ಸಾರಾಂಶ
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಸ್ವಾತಂತ್ರ್ಯ ದಿನಾಚರಣೆಯ ಅರ್ಥ ಮತ್ತು ಮಹತ್ವವನ್ನು ಒಂದು ದಿನಕ್ಕೆ ಸೀಮಿತಗೊಳಿಸದೆ ಪ್ರತಿನಿತ್ಯ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತಾಗಬೇಕು ಎಂದು ಸುಂಟಿಕೊಪ್ಪ ಗ್ರೇಡ್ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ. ಜಿ. ಲೋಕೇಶ್ ಕರೆ ನೀಡಿದ್ದಾರೆ.ಗುರುವಾರ ಸಂತಮೇರಿ ಶಾಲಾ ಆವರಣದಲ್ಲಿ ನಡೆದ 78ನೇ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಆಗಮಿಸಿ ಮಾತನಾಡಿದರು.
ಭಾರತ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹಾತ್ಮ ಗಾಂಧಿ, ಜವಹಾರ್ಲಾಲ್ ನೆಹರು, ಭಗತ್ ಸಿಂಗ್ ಸೇರಿದಂತೆ ಅನೇಕ ಮಂದಿ ತ್ಯಾಗ ಬಲಿದಾನವನ್ನು ಮಾಡಿದ್ದಾರೆ. ಭಾರತ ದೇಶವು ವಿಶ್ವದಲ್ಲೇ ಒಂದು ಅಪರೂಪದ ಆದರೆ ಅದ್ಬುತ ಹಬ್ಬ ಹರಿದಿನಗಳು ಜಾತ್ರೆಗಳು ಜಾತಿ ಜನಾಂಗಳು ನೆಲೆಸಿರುವ ದೇಶವಾಗಿದ್ದು, ಬ್ರಿಟಿಷರ ಕಪಿಮುಷ್ಠಿಯಿಂದ ಹೊರ ಬಂದು ಸ್ವಾತಂತ್ರ್ಯ ಧರಿಸಿದ ಅದನ್ನು ಅತ್ತುತ್ತಮವಾಗಿ ಅದನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗಬೇಕು ಎಂದು ಕರೆ ನೀಡಿದರು.ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆ ವ್ಯವಸ್ಥಾಪಕರಾದ ವಂ. ಫಾ. ವಿಜಯಕುಮಾರ್ ಮಾತನಾಡಿ, ಭಾರತ ದೇಶವು ಸರ್ವ ಜನಾಂಗದ ಶಾಂತಿಯ ಎಂಬ ಖ್ಯಾತಿಗೆ ಪಾತ್ರವಾಗಿದ್ದು, ಭಾರತ ದೇಶದ ಭವ್ಯ ಪರಂಪರೆ ಇತಿಹಾಸ ಪದ್ಧತಿ ಇಲ್ಲಿಯ ಜನ ಜೀವನದ ಪ್ರತಿಯೊಂದನ್ನು ಪ್ರೀತಿಸಿ, ಗೌರವಿಸಿ, ಪರಸ್ಪರ ಸೌಹಾರ್ದತೆಯಿಂದ ಬಾಳಬೇಕು ಎಂದು ಕರೆ ನೀಡಿದರು.
