ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಪ್ರಭು ಶ್ರೀರಾಮನ ಮಂದಿರ ಲೋಕಾರ್ಪಣೆಯಾಗುತ್ತಿರುವುದು ಪ್ರತಿ ಭಾರತೀಯನ ಭಕ್ತಿಯ ಪ್ರತೀಕ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಉಮೇಶ್ ಕಾರಜೋಳ ಹೇಳಿದರು.ಅಯೋಧ್ಯೆಯಲ್ಲಿ ಐತಿಹಾಸಿಕ ಪ್ರಭು ಶ್ರೀರಾಮನ ಪ್ರಾಣಪ್ರತಿಷ್ಠೆ ನಡೆಯಲಿರುವ ಹಿನ್ನೆಲೆಯಲ್ಲಿ ದೇಶದಾದ್ಯಂತ ಎಲ್ಲ ದೇಗುಲ ಮತ್ತು ತೀರ್ಥಕ್ಷೇತ್ರಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಲು ಪ್ರಧಾನಿಶ್ರೀ ನರೇಂದ್ರ ಮೋದಿ ಕರೆ ಮೇರೆಗೆ ವಿಜಯಪುರ ನಗರದ ವಾರ್ಡ್ ನಂ.1ರ ಅದೃಷ್ಟಲಕ್ಷ್ಮಿದೇವಸ್ಥಾನದ ಆವರಣದಲ್ಲಿ ಸ್ವಚ್ಛತಾ ಕಾರ್ಯದ ನೇತೃತ್ವ ವಹಿಸಿ ಮಾತನಾಡಿದ ಅವರು, ರಾಮನ ಜನ್ಮಭೂಮಿಯಲ್ಲಿ ಭವ್ಯ ಮಂದಿರ ಲೋಕಾರ್ಪಣೆಗೆ ಕ್ಷಣಗಣನೆ ಆರಂಭವಾಗಿದೆ ಎಂದರು.
ಇದು ಪ್ರತಿಯೊಬ್ಬರು ಸಂತಸ ಪಡುವ ಸಂಗತಿ. ಮರ್ಯಾದಾ ಪುರಷೋತ್ತಮ ರಾಮ ಆದರ್ಶ ಆಡಳಿತದ ಪ್ರತಿರೂಪ ಕೂಡ ಹೌದು. ಹೀಗಾಗಿ ರಾಮಮಂದಿರ ಲೋಕಾರ್ಪಣೆಯನ್ನು ಜನಸೇವಾ ಕಾರ್ಯ, ಭಕ್ತಿ ಭಾವ ಮೂಡಿಸುವ ಮಂದಿರಗಳ ಸ್ವಚ್ಛತೆ ಕಾರ್ಯದ ಮೂಲಕ ಸೇವೆಯ ಮೂಲಕವೇ ಸಂಭ್ರಮಿಸಲಾಗುತ್ತಿದೆ. ಈ ಕಾರಣಕ್ಕೆ ಹೆಮ್ಮೆಯ ಪ್ರಧಾನಿ ಈ ಕರೆ ಕೊಟ್ಟಿದ್ದಾರೆ ಎಂದು ತಿಳಿಸಿದರು.ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಬಸವರಾಜ್ ಹೂಗಾರ, ಹಿರಿಯ ಧುರೀಣ ಮಹೇಶ್ ಒಡೆಯರ್, ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಶಿಂದೆ, ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಶ್ರೀಧರ್ ಬಿಜ್ಜರಗಿ, ಯುವ ಮೋರ್ಚಾ ಪದಾಧಿಕಾರಿಗಳಾದ ಪರಶುರಾಮ್ ಹೊಸಪೇಟ, ದಶರಥ ಕಾಂಬಳೆ, ದಶರಥ ಕ್ಷೀರಸಾಗರ್, ಪಕ್ಷದ ಪದಾಧಿಕಾರಿಗಳು, ಸ್ಥಳೀಯ ಮುಖಂಡರು ಸೇರಿದಂತೆ ಕಾರ್ಯಕರ್ತರು, ಭಕ್ತರು ಭಾಗವಹಿಸಿದ್ದರು.ಎಲ್ಲರೂ ಸಹ ನಮ್ಮ ಭಕ್ತಿ ಕೇಂದ್ರಗಳ ಆವರಣಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಿ ಪುನೀತ ಭಾವ ಬೆಳೆಸಿಕೊಳ್ಳಬೇಕು.
ಉಮೇಶ್ ಕಾರಜೋಳ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರು.