ಮೌಲ್ಯಾಧಾರಿತ ಶಿಕ್ಷಣ ಕೇವಲ ಮಾತಿನಲ್ಲಿರದೇ, ಅದು ಈಶ್ವರಮ್ಮ ಶಾಲೆಯಲ್ಲಿ ಮಕ್ಕಳ ನಡೆವಳಿಕೆಯಲ್ಲಿ ಪ್ರತಿಬಿಂಬಿತವಾಗುತ್ತಿದೆ ಎಂದು ಎವಿಕೆ ಕಾಲೇಜಿನ ವಿಶ್ರಾಂತ ಆಂಗ್ಲಭಾಷಾ ಪ್ರಾಧ್ಯಾಪಕರಾದ ಡಾ. ಪಿ.ಎಂ. ಅನುರಾಧ ದಾವಣಗೆರೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.

- ಶ್ರೀ ಸತ್ಯಸಾಯಿ ಗುರುವಂದನಾ ಕಾರ್ಯಕ್ರಮದಲ್ಲಿ ಡಾ.ಅನುರಾಧ ಅಭಿಮತ - - - ಕನ್ನಡಪ್ರಭ ವಾರ್ತೆ ದಾವಣಗೆರೆ

ಮೌಲ್ಯಾಧಾರಿತ ಶಿಕ್ಷಣ ಕೇವಲ ಮಾತಿನಲ್ಲಿರದೇ, ಅದು ಈಶ್ವರಮ್ಮ ಶಾಲೆಯಲ್ಲಿ ಮಕ್ಕಳ ನಡೆವಳಿಕೆಯಲ್ಲಿ ಪ್ರತಿಬಿಂಬಿತವಾಗುತ್ತಿದೆ ಎಂದು ಎವಿಕೆ ಕಾಲೇಜಿನ ವಿಶ್ರಾಂತ ಆಂಗ್ಲಭಾಷಾ ಪ್ರಾಧ್ಯಾಪಕರಾದ ಡಾ. ಪಿ.ಎಂ. ಅನುರಾಧ ಅಭಿಪ್ರಾಯಪಟ್ಟರು.

ನಗರದ ಪಿ.ಜೆ. ಬಡಾವಣೆಯ ಈಶ್ವರಮ್ಮ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಶ್ರೀ ಸತ್ಯಸಾಯಿ ಗುರುವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹದಿಹರೆಯದಲ್ಲಿ ಇರುವ ಚೈತನ್ಯ, ಹುಮ್ಮಸ್ಸು, ಕ್ರಿಯಾಶೀಲತೆ, ಲವಲವಿಕೆ ಎಂತಹವರಲ್ಲೂ ಉತ್ಸಾಹ ತುಂಬುವಂಥಹುದು. ಈ ವಯಸ್ಸಿನಲ್ಲಿ ಹಸಿ ಗೋಡೆಗೆ ಕಲ್ಲು ಒಗೆದರೂ ನಾಟುವಂತಹ ನಾಜೂಕಾದ ಅಪಾಯಕಾರಿ ಘಟ್ಟವನ್ನು ದಾಟಿಸುವಂತಹವರು ಎಂದರೆ ಶಾಲೆಯಲ್ಲಿ ಗುರುಗಳು ಮತ್ತು ಮನೆಯಲ್ಲಿ ಪೋಷಕರು. ಪ್ರತಿಯೊಂದು ಹಂತದಲ್ಲೂ ಜೀವನದಲ್ಲಿ ಪಾಠ ಕಲಿಸಿದವರೆಲ್ಲರೂ ಗುರುಗಳೇ ಎಂದು ಬಣ್ಣಿಸಿದರು.

ಈ ಶಿಕ್ಷಣ ವ್ಯವಸ್ಥೆ ಪಾಶ್ಚಿಮಾತ್ಯರನ್ನು ಅನುಕರಿಸುವಂತದ್ದು. ನಾಲ್ಕು ಗೋಡೆಗಳ ಮಧ್ಯೆ ಕೊಡುವ ಶಿಕ್ಷಣ ಜೀವನ್ಮುಖಿ ಆಗಿರುವುದಿಲ್ಲ ಎಂದು ಮಹಾತ್ಮ ಗಾಂಧೀಜಿ ಹೇಳಿದ್ದರು. ವಿದ್ಯಾರ್ಥಿಗಳು ಕೇವಲ ವೈದ್ಯರು ಮತ್ತು ಎಂಜಿನಿಯರ್ ಆಗಬೇಕೆಂದುಕೊಳ್ಳುತ್ತಾರೆ. ಆದರೆ ಒಳ್ಳೆಯ ಶಿಕ್ಷಕರು, ವಕೀಲರು, ಆರಕ್ಷಕರು, ರೈತರು, ಸೈನಿಕರು, ರಾಜಕಾರಣಿಗಳು ನಮ್ಮ ದೇಶಕ್ಕೆ ಬೇಕಾಗಿದೆ ಎಂದರು.

