2x20 ಎಂವಿಎ, 110/11 ಕೆವಿ ವಿದ್ಯುತ್ ಉಪಕೇಂದ್ರದ ಶಂಕುಸ್ಥಾಪನೆ
ಕನ್ನಡಪ್ರಭ ವಾರ್ತೆ ಸಿದ್ದಾಪುರಗ್ರಾಮೀಣ ಭಾಗದ ವೋಲ್ಟೇಜ್ ಸಮಸ್ಯೆ ನಿವಾರಿಸಿ, ಪ್ರತಿಯೊಬ್ಬರಿಗೂ ಗುಣಮಟ್ಟದ ವಿದ್ಯುತ್ ಒದಗಿಸುವುದು ನಮ್ಮ ಸರ್ಕಾರದ ಮುಖ್ಯ ಚಿಂತನೆಯಾಗಿದೆ ಎಂದು ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಭೀಮಣ್ಣ ಟಿ. ನಾಯ್ಕ ಹೇಳಿದರು.ತಾಲೂಕಿನ ಕಾನಸೂರು ಗ್ರಾಮದ ಅಡ್ಕಳ್ಳಿ ಕ್ರಾಸ್ ಬಳಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ವತಿಯಿಂದ ₹25.40 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ 2x20 ಎಂವಿಎ, 110/11 ಕೆವಿ ವಿದ್ಯುತ್ ಉಪಕೇಂದ್ರದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.ವಿದ್ಯುತ್ ಎಂಬುದು ಬಡವ, ಬಲ್ಲಿದ ಎನ್ನದೆ ಎಲ್ಲರಿಗೂ ಅತ್ಯಗತ್ಯವಾದ ಮೂಲಭೂತ ಸೌಕರ್ಯವಾಗಿದೆ. ನಮ್ಮ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದ್ದು, ಗೃಹಜ್ಯೋತಿ ಯೋಜನೆಯಡಿ ಪ್ರತಿ ಮನೆಗೆ 200 ಯೂನಿಟ್ವರೆಗೆ ಉಚಿತ ವಿದ್ಯುತ್ ನೀಡುವ ಮೂಲಕ ತಾಯಂದಿರ ಮತ್ತು ಅರ್ಹ ಫಲಾನುಭವಿಗಳ ಬಾಳಿಗೆ ಆಸರೆಯಾಗಿದೆ ಎಂದರು.ಹಿಂದೆ ಬಂಗಾರಪ್ಪನವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರೈತರಿಗೆ 10 HP ವರೆಗೆ ಉಚಿತ ವಿದ್ಯುತ್ ನೀಡಿ ಕ್ರಾಂತಿ ಮಾಡಿದ್ದನ್ನು ಸ್ಮರಿಸಿದ ಅವರು, ರೈತನಿಗೆ ನೀರು ಮತ್ತು ವಿದ್ಯುತ್ ಸಿಕ್ಕರೆ ಹಸಿರು ಕ್ರಾಂತಿ ಮಾಡಲು ಸಾಧ್ಯ. ರಾಜ್ಯದ ಬೇರೆಡೆ ರೈತರಿಗೆ 7-8 ಗಂಟೆ ವಿದ್ಯುತ್ ಸಿಕ್ಕರೆ, ನಮ್ಮ ಜಿಲ್ಲೆಗೆ ಅಧಿಕಾರಿಗಳು 24 ಗಂಟೆಯೂ ನಿರಂತರ ವಿದ್ಯುತ್ ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇಡೀ ರಾಜ್ಯದ ರೈತರಿಗೂ ದಿನದ 24 ಗಂಟೆಯೂ ವಿದ್ಯುತ್ ನೀಡುವ ನಿಟ್ಟಿನಲ್ಲಿ ಸರ್ಕಾರ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುತ್ತಿದೆ ಎಂದರು.ಉತ್ತರ ಕನ್ನಡ ಜಿಲ್ಲೆಯು ಶರಾವತಿ, ಗೇರುಸೊಪ್ಪ ಹಾಗೂ ಕೈಗಾ ಯೋಜನೆಗಳ ಮೂಲಕ ಇಡೀ ದೇಶಕ್ಕೆ ಬೆಳಕು ನೀಡಲು ತನ್ನ ಭೂಮಿಯನ್ನು ತ್ಯಾಗ ಮಾಡಿದೆ. ಆದರೆ ನಮ್ಮ ಕ್ಷೇತ್ರದಲ್ಲಿಯೇ ಗುಣಮಟ್ಟದ ವಿದ್ಯುತ್ ಕೊರತೆ ಇರುವುದನ್ನು ಮನಗಂಡು ಕ್ಷೇತ್ರದ ಅಭಿವೃದ್ಧಿಗೆ ದೊಡ್ಡ ಮೊತ್ತದ ಅನುದಾನ ಬಿಡುಗಡೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರಿಗೆ ಕ್ಷೇತ್ರದ ಜನತೆಯ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ. ಕಳೆದ 3 ವರ್ಷಗಳಲ್ಲಿ ತಮ್ಮ ಕ್ಷೇತ್ರಕ್ಕೆ ಗ್ರಾಮೀಣ ರಸ್ತೆ, ಸೇತುವೆ ಹಾಗೂ ಸರ್ಕಾರಿ ಕಟ್ಟಡಗಳ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ₹500 ಕೋಟಿಗೂ ಅಧಿಕ ಹಣವನ್ನು ಸರ್ಕಾರ ನೀಡಿದೆ. ಆಡುಕಟ್ಟಾ, ಹುಲೇಕಲ್ನಲ್ಲೂ ವಿದ್ಯುತ್ ಉಪಕೇಂದ್ರ ಸ್ಥಾಪನೆಗೆ ಇಂಧನ ಸಚಿವರಿಂದ ಭರವಸೆ ಸಿಕ್ಕಿದೆ ಎಂದು ಮಾಹಿತಿ ನೀಡಿದರು.ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಜಿ. ನಾಗರಾಜ, ಬಗರ್ ಹುಕುಂ ಸಮಿತಿ ಸದಸ್ಯ ಎಸ್.ಕೆ. ಭಾಗವತ್ ಮಾತನಾಡಿದರು.ಕಾರ್ಯಕ್ರಮದಲ್ಲಿ ಪ್ರಮುಖರಾದ ಸುಮಾ ಉಗ್ರಾಣಕರ್, ಶಿರಸಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ್ ಗೌಡರ್, ತಾಪಂ ಕಾರ್ಯನಿರ್ವಹಣಾಧಿಕಾರಿ ದೇವರಾಜ ಹಿತ್ಲಕೊಪ್ಪ, ವಿದ್ಯುತ್ ನಿಗಮದ ಶಿಲ್ಪಾ ಎಂ., ಕೆ.ವಿ. ಪಾಗಿ, ಸುನಿಲ್ ಕುಮಾರ್, ವಿನಯ್ ರಾಚೋಟಿ ಉಪಸ್ಥಿತರಿದ್ದರು.ಕೌಶಲ್ಯಾ ಪ್ರಾರ್ಥಿಸಿದರು, ಕುಮಾರ್ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ನಾಗರಾಜ ಪಾಟೀಲ್ ಸ್ವಾಗತಿಸಿದರು.