತ್ತು ಕೌಶಲ್ಯಗಳನ್ನು ಕಲಿಯದೆ ಉಳಿದಿರುವ ಯುವತಿಯರನ್ನು ಸಮೀಕ್ಷೆ ಮಾಡಿ ಅಂತವರಿಗೆ ಸ್ವಉದ್ಯೋಗ ಮಾಡಲು ಪ್ರೇರೇಪಿಸುವುದು ರೋಶನಿ ಸಮಾಜ ಸೇವಾ ಸಂಸ್ಥೆ ಹಾಗೂ ಎಫ್.ವಿ.ಟಿ.ಆರ್.ಎಸ್ ಸಂಸ್ಥೆಯ ಮುಖ್ಯಉದ್ದೇಶವಾಗಿದೆ. ಆದ್ದರಿಂದ ಸಮಯ ವ್ಯರ್ಥ ಮಾಡದೇ ತಾವು ಪಡೆಯುತ್ತಿರುವ ಹೊಲಿಗೆ ತರಬೇತಿಯನ್ನು ಹೆಚ್ಚಿನ ಆಸಕ್ತಿ ವಹಿಸಿಕೊಂಡು ಭವಿಷ್ಯದಲ್ಲಿ ಬಳಸಿಕೊಂಡರೆ ಭವಿಷ್ಯ ರೂಪಿಸಿಕೊಂಡು ಆರ್ಥಿಕವಾಗಿ ಅಭಿವೃಧ್ಧಿ ಹೊಂದಬಹುದಾಗಿದೆ ಎಂದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಪ್ರೇಮಾ ಪೂಜಾರ ಮತ್ತು ಜಯಮ್ಮ ಅಂಬಿಗೇರ, ಗ್ರಾಮ ಪಂಚಾಯತ್ ಸದಸ್ಯರು, ಜನವೇದಿಕೆ ಮುಖಂಡರಾದ ಬಂಗಾರೆಮ್ಮ ಅಂಬಿಗೇರ, ಕುಮಾರ ಕುಮ್ಮುರ, ಮಧು ಅಂಬಿಗೆರ ಮಾತನಾಡಿ, ಶಿಕ್ಷಣ ಇಲ್ಲದೇ ಯಾರು ಕೆಲಸ ಕೊಡುವುದಿಲ್ಲ ಮತ್ತು ಕೂಲಿ ಮಾಡಿಕೊಂಡೇ ಇರಬೇಕು ಎಂಬುದನ್ನು ಮೊದಲು ಯುವಕರು ತಮ್ಮತಲೆಯಿಂದ ತೆಗೆದು ಹಾಕಿ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಕೌಶಲ್ಯ ತರಬೇತಿಗಳನ್ನು ಪಡೆದು ಆಸಕ್ತಿಯಿಂದ ಸ್ವಉದ್ಯೋಗದಲ್ಲಿ ತೊಡಗಿದರೆ ಬೇರೆಯವರ ಕೈಯಲ್ಲಿ ದುಡಿಯುವುದು ತಪ್ಪಿಸಬಹುದಾಗಿದೆ ಎಂದರು.ಕಾರ್ಯಕ್ರಮದಲ್ಲಿ ಹೊಲಿಗೆ ತರಬೇತುದಾರರಾದ ಪ್ರತಿಭಾ ಆರಾಧ್ಯಮಠ, ಮಹಿಳಾ ಸಬಲೀಕರಣದ ಸಂಯೋಜಕ ಡಿಗ್ಗಪ್ಪ ಲಮಾಣಿ, ಸುಮಂಗಲಾ ಬಡಿಗೇರ, ಪ್ರಿಯಾ ತೋಟದ ಇದ್ದರು.