ಇಂದಿನ ಮಕ್ಕಳು ತಾಂತ್ರಿಕತೆಯಿಂದ ಮೊಬೈಲ್, ಲ್ಯಾಪ್‌ಟಾಪ್ ಮೊದಲಾದವನ್ನು ಬಳಸುತ್ತಾ ಮಂಗಗಳಂತಾಗಿದ್ದಾರೆ. ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟಂತಾಗಿದೆ. ಇಂದಿನ ತಂತ್ರಜ್ಞಾನ, ಇಂದಿನ ಮಕ್ಕಳು ಸುತ್ತಮುತ್ತ ಪರಿಸರವನ್ನು ಗಮನಿಸುವುದಿಲ್ಲ, ಸ್ವಾರ್ಥಿಗಳಾಗುತ್ತಿದ್ದಾರೆ. ಸಮಾಜಕ್ಕೆ ಕೊಡುಗೆಗಳನ್ನು ಕೊಡುವಂತವರಾಗಬೇಕು ಎಂದು ಹೇಳಿದರು.

ಶಾಲಾ ಆಡಳಿತ ಮಂಡಳಿ ಅಧ್ಯಕ್ಷೆ ಕೆ.ಆರ್. ಸುಜಾತ ಕೃಷ್ಣ ಮಾತನಾಡಿ, ಶಿಕ್ಷಕರ ದಿನಾಚರಣೆ ಬಹಳಷ್ಟು ಅರ್ಥಪೂರ್ಣವಾಗಿದೆ. ಈಶ್ವರಮ್ಮ ಶಾಲೆಯ ವೈಶಿಷ್ಟ್ಯ ಏನೆಂದರೆ ಮೌಲ್ಯಧಾರಿತ ಶಿಕ್ಷಣ ಕೊಡುವುದಾಗಿದೆ. ಅಂತಹ ಶಿಕ್ಷಣ ಇಲ್ಲಿ ಸಿಗುತ್ತಿದೆ. ಇಲ್ಲಿನ ಗುರುಗಳಿಂದ ಕಲಿತ ಮಕ್ಕಳು ಉತ್ತಮ ನಾಗರಿಕರಾಗಿ ಹೊರಹೊಮ್ಮಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಈಶ್ವರಮ್ಮ ಶಾಲಾಡಳಿತ ಮಂಡಳಿ ಕಾರ್ಯದರ್ಶಿ ಎ.ಆರ್. ಉಷಾ ರಂಗನಾಥ್, ಪ್ರಾಚಾರ್ಯ ಕೆ.ಎಸ್. ಪ್ರಭುಕುಮಾರ, ಉಪ ಪ್ರಾಚಾರ್ಯೆ ಜಿ.ಎಸ್. ಶಶಿರೇಖಾ, ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.

ವಿದ್ಯಾರ್ಥಿನಿ ಎಂ.ಯು. ರೋಹಿಣಿ ಸ್ವಾಗತಿಸಿದರೆ, ಜಿ.ಎಸ್.ಮೇಘನಾ ವಂದಿಸಿದರು. ಬಿ.ಎನ್.ಭಾವನಾ, ಎ.ಪಿ. ಭೂಮಿಕ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಶಿಕ್ಷಕ ವೃಂದವರಿಗೆ ಗುರುಕಾಣಿಕೆ ನೀಡಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.

- - - ಕೋಟ್

ಖಡ್ಗಕ್ಕಿಂತ ಲೇಖನಿ ಹರಿತವಾದದ್ದು, ಶಿಕ್ಷಕರ ವೃತ್ತಿ, ಬಹಳ ಶ್ರೇಷ್ಠವಾದ ವೃತ್ತಿ. ಜಗತ್ತಿನಲ್ಲಿ ಕೆಟ್ಟದ್ದು ಇದ್ದರೂ, ಅಂಧಕಾರವಿದ್ದರೂ ಅಲ್ಲಲ್ಲಿ ಬೆಳಕನ್ನು ಬೀರುವ ಜ್ಯೋತಿಗಳೇ ಶಿಕ್ಷಕರು. ಜಾಗತೀಕರಣ ಹೆಚ್ಚಾದಂತೆ, ನಾವು ನಮ್ಮ ದೇಶೀ ಸಂಸ್ಕೃತಿ ಮರೆಯುತ್ತಿದ್ದೇವೆ. ಮಕ್ಕಳು ನಮ್ಮ ಸಂಸ್ಕೃತಿ ಮತ್ತು ದೇಶಭಕ್ತಿಯನ್ನು ಮೈಗೂಡಿಸಿಕೊಳ್ಳಬೇಕು

- ಡಾ. ಪಿ.ಎಂ.ಅನುರಾಧ, ಪ್ರಾಧ್ಯಾಪಕಿ

- - -

(ಫೋಟೋ ಇದೆ.)