ರಾರಾಜಿಸುತ್ತಿರುವ ಕೇಸರಿ ಧ್ವಜ, ಕಟೌಟ್ । ಅನಂತಕುಮಾರ ಹೆಗಡೆ ಭಾಷಣದತ್ತ ಎಲ್ಲರ ಚಿತ್ತ: ಭಾರೀ ಬಂದೋಬಸ್ತ್
ಕನ್ನಡಪ್ರಭ ವಾರ್ತೆ ಭಟ್ಕಳಪಟ್ಟಣದ ಹಿಂದೂ ಸಮ್ಮೇಳನ ವತಿಯಿಂದ ಭಾನುವಾರ ಸಂಜೆ ನಡೆಯುವ ನಗರ ಹಿಂದೂ ಸಂಗಮ ಕಾರ್ಯಕ್ರಮಕ್ಕೆ ಭಟ್ಕಳ ಪಟ್ಟಣ ಸಜ್ಜಾಗಿದ್ದು, ಮುಖ್ಯರಸ್ತೆ ಕೇಸರಿ ಪತಾಕೆ, ಧ್ವಜ ಮತ್ತು ಕಟೌಟ್ ಗಳಿಂದ ರಾರಾಜಿಸುತ್ತಿದೆ.
ಭಾನುವಾರ ಸಂಜೆ ಪಟ್ಟಣದ ಹಳೇ ತಹಸೀಲ್ದಾರ ಕಚೇರಿ ಹಿಂಬದಿಗಿರುವ ಮೈದಾನದಲ್ಲಿ ಬೃಹತ್ ಹಿಂದೂ ಸಂಗಮ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 3.30ಕ್ಕೆ ಈ ಪ್ರಯುಕ್ತ ಪಟ್ಟಣದಲ್ಲಿ ಬೃಹತ್ ಶೋಭಾ ಯಾತ್ರೆ ನಡೆಯಲಿದೆ. ಸಂಜೆ 5 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಬಂಟ್ವಾಳ ಮಾಣಿಲದ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಪಾಲ್ಗೊಳ್ಳಲಿದ್ದಾರೆ. ಮಾಜಿ ಸಂಸದ ಡಾ. ಅನಂತಕುಮಾರ ಹೆಗಡೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಭಟ್ಕಳದ ನಗರ ಹಿಂದೂ ಸಂಗಮ ಕಾರ್ಯಕ್ರಮಕ್ಕೆ ಮಾಜಿ ಸಂಸದ ಅನಂತಕುಮಾರ ಹೆಗಡೆ ಆಗಮಿಸುತ್ತಿರುವುದರಿಂದ ಭಾರೀ ಮಹತ್ವ ಪಡೆದಿದ್ದು, ಭಟ್ಕಳ ನಗರ ಸೇರಿದಂತೆ ಸುತ್ತಮುತ್ತಲಿನ ತಾಲೂಕು ಮತ್ತು ಊರುಗಳಿಂದ ಸಾವಿರಾರು ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ.ಕಳೆದ ಲೋಕಸಭಾ ಚುನಾವಣೆ ಬಿಜೆಪಿ ಟಿಕೆಟ್ ತಪ್ಪಿದ ಬಳಿಕ ಅನಂತಕುಮಾರ ಹೆಗಡೆ ಅವರು ಯಾವುದೇ ಸಾರ್ವಜನಿಕ ಕಾರ್ಯಕ್ರಮದ ಪಾಲ್ಗೊಂಡಿರಲಿಲ್ಲ. ಕಳೆದ ಎರಡು ವರ್ಷದ ಬಳಿಕ ಇದೇ ಮೊದಲ ಬಾರಿಗೆ ಅವರು ಭಟ್ಕಳ ನಗರದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಳೆದ 35 ವರ್ಷಗಳ ಹಿಂದೆ ಜಿಲ್ಲಾ ಹಿಂದೂ ಜಾಗರಣಾ ವೇದಿಕೆ ಸಂಚಾಲಕರಿದ್ದ ಸಂದರ್ಭದಲ್ಲಿ ಅವರು ಇದೇ ಸ್ಥಳದಲ್ಲಿ ಭಾಷಣ ಮಾಡಿ ಗಮನ ಸೆಳೆದಿದ್ದರು. ಇದೀಗ ಅವರು ಮತ್ತೆ ಇದೀಗ ಅದೇ ಸ್ಥಳದಲ್ಲಿ ಹಿಂದುತ್ವದ ಬಗ್ಗೆ ದಿಕ್ಸೂಚಿ ಭಾಷಣ ಮಾಡುತ್ತಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಅವರ ಭಾಷಣದತ್ತ ಎಲ್ಲರ ಗಮನ ಎನ್ನುವಂತಾಗಿದೆ.
ಭಟ್ಕಳದ ಹಿಂದೂ ಸಂಗಮ ಕಾರ್ಯಕ್ರಮ ಅನಂತಕುಮಾರ ರಾಜಕೀಯ ಸಕ್ರಿಯತೆಗೆ ಕಾರಣವಾಗಲಿದೆ ಎನ್ನುವ ಅಭಿಪ್ರಾಯ ಕೇಳಿ ಬಂದಿದೆ. ಅದೇನಿದ್ದರೂ ಸಹ ಹಿಂದೂ ಸಂಗಮ ಕಾರ್ಯಕ್ರಮಕ್ಕೆ ಅನಂತಕುಮಾರ ಹೆಗಡೆ ದಿಕ್ಸೂಚಿ ಭಾಷಣಕಾರರಾಗಿ ಪಾಲ್ಗೊಳ್ಳುತ್ತಿರುವುದು ಅವರ ಅಭಿಮಾನಿಗಳು, ಹಿಂದೂ ಪರ ಸಂಘಟನೆ ಮತ್ತು ಬಿಜೆಪಿ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸಿಗೆ ಕಾರಣವಾಗಿದೆ.
ಪಟ್ಟಣದಲ್ಲಿ ಮುಂಜಾಗ್ರತಾ ಕ್ರಮವಾಗಿ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಶನಿವಾರ ಪಟ್ಟಣದಲ್ಲಿ ಪೊಲೀಸ್ ಪಥ ಸಂಚಲನ ನಡೆಸಲಾಯಿತು. ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ತೀವ್ರ ನಿಗಾ ಇಡಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಭಟ್ಕಳದಲ್ಲೇ ಮುಕ್ಕಾಂ ಹೂಡಿದ್ದಾರೆ.