ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು
ಪಟ್ಟಣದ ರಾಘವೇಂದ್ರ ಮಠದ ಮುಂಭಾಗದಲ್ಲಿ ವಿದ್ಯುತ್ ತಂತಿಗಳು ಜೋತು ಬಿದ್ದಿದ್ದು, ಸಾವು- ನೋವು ಸಂಭವಿಸುವ ಮೊದಲು ಚೆಸ್ಕಾಂ ಎಚ್ಚೆತ್ತು ಸರಿಪಡಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.11ನೇ ವಾರ್ಡ್ ನಲ್ಲಿ ರಾಘವೇಂದ್ರಮಠದ ಎದುರು ಇರುವ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಮತ್ತು ಬೀದಿ ದೀಪ ಅಳವಡಿಸಲು ಕಂಬಗಳ ಮೂಲಕ ಹಾದು ಹೋಗಿರುವ ವಿದ್ಯುತ್ ತಂತಿಗಳು ನೆಲ ಮಟ್ಟದಿಂದ ಕೇವಲ ಎಂಟು ಅಡಿ ಎತ್ತರವಿದ್ದು ತಂತಿ ನೆಲದ ಮೇಲೆ ಬಿದ್ದರೆ ಅಥವಾ ಮರಗಳಿಗೆ ತಾಕಿದರೆ ಸಾವು ಗ್ಯಾರಂಟಿ. ಗೃಹೋಪಯೋಗಿ ವಸ್ತುವನ್ನು ಮೇಲೆ ಎತ್ತಿಕೊಂಡು ಹೋಗುವಾಗ ವಿದ್ಯುತ್ ತಗುಲುವ ಸಾಧ್ಯತೆಗಳಿವೆ. ಆದ್ದರಿಂದ ಸ್ಥಳೀಯರು ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ. ರಾಘವೇಂದ್ರ ಮಠದ ಎದುರು ಇರುವ ಅರಳಿ ಮರದ ಕೊಂಬೆಗಳು ತಂತಿಯ ಮೇಲೆ ಬೀಳುತ್ತಿರುವುದರಿಂದ ವಿದ್ಯುತ್ ತಂತಿ ಕೆಳಕ್ಕೆ ಬಾಗುತ್ತಿವೆ. ಮತ್ತು ಗಾಳಿ, ಮಳೆ ಬಂದರೆ ತಂತಿಗಳು ಒಂದಕ್ಕೊಂದು ಸ್ಪರ್ಶವಾಗಿ ಬೆಂಕಿ ಬರುತ್ತಿದೆ. ಸೆಸ್ಕ್ ಗೆ ಈ ಬಗ್ಗೆ ಸಾಕಷ್ಟು ಬಾರಿ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ, ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಿ ಅರಳಿ ಮರದ ಕೊಂಬೆಗಳನ್ನು ಕತ್ತರಿಸಿ, ಬಾಗಿರುವ ತಂತಿಗಳನ್ನು ಎತ್ತರಿಸಿ. ಶಾಶ್ವತ ಪರಿಹಾರ ನೀಡಬೇಕೆಂದು ರಾಘವೇಂದ್ರ ಮಠದ ಆರ್ಚಕ ಸುಧೀಂದ್ರ, ಸ್ಥಳೀಯ ನಾಗರಿಕರಾದ ಲಕ್ಷ್ಮೀಕಾಂತ್, ವಸಂತ, ತೇಜು, ಶಿವು ಆಗ್ರಹಿಸಿದ್ದಾರೆ.
ಸೆಸ್ಕ್ ಎಇಇ ಬಸವರಾಜು ಈ ಬಗ್ಗೆ ಮಾತನಾಡಿ, ಸಮಸ್ಯೆಯನ್ನು ಶೀಘ್ರ ಬಗೆಹರಿಸಲಾಗುವುದು ಎಂದು ಹೇಳಿದ್ದಾರೆ.