ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರದ ಅವರ ಖೇಲೋ ಇಂಡಿಯಾ ಒಂದು ಮಹತ್ವಾಕಾಂಕ್ಷೆಯ ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ಕಾರ್ಯಕ್ರಮವಾಗಿದೆ. ತಳಮಟ್ಟದಲ್ಲಿ ಕ್ರೀಡೆಯನ್ನು ಉತ್ತೇಜಿಸುವುದು, ಪ್ರತಿಭೆಗಳನ್ನು ಗುರುತಿಸುವುದು ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ಸಿದ್ಧಪಡಿಸುವುದು ಇದರ ಉದ್ದೇಶವಾಗಿದೆ ಎಂದು ಶಿಗ್ಗಾಂವಿ ಬಿಜೆಪಿ ಯುವ ಮುಖಂಡ ಭರತ್ ಬೊಮ್ಮಾಯಿ ಹೇಳಿದರು.

ಶಿಗ್ಗಾಂವಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರದ ಅವರ ಖೇಲೋ ಇಂಡಿಯಾ ಒಂದು ಮಹತ್ವಾಕಾಂಕ್ಷೆಯ ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ಕಾರ್ಯಕ್ರಮವಾಗಿದೆ. ತಳಮಟ್ಟದಲ್ಲಿ ಕ್ರೀಡೆಯನ್ನು ಉತ್ತೇಜಿಸುವುದು, ಪ್ರತಿಭೆಗಳನ್ನು ಗುರುತಿಸುವುದು ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ಸಿದ್ಧಪಡಿಸುವುದು ಇದರ ಉದ್ದೇಶವಾಗಿದೆ ಎಂದು ಶಿಗ್ಗಾಂವಿ ಬಿಜೆಪಿ ಯುವ ಮುಖಂಡ ಭರತ್ ಬೊಮ್ಮಾಯಿ ಹೇಳಿದರು.ಶಿಗ್ಗಾಂವಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಪ್ರಸ್ತುತ ಪಡಿಸುವ ಧಾರವಾಡ ಸಂಸದ ಕ್ರೀಡಾ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಸದೃಢ ದೇಹದಿಂದ ಸದೃಢ ಮನಸ್ಸು, ಆರೋಗ್ಯಕರ ಮನಸ್ಸಿನ ಪ್ರಜೆಗಳಿಂದ ಸದೃಢ ಭಾರತದ ನಿರ್ಮಾಣ ಮಾಡಲು ಸಾಧ್ಯ. ಕ್ರೀಡೆ ನಮ್ಮನ್ನು ಆರೋಗ್ಯಕರ ಜೀವನದತ್ತ ಕರೆದೊಯ್ಯಲಿದೆ. ಇಂದಿನ ಮಕ್ಕಳು ಮೊಬೈಲ್ ಬಿಟ್ಟು ಮೈದಾನದತ್ತ ಗಮನಹರಿಸಬೇಕೆಂದು ಹೇಳಿದರು.ಇಂದು ತಂತ್ರಜ್ಞಾನದ ಬೆಳವಣಿಗೆ ನಮ್ಮನ್ನು ನಿಷ್ಕ್ರಿಯ, ಚಟುವಟಿಕೆಯಿಲ್ಲದ ಜೀವನಶೈಲಿಯತ್ತ ಕರೆದು ತಂದಿದೆ. ಫಿಟ್‌ನೆಸ್ ಎಂಬುದು ನಮ್ಮ ದೈಹಿಕ ಸ್ವಾಸ್ಥ್ಯ ಕಾಪಾಡಲು ಅನುಕೂಲಕರ, ೨೦೩೬ರ ಒಲಿಂಪಿಕ್ಸನಲ್ಲಿ ಭಾರತದ ಕ್ರೀಡಾಪಟುಗಳು ೩ ಮೆಡಲ್‌ಗಳನ್ನು ಗೆಲ್ಲಬೇಕು ಎಂಬುದು ಪ್ರಧಾನಿ ಮೋದಿ ದೂರದೃಷ್ಟಿಯಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಭಾರತದ ಕ್ರೀಡಾ ಕ್ಷೇತ್ರವು ಕಳೆದ ೧೧ ವರ್ಷಗಳಲ್ಲಿ ಸಂಪೂರ್ಣ ಸಕಾರಾತ್ಮಕವಾಗಿ ಬದಲಾಗಿದೆ. ಉತ್ತಮ ಫಲಿತಾಂಶ ನೀಡುತ್ತಿದೆ. ಹೊಸ ಪೀಳಿಗೆಯ, ಆತ್ಮವಿಶ್ವಾಸ ಭರಿತ ಕ್ರೀಡಾಪಟುಗಳು ಜಾಗತಿಕ ಕ್ರೀಡಾ ಕ್ಷೇತ್ರದಲ್ಲಿ ಭಾರತದ ಕೀರ್ತಿಯನ್ನು ಬೆಳಗುತ್ತಿದ್ದಾರೆ ಎಂದು ಹೇಳಿದರು.