ಕುಂದಾಪುರ: ಇಲ್ಲಿನ ಕೊಲ್ಲೂರು ಶ್ರೀ ಮುಕಾಂಬಿಕಾ ದೇವಾಲಯದಲ್ಲಿ ಕೇರಳದ ಯಾತ್ರಾರ್ಥಿಗಳ ಸುಮಾರು 80,000 ರು.ಗಳನ್ನು ಕಳ್ಳತನ ಮಾಡಿದ್ದ 3 ಮಂದಿ ಅಂತರ್ಜಿಲ್ಲಾ ಕಳವು ಆರೋಪಿಗಳನ್ನು 24 ಗಂಟೆಗಳಲ್ಲಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಹೊಸಮನೆ ನಿವಾಸಿ ನೇತ್ರಾವತಿ (33), ಬೋವಿ ಕಾಲನಿಯ ನಿವಾಸಿ ಶಾರದ (50) ಮತ್ತು ದುರ್ಗಮ್ಮ (44) ಬಂಧಿತರು. ಜೂ. 5ರಂದು ಕೇರಳದ ನಿಮಿಶಾ - ಪ್ರಜೋಶ್ ದಂಪತಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ದೇವರ ದರ್ಶನಕ್ಕೆ ಬಂದಿದ್ದು, ನಿಮಿಶಾ ಅವರು ಬೆಳಿಗ್ಗೆ ಸುಮಾರು 8.20 ಗಂಟೆಗೆ ತನ್ನ ವ್ಯಾನಿಟಿ ಬ್ಯಾಗ್‌ ನೋಡಿದಾಗ ಬ್ಯಾಗ್‌ನ ಜಿಪ್‌ ತೆರೆದುಕೊಂಡಿದ್ದು, ಒಳಗಿದ್ದ 80,000 ರು.ಗಳಿದ್ದ ಪರ್ಸ್‌ ಕಾಣೆಯಾಗಿತ್ತು. ತಕ್ಷಣ ಅವರು ಕೊಲ್ಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.ಕೊಲ್ಲೂರು ಪೊಲೀಸ್ ಠಾಣಾ ಉಪನಿರೀಕ್ಷಕರಾದ ವಿನಯ ಎಂ. ಕೊರ್ಲಹಳ್ಳಿ ಮತ್ತು ಭೀಮಶಂಕರ್‌ ಹಾಗೂ ಸಿಬ್ಬಂದಿ ಕಾರ್ಯಪ್ರವತ್ತರಾಗಿ ದೇವಾಲಯದ ಸಿಸಿಟಿವಿ ಕ್ಯಾಮರ, ಘಟನಾ ಸ್ಥಳದಲ್ಲಿ ಸಾರ್ವಜನಿಕರು ತೆಗೆದ ಫೊಟೋಗಳು ಮತ್ತು ತಾಂತ್ರಿಕ ಸಹಾಯದಿಂದ ಆರೋಪಿಗಳನ್ನು ಪತ್ತೆ ಮಾಡಿ, ಘಟನೆ ನಡೆದ 24 ಗಂಟೆಗಳೊಳಗೆ ಬಂಧಿಸಿದ್ದಾರೆ. ಆರೋಪಿಗಳಲ್ಲಿ ದುರ್ಗಮ್ಮ ಮೇಲೆ ಮೈಸೂರಿನ ಲಸ್ಕರ್ ಪೊಲೀಸ್ ಠಾಣೆ ಮತ್ತು ಭದ್ರಾವತಿ ಓಲ್ಡ್ ಟೌನ್ ಠಾಣೆಗಳಲ್ಲಿ 2 ಕಳ್ಳತನದ ಪ್ರಕರಣಗಳು, ಶಾರದ ಅವರ ಮೇಲೆ ಬೆಂಗಳೂರು ನಗರ ರೈಲ್ವೆ ಪೊಲೀಸ್‌ ಠಾಣೆಯಲ್ಲಿ 2 ಮತ್ತು ಮೈಸೂರಿನ ಅಶೋಕಪುರಂ ಪೊಲೀಸ್‌ ಠಾಣೆ ಮೈಸೂರು ಠಾಣೆಯಲ್ಲಿ 1 ಕಳ್ಳತನದ ಪ್ರಕರಣಗಳು ಈಗಾಗಲೇ ದಾಖಲಾಗಿವೆ.