ಗದಗ: ಬಸವಾದಿ ಶರಣರು ರೂಪಿಸಿದ ಮತ್ತು ಅನುಸರಿಸಿದ ಮಾರ್ಗ ಜನರಿಗೆ ಮಾದರಿಯಾಗಿದೆ. ಈ ರೀತಿಯ ಪ್ರಯತ್ನವನ್ನು ಜಗತ್ತಿನ ಯಾವ ಮೂಲೆಯಲ್ಲಿಯೂ ಕಾಣಲು ಸಾಧ್ಯವಿಲ್ಲ. ಇಂಥ ಚಳವಳಿ ಕನ್ನಡ ನೆಲದಲ್ಲಿ ಆಗಿದೆ ಎಂಬುದು ಹೆಮ್ಮೆಯ ಸಂಗತಿ ಎಂದು ಹಿರಿಯ ಪತ್ರಕರ್ತ ಜಿ.ಪಿ. ಬಸವರಾಜು ತಿಳಿಸಿದರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನಲ್ಲಿ ಜರುಗಿದ ವಚನ ಪಿತಾಮಹ ಫ.ಗು. ಹಳಕಟ್ಟಿ ಅವರ ಜಯಂತಿ ಅಂಗವಾಗಿ ಜರುಗಿದ ಉಪನ್ಯಾಸದಲ್ಲಿ ಮಾತನಾಡಿ, ಅನುಭವ ಮಂಟಪ ಲಿಂಗಭೇದವಿಲ್ಲದೇ ಚರ್ಚೆಗೆ ಅವಕಾಶ ಕಲ್ಪಿಸಿದ್ದರಿಂದ ಅನುಭವಗಳನ್ನು ಅನುಭಾವವಾಗಿಸಿ ವಚನಗಳನ್ನು ರಚಿಸಿದರು. ವಚನ ರಚನೆಯಲ್ಲಿ ಕೆಳವರ್ಗದವರು ಭಾಗವಹಿಸಿದ್ದು ಜಗತ್ತಿನ ಇತಿಹಾಸದಲ್ಲಿಯೇ ಪ್ರಥಮ ಎಂದರು.ತಾರತಮ್ಯದಿಂದ ನಲುಗುತ್ತಿದ್ದ ಸಾಮಾಜಿಕ ವ್ಯವಸ್ಥೆಗೆ ಹೊಸ ಬೆಳಕಾಗಿ ಶರಣರು ಗೋಚರಿಸಿದರು. ವೈಚಾರಿಕ ಮತ್ತು ಮಾನವೀಯ ನೆಲೆಗಳಲ್ಲಿ ರೂಪಿತವಾಗಿ ಚಳವಳಿಯನ್ನು ಅಂತ್ಯಗಾಣಿಸಲು ಪ್ರಗತಿ ವಿರೋಧಿಗಳು ಪ್ರಯತ್ನಿಸಿದರು. ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ಲಕ್ಷಾಂತರ ವಚನಗಳು ಹಾಳಾದವು. ಆದರೆ ಅವರು ತೋರಿದ ಮಾರ್ಗ ಜಗತ್ತಿಗೆ ಸದಾ ಬೆಳಕಾಗಿದೆ. ಬೆಳಕನ್ನು ನಂದಿಸುವ ಪ್ರಯತ್ನಗಳು ಈಗಲೂ ನಡೆಯುತ್ತಿವೆ. ಅದು ಸಾಧ್ಯವಾಗುವುದಿಲ್ಲ. ಏಕೆಂದರೆ ಅದು ನಿಜವಾದ ಬೆಳಕಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಕಲ್ಯಾಣಕ್ರಾಂತಿಯ ನಂತರ ಶರಣರಿಂದ ದೊರೆತ ತಾಳೆಗರಿ, ಹಸ್ತಪ್ರತಿ ಕಟ್ಟುಗಳನ್ನು ತಲೆ ತಲಾಂತರದಿಂದ ಪೂಜಿಸುತ್ತಿದ್ದರು. ಊರೂರು ಅಲೆದು ಸಂಗ್ರಹಿಸಿ, ಸಂಪಾದಿಸಿ, ಮುದ್ರಿಸಿ ವಚನ ಸಾಹಿತ್ಯ ಬೆಳಕನ್ನು ಮನೆ ಮನಗಳಿಗೆ ಪಸರಿಸಿದ ಕೀರ್ತಿ ಫ.ಗು. ಹಳಕಟ್ಟಿ ಅವರಿಗೆ ಸಲ್ಲುತ್ತದೆ ಎಂದರು.ಈ ವೇಳೆ ಕೆ.ಎಚ್. ಬೇಲೂರ, ಅನ್ನದಾನಿ ಹಿರೇಮಠ, ಕಿಶೋರಬಾಬು ನಾಗರಕಟ್ಟಿ, ಡಿ.ಎಸ್. ಬಾಪುರಿ, ಸತೀಶ ಚನ್ನಪ್ಪಗೌಡರ, ಅಮರೇಶ ರಾಂಪೂರ, ಶಿಲ್ಪಾ ಮ್ಯಾಗೇರಿ, ವಿ.ಎಸ್. ಶ್ರೀಧರ, ಶಿವಾನಂದ ಹೊಂಬಳ, ಯಜ್ಞಾ ಕುರಿ, ಚನ್ನಬಸಪ್ಪ ಅಂಗಡಿ, ಶಶಿಕಾಂತ ಕೊರ್ಲಹಳ್ಳಿ, ಉಮಾದೇವಿ ಹೊಂಬಳ, ಜೆ.ಎ. ಪಾಟೀಲ, ಎಂ.ಎನ್. ಕಾಮನಹಳ್ಳಿ, ಸಿ.ಎಂ. ಮಾರನಬಸರಿ, ಅಶೋಕ ಅಂಗಡಿ, ಸಲೀಂ ಬಳಬಟ್ಟಿ, ವಿ.ಎಸ್. ದಿಂಡೂರ, ರವಿ ದೇವರಡ್ಡಿ, ಸಾಕ್ಷಿ, ಎಸ್.ಯು. ಸಜ್ಜನಶೆಟ್ಟರ, ಮಲ್ಲಿಕಾರ್ಜುನ ನಿಂಗೋಜಿ ಮೊದಲಾದವರು ಇದ್ದರು. ಸಂತೋಷ ಅಂಗಡಿ ಸ್ವಾಗತಿಸಿದರು. ರಾಹುಲ ಗಿಡ್ನಂದಿ ನಿರೂಪಿಸಿದರು. ದತ್ತಪ್ರಸನ್ನ ಪಾಟೀಲ ವಂದಿಸಿದರು.