ಮುಖ್ಯ ಅತಿಥಿಗಳಾದ ಪೋಲಿಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ ಮಾತನಾಡಿ, ಪ್ರತಿಜ್ಞಾವಿಧಿಯಲ್ಲಿ ಬೋಧಿಸಿದಂತೆ ಭಾವನಾತ್ಮಕವಾಗಿ ಸಮತೋಲನನಾಗಿರುತ್ತೇನೆ ಎಂಬುದನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಈ ದೇಶಕ್ಕೆ ಪೊಲಿಸ್ ಸ್ಟೇಷನ್‌ಗಳೇ ಬೇಡವಾಗುತ್ತದೆ. ಸಮತೋಲನ ಕಾಪಾಡಿಕೊಳ್ಳುವುದರಿಂದ ಜೀವನದಲ್ಲಿ ಸ್ನೇಹ ಸಮ್ಮಿಲವಾಗುತ್ತದೆ. ಕ್ರೀಡಾ ಪ್ರತಿಭೆಗಳನ್ನು ಗುರುತಿಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.ಹಿಂದೆ ಮಕ್ಕಳು ಕ್ರೀಡೆಯಲ್ಲಿ ಸಮಯ ಕಳೆಯುವುದನ್ನು ಕಂಡರೆ ಸಿಡಿಮಿಡಿಗೊಳ್ಳುತ್ತಿದ್ದರು. ಕೆಲವೊಮ್ಮೆ ಮೂದಲಿಸಿದ್ದರು. ಅದೇ ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಮಕ್ಕಳು ಕ್ರೀಡೆಯಲ್ಲಿ ಆಸಕ್ತಿ ವಹಿಸಿದರೆ ಪೋಷಕರು ಸಂತೋಷಪಡುತ್ತಾರೆ. ಇದು ದೇಶಕ್ಕೆ ನಿಜಕ್ಕೂ ಶುಭಸೂಚನೆ ಎಂದು ಅವರು ಬಣ್ಣಿಸಿದರು.ಶಿಗ್ಗಾಂವಿಯ ವಿರಕ್ತ ಮಠದ ಸಂಗನಬಸವ ಮಹಾಸ್ವಾಮಿಗಳು ಕ್ರೀಡಾಪಟುಗಳಿಗೆ ಶುಭ ಹಾರೈಸಿದರು. ಬಂಕಾಪುರದ ಅರಳೆಲೆಮಠದ ಶ್ರೀ ರೇವಣಸಿದ್ದೇಶ್ವರ ಮಹಾಸ್ವಾಮಿಗಳು, ಷಟ್‌ಸ್ಥಳ ಗಂಜಿಗಟ್ಟಿ ಮಹಾಸ್ವಾಮಿಗಳು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಶುಭಂ ಶುಕ್ಲಾ, ಎ.ಡಿ. ಶ್ರೀಮತಿ ಲತಾ, ಶಿಗ್ಗಾಂವಿ ಬಿಜೆಪಿ ತಾಲೂಕು ಅಧ್ಯಕ್ಷ ವಿಶ್ವನಾಥ ಹರವಿ, ಸವಣೂರು ಬಿಜೆಪಿ ತಾಲೂಕು ಅಧ್ಯಕ್ಷ ಶಿವಪುತ್ರಪ್ಪ ಕಲಕೋಟಿ, ಗಂಗಾಧರ ಬಾಣದ, ಯುವ ಮುಖಂಡ ನರಹರಿ ಕಟ್ಟಿ, ಶರಣು ಅಂಗಡಿ, ವಿಶ್ವನಾಥ ಹರವಿ, ಮಲ್ಲೇಶಪ್ಪ ಹರಿಜನ, ಅರ್ಜುನ ಹಂಚಿನಮನಿ, ಜಯಣ್ಣ ಹೆಸರೂರು, ಭರಮಜ್ಜ ನವಲಗುಂದ, ಮಾಲತೇಶ ಎಲಿಗಾರ, ಮಂಜು ಬಗಯಾಹಟ್ಟಿ, ರಮೇಶ ವನಹಳ್ಳಿ, ಅರ್ಜಪ್ಪ ಲಮಾಣಿ, ಶ್ರೀಮತಿ ಯಶೋದಾ ಪಾಟೀಲ, ಶೋಭಾ ನಿಸ್ಸೀಮಗೌಡ ಹಾಗೂ ಇನ್ನಿತರರು ಉಪಸ್ಥಿತರಿದ್ದರು.ಶಿಗ್ಗಾಂವಿ ತಾಲೂಕು ಬಿಜೆಪಿ ಮುಖಂಡ ಶಿವಾನಂದ ಮ್ಯಾಗೇರಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.