ಸಾರಾಂಶ
ಕೆಂಪನಹಳ್ಳಿಯ ಗ್ರಾಮದೇವರಾದ ಶ್ರೀ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಭಕ್ತಿ ಗೀತೆ ಸಮರ್ಪಣಾ ಸಮಾರಂಭ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುದೇವರು ನಮ್ಮ ನಂಬಿಕೆ. ಪೂಜೆ ನಮ್ಮ ಆಚರಣೆ. ಆಚರಣೆಗಳ ಮೂಲಕ ನಂಬಿಕೆಗಳನ್ನು ಬಲಗೊಳಿಸಿಕೊಳ್ಳ ಬೇಕಾಗಿರುವುದರಿಂದ ನಮ್ಮಲ್ಲಿ ದೇವರ ಪೂಜೆಗೆ ಬಡತನವಿಲ್ಲ ಎಂದು ನಿವೃತ್ತ ಶಿಕ್ಷಕ ಕೆಂಪನಹಳ್ಳಿ ಮುಳ್ಳೇಗೌಡರು ಹೇಳಿದರು. ನಗರದ ಕೆಂಪನಹಳ್ಳಿಯ ಗ್ರಾಮದೇವರಾದ ಶ್ರೀ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಕಲ್ಕಟ್ಟೆ ಪುಸ್ತಕದ ಮನೆ, ಅಖಿಲ ಭಾರತೀಯ ಸಾಹಿತ್ಯ ಪರಿಷತ್, ಶ್ರೀ ಗುರುಕೃಪ ಸಂಗೀತ ಸೇವಾ ಟ್ರಸ್ಟ್, ಸೂರಂಕಣ, ದೀವಿಗೆ ಬಳಗದ ಆಶ್ರಯದಲ್ಲಿ ಇತ್ತೀಚೆಗೆ ಜರುಗಿದ ಭಕ್ತಿ ಗೀತೆ ಸಮರ್ಪಣಾ ಸಮಾರಂಭದಲ್ಲಿ ಮಾತನಾಡಿದರು.ನಮ್ಮ ಬೀರಲಿಂಗದೇವರು ಶಕ್ತಿಯನ್ನು ಮೆಚ್ಚುತ್ತಾನೆ. ಹಾಗಾಗಿ ಇಲ್ಲಿ ವೀರಗಾರರ ಸೇವೆ ಇರುತ್ತದೆ. ಭಕ್ತಿ ಪ್ರಧಾನ ಭಾವವೇ ನಾದ. ನಾದವೂ ವಿಶ್ವದ ಮಹಾಶಕ್ತಿ. ಇದು ಮನಸ್ಸನ್ನು ಪ್ರಶಾಂತಗೊಳಿಸುತ್ತದೆ. ಈ ದಿಸೆಯಲ್ಲಿ ಕಲ್ಕಟ್ಟೆ ಗಾನದೀವಿಗೆ ಸರಣಿ ನಿಜಕ್ಕೂ ಜನಸಾಮಾನ್ಯರಿಗೆ ನಾದೋಪಾಸನೆ ಪರಿಚಯ ಮಾಡಿಸುತ್ತಿದೆ, ವಿಶ್ವಶಾಂತಿಗೆ ಸಹಕರಿಸುತ್ತಿದೆ ಎಂದು ತಿಳಿಸಿದರು.