ಕನ್ನಡಪ್ರಭ ವಾರ್ತೆ ರಿಪ್ಪನ್ಪೇಟೆ
ಕೇಂದ್ರದ ಬಿಜೆಪಿ ಸರ್ಕಾರದವರು ಎಸ್ಐಆರ್ ಮೂಲಕ ಮತದಾರರ ಹಕ್ಕು ಕಸಿಯುವ ಹುನ್ನಾರ ನಡೆಸುತ್ತಿದೆ. ಬಾಂಗ್ಲಾ ಮತ್ತು ಪಾಕಿಸ್ತಾನದವರ ಅವಶ್ಯಕತೆ ನಮಗಿಲ್ಲ. ಈ ದೇಶದಲ್ಲಿ ಇಷ್ಟು ವರ್ಷ ಇದ್ದರೂ ದಾಖಲೆ ನೀಡುವಂತೆ ಮಾಡುವ ನೀಚ ಪ್ರವೃತ್ತಿಗೆ ಇಳಿದಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಹಕ್ಕು ಪಡೆಯಲು ಹೋರಾಟ ನಡೆಸುವಂತಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.ರಿಪ್ಪನ್ಪೇಟೆಯ ಎಸ್.ಆರ್. ಕಲ್ಯಾಣ ಮಂದಿರದಲ್ಲಿ ಶನಿವಾರ ಹೊಸನಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಎಸ್.ಐ.ಆರ್. ಪ್ರಗತಿ ಪರಿಶೀಲನಾ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಕರ್ನಾಟಕದ ಜನರು ಯಾರೂ ದಡ್ಡರಲ್ಲ. ಎಲ್ಲಗೂ ಪ್ರಜ್ಞಾವಂತರು. ಕಾಂಗ್ರೆಸ್ ಪಕ್ಷ ಧರ್ಮವನ್ನು ಒಡೆಯುವ ಸಂಸ್ಕೃತಿ ಬೆಳೆಸಿಲ್ಲ. ಎಲ್ಲರೂ ಒಂದೇ ಎಂಬ ತತ್ವ ಸಿದ್ಧಾಂತದಲ್ಲಿ ಸರ್ವಧರ್ಮೀಯರನ್ನು ಸಮಾನಾವಾಗಿ ಕಂಡುಕೊಂಡು ಬಂದಂತಹ ಪಕ್ಷವಾಗಿದೆ ಎಂದರು.
ಈಗಾಗಲೇ ಮತಗಟ್ಟೆ ಆಧಿಕಾರಿಗಳು ಪ್ರತಿ ಮನೆ ಮನೆಗೆ ತೆರಳಿ ಎಸ್.ಐ.ಆರ್. ಮತದಾರರ ಪಟ್ಟಿ ಬಿ.ಎಲ್.ಒ. ಪರಿಷ್ಕರಣೆ ಕಾರ್ಯ ಮಾಡುತ್ತಿದ್ದಾರೆ. ಅಲ್ಲದೇ, ಮತದಾರರು ಮನೆಯಲ್ಲಿ ಇಲ್ಲದೇ ಇರುವುದು ಮತ್ತು ಉದ್ಯೋಗ ನಿಮಿತ್ತ ಹೊರ ದೇಶದಲ್ಲಿ, ಹೊರ ಜಿಲ್ಲೆಗಳಲ್ಲಿ ಇರಬಹುದು. ಅಂತಹವರ ಬಗ್ಗೆ ನಮ್ಮ ಪಕ್ಷದ ಕಾರ್ಯಕರ್ತರು ಸಕ್ರಿಯವಾಗಿ ಬಿ.ಎಲ್.ಒ.ಗಳೊಂದಿಗೆ ಮನೆ ಮನೆಗಳಿಗೆ ತೆರಳಿ ಮತದಾರರ ಪಟ್ಟಿಯನ್ನು ಸಮರ್ಪಕವಾಗಿ ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕು. ಆ ಮೂಲಕ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಹೆಚ್ಚು ಮತಗಳನ್ನು ಪಡೆಯಲು ಸಹಕಾರಿ ಆಗುವುದು ಎಂದರು.