ಸುಂಟಿಕೊಪ್ಪ ಪೊಲೀಸರ ಧ್ವಜ ವಂದನೆಯೊಂದಿಗೆ ರಾಷ್ಟ್ರಧ್ವಜವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್. ಸುನಿಲ್ ಕುಮಾರ್ ನೆರವೇರಿಸಿದರು.ನಂತರ ಸಂತ ಮೇರಿ, ಸಂತ ಅಂತೋಣಿ, ಸುಂಟಿಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸರ್ಕಾರಿ ಪ್ರೌಢಶಾಲೆ, ಸರ್ಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಂದ ಬ್ಯಾಂಡ್ ವಾದ್ಯದೊಂದಿಗೆ ಪಥ ಸಂಚಲನ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಗ್ರಾ. ಪಂ. ಅಧ್ಯಕ್ಷ ಪಿ. ಆರ್. ಸುನಿಲ್ಕುಮಾರ್ 78ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳನ್ನು ಕೋರಿ ಎಲ್ಲ ಕ್ಷೇತ್ರದ ದೇಶ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದು ಹೇಳಿದರು.ವಿವಿಧ ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಕಳೆದ ಸಾಲಿನಲ್ಲಿ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಶಾಲು ಹೊದಿಸಿ, ಪ್ರಮಾಣ ಪತ್ರ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಗೊಂಡಿರುವ ಎಎಸ್ಐ ಪಾರ್ಥ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಈ ಕಾರ್ಯಕ್ರಮದ ಮೊದಲಿಗೆ ಸಂತ ಅಂತೋಣಿ ಶಾಲಾ ಮಕ್ಕಳು ಪ್ರಾರ್ಥಿಸಿ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಕಾರ್ಯದರ್ಶಿ ರಹೆನಾ ಫೈರೋಜ್ ಸ್ವಾಗತಿಸಿ, ರಫೀಕ್ ಖಾನ್ ನಿರೂಪಿಸಿದರು.
ಮುಖ್ಯ ಅತಿಥಿಗಳಾಗಿ ಗ್ರಾ.ಪಂ. ಉಪಾಧ್ಯಕ್ಷೆ ಶಿವಮ್ಮಮಹೇಶ್, ಸದಸ್ಯರಾದ ಪಿ.ಎಫ್.ಸಬಾಸ್ಟೀನ್, ಮಂಜುನಾಥ್, ಆಲಿಕುಟ್ಟಿ, ಪ್ರಸಾದ್ ಕುಟ್ಟಪ್ಪ, ಶಬ್ಬೀರ್, ಶಾಂತಿ, ವಸಂತಿ, ನಾಗರತ್ನ, ಮಾಜಿ ಅಧ್ಯಕ್ಷ ಕೆ.ಇ.ಕರೀಂ, ರೋಸ್ಮೇರಿ ರಾಡ್ರಿಗಸ್, ತಾ. ಪಂ. ಮಾಜಿ ಸದಸ್ಯೆ ಓಡಿಯಪ್ಪನ ವಿಮಲಾವತಿ, ಮಾಜಿ ಉಪಾಧ್ಯಕ್ಷ ಸದಾಶಿವ ರೈ, ಪಂಚಾಯಿತಿ ಲೆಕ್ಕಾ ಪರಿಶೋಧಕಿ ಚಂದ್ರಕಲಾ, ಬಿಲ್ಕಲೆಕ್ಟರ್ ಶ್ರೀನಿವಾಸ್, ಪ್ರಜಾ ಪರಿವರ್ತನ ಸಮಿತಿ ಸಂಚಾಲಕ ಮುತ್ತಪ್ಪ, ತಲೆಹೊರೆ ಕಾರ್ಮಿಕ ಕನ್ನಡಾಭಿಮಾನಿ ಸಂಘದ ಅಧ್ಯಕ್ಷ ಸಂತೋಷ್, ತಲೆಹೊರೆ ಕಾರ್ಮಿಕ ಸಂಘದ ಅಧ್ಯಕ್ಷ ಹರೀಶ್, ವಿವಿಧ ಶಾಲಾ-ಕಾಲೇಜುಗಳ ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆ ಮುಖ್ಯೋಪಾಧ್ಯಾಯರಾದ ಸೆಲ್ವರಾಜ್, ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಜೂವಿಟ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯಿನಿ ಗೀತಾ, ಪ್ರೌಢಶಾಲೆ ಮುಖ್ಯೋಪಾಧ್ಯಾಯರಾದ ಬಾಲಕೃಷ್ಣ, ಸರ್ಕಾರಿ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಶ್ರೀಲತಾ ಹಾಗೂ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಸ್ತ್ರೀ ಶಕ್ತಿ ಸಂಘಗಳ ಪ್ರತಿನಿಧಿಗಳು ಇದ್ದರು.