ಅಂಧ ಮಕ್ಕಳ ಆಶಾಕಿರಣ ಶಾಲೆ ಮುಖ್ಯಶಿಕ್ಷಕ ಲಕ್ಷ್ಮಣಗೌಡ ಮಾತನಾಡಿ, ಪ್ರತೀ ದೇವಸ್ಥಾನಗಳು ನಮ್ಮ ನಂಬಿಕೆ ಕೇಂದ್ರಗಳು. ನಂಬಿಕೆ ಇಲ್ಲದೇ ಜೀವನವಿಲ್ಲ. ನಮ್ಮ ದೇಹದಲ್ಲಿನ ರಕ್ತಸಂಚಾರ ಸಹ ಲಯ ಬದ್ಧ ಸಂಗೀತದ ನಾದವನ್ನು ಹೊಂದಿದೆ. ನಾಗರಾಜರಾವ್ ಕಲ್ಕಟ್ಟೆ, ರೇಖಾನಾಗರಾಜರಾವ್ ಮತ್ತು ಕೆ.ಎನ್.ನಾಗಭೂಷಣ್ ಸಂಯೋಜನೆಯಲ್ಲಿ ಮೂಡಿ ಬರುತ್ತಿರುವ ಪ್ರತಿ ಹಾಡುಗಳೂ ನಮ್ಮೂರ ಧಾರ್ಮಿಕ ಶ್ರೀಮಂತಿಕೆ ತೋರಿಸುತ್ತದೆ. ಧಾರ್ಮಿಕತೆ ಇಲ್ಲದೇ ಬಾಳಿನಲ್ಲಿ ಪರಿಶುದ್ಧತೆ ಸಾಧ್ಯವಿಲ್ಲ ಎಂದರು.ದೇವಾಲಯ ಬುಡಕಟ್ಟು ಸಮಿತಿ ಕಾರ್ಯದರ್ಶಿ ಬಸಂತ್ ಮಾತನಾಡಿ, ಸ್ಥಳೀಯ ಕಲಾವಿದರು ನಡೆಸುತ್ತಿರುವ ಈ ಕಾರ್ಯಕ್ರಮ ನಿಜಕ್ಕೂ ಊರಿನವರು ಹೆಮ್ಮೆ ಪಡುವಂಥದ್ದು. ಮನೆ ಗೆದ್ದು ಮಾರು ಗೆಲ್ಲು ಎನ್ನುವುದು ಸತ್ಯವಾದ ಮಾತು. ನಾಗರಾಜರಾವ್ ಕಲ್ಕಟ್ಟೆ ಅವರು ಮನೆ, ಮಾರು ಎರಡನ್ನೂ ಗೆಲ್ಲುತ್ತಿರುವುದು ನಮ್ಮ ಹೆಮ್ಮೆ ಎಂದರು. ಅಭಾಸಾಪದ ಸಾಹಿತ್ಯಕೂಟದ ಸಂಚಾಲಕಿ ರೇಖಾ ನಾಗರಾಜರಾವ್ ಮೂವತ್ತೆರಡನೇ ಗೀತೆಯಾಗಿ ಬಂದ ಈ ಹಾಡು ಕಾನಡ ರಾಗದಲ್ಲಿದೆ. ಇಲ್ಲಿವರೆಗೆ ಇಪ್ಪತ್ತಾರು ರಾಗಗಳನ್ನು ತಂಡ ಬಳಸಿಕೊಂಡಿರುವುದಲ್ಲದೇ, ಪ್ರತಿ ಹಾಡಿನಲ್ಲೂ ಒಂದು ಚರಣದ ನಂತರ ಪಲ್ಲವಿಯ ಬಳಕೆಯಲ್ಲಿ ವಿಶಿಷ್ಠತೆ ತರಲಾಗಿದೆ ಎಂದರು.ಸಮಾರಂಭದಲ್ಲಿ ಅರ್ಚಕರಾದ ನಿಂಗಪ್ಪ, ಜಯಮ್ಮ, ಶೀಲಾ ಲಕ್ಷ್ಮಣಗೌಡ, ಗಾಯಕ ನಾಗರಾಜರಾವ್ ಕಲ್ಕಟ್ಟೆ, ಧರ್ಮ ಕೆ.ಎಸ್., ಶೈಲ, ರುಕ್ಮಿಣಿ, ಪುನೀತ್, ರಾಜೇಶ್, ಮಧು ಕೆ.ಎಂ., ಚಂದನ್, ವೀರಗಾರರಾದ ಡಂಕೇಶ್, ಮಂಜುನಾಥ್, ಬಾಲಕಲಾವಿದೆ ಮೈತ್ರೇಯಿ ಎಲ್.ಆರ್., ರಘು ಕೆ.ಎಂ., ಗ್ರಾಮಸ್ಥರು ಉಪಸ್ಥಿತರಿದ್ದರು.