ಸಾರಾಂಶ
ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ಅಳವಡಿಸಲಾಗಿರುವ ಜಾಮರ್ನಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ನಿವಾರಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿ, ಜೈಲು ಅಧಿಕಾರಿಗೆ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಬಳ್ಳಾರಿ
ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ಅಳವಡಿಸಲಾಗಿರುವ ಜಾಮರ್ನಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ನಿವಾರಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿ, ಜೈಲು ಅಧಿಕಾರಿಗೆ ಮನವಿ ಸಲ್ಲಿಸಿದರು.ಜೈಲು ಸುತ್ತಮುತ್ತಲಿನ ಪ್ರದೇಶದಲ್ಲಿ ನಿತ್ಯದ ವಾಣಿಜ್ಯ ಚಟುವಟಿಕೆಗಳಿಗೆ ತೀವ್ರ ಅಡ್ಡಿಯಾಗಿದೆ. ಬಳ್ಳಾರಿ ಕೇಂದ್ರ ಕಾರಾಗೃಹದ ಸುತ್ತಮುತ್ತ ನೂರಾರು ವ್ಯಾಪಾರ ಮಳಿಗೆಗಳಿವೆ. ಆದರೆ, ನೆಟ್ವರ್ಕ್ ಸಿಗದೆ ಒದ್ದಾಡುವಂತಾಗಿದೆ. ಶಾಲಾ-ಕಾಲೇಜು, ಹೋಟೆಲ್, ಆಸ್ಪತ್ರೆಗಳಿಗೂ ಜಾಮರ್ನಿಂದ ಸಮಸ್ಯೆಯಾಗಿ ಪರಿಣಮಿಸಿದೆ. ಬಹುತೇಕ ಜನರ ವ್ಯಾಪಾರ ವಹಿವಾಟು ಆನ್ಲೈನ್ನಲ್ಲಿಯೇ ನಡೆಯುತ್ತಿದ್ದು, ಜಾಮರ್ ನಿಂದ ನಿತ್ಯದ ವ್ಯವಹಾರಕ್ಕೂ ಕುತ್ತು ಬಂದೊದಗಿದೆ. ತುರ್ತು ಸೇವೆ, ಡಿಜಿಟಲ್ ಪಾವತಿಗೆ ತೊಂದರೆಯಾಗಿದ್ದು, ಜಾಮರ್ ಅಳವಡಿಕೆಯಿಂದಾಗಿ ದೈನಂದಿನ ಜನಜೀವನದ ಮೇಲೆ ಪರಿಣಾಮ ಬೀರಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಇದೇ ವೇಳೆ ಮಾತನಾಡಿದ ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ, ಪಕ್ಷದ ಜಿಲ್ಲಾಧ್ಯಕ್ಷ ಅನಿಲ್ಕುಮಾರ್ ಮೋಕಾ, ಜೈಲ್ನಲ್ಲಿ 10 ಜಾಮರ್ಗಳನ್ನು ಅಳವಡಿಸಿರುವುದರಿಂದ ಸುತ್ತಮುತ್ತಲ ಪ್ರದೇಶಗಳಲ್ಲಿ ನೆಟ್ವರ್ಕ್ ಕಡಿತಗೊಂಡಿದೆ. ಪಾರ್ವತಿನಗರ, ಗಾಂಧಿನಗರ, ಶಾಸ್ತ್ರಿನಗರ, ಬಸವನಕುಂಟೆ ಸೇರಿ ಸುತ್ತಮುತ್ತಲ ಪ್ರದೇಶಗಳಲ್ಲಿ ನಿತ್ಯ ಜಾಮರ್ನ ಸಮಸ್ಯೆ ಎದುರಿಸುವಂತಾಗಿದೆ. ಮೊಬೈಲ್ ಮಾತನಾಡುತ್ತಿರುವಾಗಲೇ ಸಂಭಾಷಣೆ ಸ್ಥಗಿತಗೊಳ್ಳುತ್ತವೆ. ಡಿಜಿಟಲ್ ಮೂಲಕ ವ್ಯವಹಾರ ಮಾಡುವವರಿಗೆ ತೀವ್ರ ತೊಂದರೆಯಾಗಿದೆ. ಇತ್ತೀಚೆಗೆ ಸಣ್ಣಪುಟ್ಟ ವ್ಯಾಪಾರಿಗಳು ಡಿಜಿಟಲ್ ಪಾವತಿಯನ್ನು ಅಳವಡಿಸಿಕೊಂಡಿರುವುದರಿಂದ ಜೈಲು ಜಾಮರ್ ವ್ಯಾಪಾರಿಗಳಿಗೆ ತೀವ್ರ ಸಮಸ್ಯೆ ತಂದೊಡ್ಡಿದೆ. ಈ ಸಂಬಂಧ ಜೈಲು ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಜಾಮರ್ ಅಳವಡಿಕೆಯಿಂದಾಗಿ ಸಾರ್ವಜನಿಕರ ಮೇಲಾಗುತ್ತಿರುವ ಸಮಸ್ಯೆಗೆ ಕೂಡಲೇ ಕಡಿವಾಣ ಬೀಳಬೇಕು. ಜೈಲು ಅಧಿಕಾರಿಗಳು ಈ ಬಗ್ಗೆ ಸೂಕ್ತ ಗಮನ ಹರಿಸಬೇಕು. ಇಲ್ಲದೇ ಹೋದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.ಪ್ರತಿಭಟನೆಯ ಬಳಿಕ ಜೈಲು ಅಧಿಕಾರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿ, ಜಾಮರ್ನಿಂದಾಗುತ್ತಿರುವ ಸಮಸ್ಯೆ ನೀಗಿಸುವಂತೆ ಒತ್ತಾಯಿಸಿದರು. 1ನೇ ವಾರ್ಡ್ನ ಪಾಲಿಕೆ ಸದಸ್ಯ ಗುಡಿಗಂಟಿ ಹನುಮಂತ, ಬಿಜೆಪಿ ಮುಖಂಡರಾದ ಪುಷ್ಪಲತಾ, ರಾಮಲಿಂಗಪ್ಪ ಮತ್ತಿತರರಿದ್ದರು.