ಗುಂಡಿ ಬಿದ್ದ ರಸ್ತೇಲೆ ಪಯಣ,‘ಕರಂಜಿ’ ಗ್ರಾಮಸ್ಥರು ಹೈರಾಣ

| Published : Jan 04 2025, 12:33 AM IST

ಸಾರಾಂಶ

ಕುಂಭಕರ್ಣ ನಿದ್ರೆಯಲ್ಲಿರುವ ಅಧಿಕಾರಿಗಳು ಸರ್ಕಾರದ ಮುಂದೆ ವಸ್ತುಸ್ಥಿತಿ ಇಟ್ಟು. ಜನರಿಗೆ ಅನುಕೂಲ ಮಾಡಿಕೊಡಬೇಕು ಎಂಬುದೇ ಕರಂಜಿ ಗ್ರಾಮಸ್ಥರ ಪ್ರಬಲ ಬೇಡಿಕೆಯಾಗಿದೆ.

ಕನ್ನಡಪ್ರಭ ವಾರ್ತೆ, ಔರಾದ್‘ನಾವು ಬಾರ್ಡರ್ ದವರು ಇದ್ದ ಸಲೇಕ್ ನಮ್ಮೂರಿಗ ರೋಡ್ ಇಷ್ಟೊಂದ್‌ ಹಾಳಾಗೇದ ದೀನಾ ಜೀವ ಕೈಯ್ಯಾಗ ಹಿಡಕೊಂಡ ಹೋಗಲತಿದೆವ್. ನಮ್ಮ ಸಮಸ್ಯೆ ಯಾರಿಗ ಹೇಳಿದ್ರ ಪ್ರಯೋಜನ ಆಗ್ತಿಲ್ಲ’ ಹೀಗೆ ಅಸಹಾಯಕರಾಗಿ ನೋವು ತೊಡಿಕೊಂಡು ರಸ್ತೆ ದುರಾವಸ್ಥೆಯ ಬಗ್ಗೆ ಅಳಲು ತೋಡಿಕೊಳ್ಳುತ್ತಾರೆ ಕರಂಜಿ ಗ್ರಾಮಸ್ಥರು.

ತಾಲೂಕಿನ ತೆಲಂಗಾಣ ಗಡಿಯಲ್ಲಿರುವ ಕರಂಜಿ ಗ್ರಾಮಸ್ಥರು ಸರ್ಕಾರ ನಮ್ಮೂರಿಗೆ ಮಲತಾಯಿ ಧೋರಣೆ ತೋರುತ್ತಿದೆ. ನಾಲ್ಕು ವರ್ಷಗಳಿಂದ ಹದಗೆಟ್ಟ ರಸ್ತೆ ರಿಪೇರಿ ಮಾಡೋದ್‌ ಬಿಡಿ, ರಸ್ತೆ ಮಧ್ಯೆ ಬಿದ್ದ ಗುಂಡಿಗಳಿಗೂ ಒಂದಿಷ್ಟು ಮಣ್ಣು ಹಾಕಿ ಮುಚ್ಚುವ ಕೆಲಸವನ್ನೂ ಮಾಡಿಲ್ಲ ಎಂದು ಗ್ರಾಮದ ಸಂಗಪ್ಪರೆಡ್ಡಿ ಹೇಳಿದ್ದಾರೆ.ಲೋಕೊಪಯೋಗಿ ಇಲಾಖೆ ಅಡಿಯಲ್ಲಿ ಬರುವ ಈ ರಸ್ತೆ ಅಂದಾಜು 6.5 ಕಿಲೋ ಮಿಟರ್ ಉದ್ದದ ರಸ್ತೆ ಸಂಪೂರ್ಣವಾಗಿ ಹದಗೆಟ್ಟು ಹೊಗಿದೆ. ರಸ್ತೆಗಳ ನಡುವೆ ಸಾಮೂಹಿಕ ಗುಂಡಿಗಳು ಬಿದ್ದು ರಸ್ತೆ ಗುಂಡಿಗಳ ಆಗರವಾಗಿ ನಿರ್ಮಾಣವಾಗಿದೆ.ಮಳೆಗಾಲದಲ್ಲಂತೂ ಈ ರಸ್ತೆ ಮೇಲೆ ಸಂಚಾರ ಮಾಡುವುದು ಕಷ್ಟಕರವಾಗಿದೆ. ದ್ವಿಚಕ್ರ ಸವಾರರಂತೂ ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾಗಿದೆ. ಹದಗೆಟ್ಟ ರಸ್ತೆಯಿಂದಾಗಿ ಸಾರಿಗೆ ಬಸ್ ಗಳ ಓಡಾಟಕ್ಕೂ ಕಡಿವಾಣ ಹಾಕಲಾಗಿದೆ. ಇದರಿಂದ ಗ್ರಾಮದ ಸರ್ವಾಂಗೀಣ ಅಭಿವೃದ್ಧಿ ಹೀನವಾಗಿ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಅಂತಾರೆ ಸ್ಥಳೀಯ ಮುಖಂಡ ರಾಮರೆಡ್ಡಿ.ಲೋಕೊಪಯೋಗಿ ಇಲಾಖೆಯಿಂದ ಈ ಹಿಂದೆ ನಿರ್ಮಿಸಲಾದ ರಸ್ತೆ ಡಾಂಬರು ಸಂಪೂರ್ಣ ಕಿತ್ತಕೊಂಡು ಹೋಗಿದೆ. ಈಗ ಹೊಸ ರಸ್ತೆ ನಿರ್ಮಾಣ ಮಾಡಲಿಕ್ಕೆ ಎರಡು ಬಾರಿ ಪ್ರಸ್ತಾವನೆ ಸಲ್ಲಿಸಿದ್ರೂ ಅನುದಾನದ ಕೊರತೆಯಿಂದಾಗಿ ಪ್ರಸ್ತಾವನೆ ನನೆಗುದಿಗೆ ಬಿದ್ದಿರುವ ಕುರಿತು ಇಲಾಖೆಯ ಹೆಸರು ಹೆಳಲಿಚ್ಚಿಸದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.ಒಟ್ಟಿನಲ್ಲಿ ಹದಗೆಟ್ಟ ರಸ್ತೆ ದುರಸ್ತಿ ಮಾಡುವ ಕೆಲಸಕ್ಕೆ ಅಧಿಕಾರಿಗಳು ಮುಂದಾಗಬೇಕು. ಕುಂಭಕರ್ಣ ನಿದ್ರೆಯಲ್ಲಿರುವ ಅಧಿಕಾರಿಗಳು ಸರ್ಕಾರದ ಮುಂದೆ ವಸ್ತುಸ್ಥಿತಿ ಇಟ್ಟು. ಜನರಿಗೆ ಅನುಕುಕೂಲ ಮಾಡಿಕೊಡಬೇಕು ಎಂಬುದೆ ಸ್ಥಳಯರ ಪ್ರಬಲ ಬೇಡಿಕೆಯಾಗಿದೆ.