ಅರ್ಹರೆಲ್ಲರೂ ಮತದಾನದ ಹಕ್ಕನ್ನು ಪಡೆದುಕೊಳ್ಳಬೇಕು. ಅರ್ಹ ನಾಗರೀಕರೆಲ್ಲರನ್ನು ಮತದಾನದ ಪಟ್ಟಿಗೆ ಸೇರ್ಪಡೆಗೊಳಿಸುವುದು ಮತ್ತು ಹಾಲಿ ಮತದಾರರ ವಿವರಗಳನ್ನು ಖಚಿತಪಡಿಸಿಕೊಳ್ಳುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ಆ ಕಾರಣದಿಂದ ಈ ಅಭಿಯಾನ ನಡೆಸಲಾಗುತ್ತಿದೆ. ಪ್ರತಿಪಕ್ಷದವರು ದುರುದ್ದೇಶದಿಂದ ವಿರೋಧ ಮಾಡಲು ಎಸ್.ಐ.ಆರ್. ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಈ ಬಗ್ಗೆ ಅಲ್ಲಿಲ್ಲ ಕುಳಿತು ಮತದಾರರ ಫಾರಂ ತುಂಬಿಸುವ ಬಗ್ಗೆ ಮಾಹಿತಿಯನ್ನು ನೀಡುತ್ತಿರುವುದರ ಬಗ್ಗೆ ಆರೋಪ ಮಾಡುತ್ತಿದ್ದಾರೆಂದರು.
ಮಾಜಿ ಸಂಸದ ಆಯನೂರು ಮಂಜುನಾಥ ಮಾತನಾಡಿ, ಕೇಂದ್ರ ಸರ್ಕಾರ ಎಸ್ಐಅರ್ ಮೂಲಕ ಮತದಾನದ ಹಕ್ಕು ಕಿತ್ತುಕೊಳ್ಳುವ ಹುನ್ನಾರ ನಡೆಸುತ್ತಿದೆ. ಈ ಬಗ್ಗೆ ಜನತೆ ಜಾಗೃತರಾಗಿರಬೇಕು. ಮನೆ ಮನೆ ಸಮೀಕ್ಷೆಗೆ ಬರುವ ಬಿ.ಎಲ್.ಒ.ಗಳಿಗೆ ಸರಿಯಾದ ಮಾಹಿತಿ ನೀಡಿ, ತಮ್ಮ ಮತ ಪಟ್ಟಿಯಲ್ಲಿ ಸರಿಯಾಗಿ ತಮ್ಮ ಹೆಸರು ದಾಖಲಾಗಿರುವ ಬಗ್ಗೆ ದೃಢಪಡಿಸಿಕೊಳ್ಳುವಂತೆ ಕಾರ್ಯಕರ್ತರಿಗೆ ಮಾಹಿತಿ ನೀಡಿದರು.
ಬ್ಲಾಕ್ ಕಾಂಗ್ರೆಸ್ ಆಧ್ಯಕ್ಷ ಬಿ.ಜಿ. ಚಂದ್ರಮೌಳಿ ಗೌಡರು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಜಿಲ್ಲಾ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಶ್ವೇತಾ ಆರ್. ಬಂಡಿ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಸುಮಾ ಸುಬ್ರಹ್ಮಣ್ಯ, ಜಯಶೀಲಪ್ಪಗೌಡರು, ಎಂ.ಬಿ.ಲಕ್ಷ್ಮಣಗೌಡರು, ಗ್ಯಾರೆಂಟಿ ಸಮಿತಿ ಅಧ್ಯಕ್ಷ ಚಿದಂಬರ್, ವಿನಯಕುಮಾರ್, ಬಂಡಿ ರಾಮಚಂದ್ರ, ಏರಿಗಿ ಉಮೇಶ್, ಅಮ್ಮೀರ್ ಹಂಜಾ, ಎಚ್.ವಿ. ಈಶ್ವರಪ್ಪಗೌಡರು ಹಾರೋಹಿತ್ತಲು ಇನ್ನಿತರರು ಪಾಲ್ಗೊಂಡಿದ್ದರು.