ಮಕ್ಕಳಿಗೆ ಚಿಕ್ಕಂದಿನಿಂದಲೇ ಗುಣ ಮಟ್ಟದ ಶಿಕ್ಷಣ, ಸಂಸ್ಕಾರ ಮತ್ತು ಮೌಲ್ಯಗಳನ್ನು ಕಲಿಸಿದ್ದೇ. ಆದರೆ, ಅಂತಹ ಮಕ್ಕಳು ತಮ್ಮ ಸ್ವಂತ ಶಕ್ತಿಯಿಂದ ಸುಂದರ ಬದುಕನ್ನು ಕಟ್ಟಿಕೊಳ್ಳುತ್ತಾರೆ. ಹಿಂದಿನ ಕಾಲದಲ್ಲಿ ಅವಿಭಕ್ತ ಕುಟುಂಬವಿತ್ತು. ಹಿರಿಯರು ಹೇಗೆ ಬದುಕಬೇಕೆಂಬುದನ್ನು ಮಕ್ಕಳಿಗೆ ಕಲಿಸುತ್ತಿದ್ದರು. ಆದರೀಗ ಆ ಪರಸ್ಥಿತಿ ಇಲ್ಲ.

ಕನ್ನಡಪ್ರಭ ವಾರ್ತೆ ನಾಗಮಂಗಲ

ವಿಜ್ಞಾನ ಮತ್ತು ತಂತ್ರಜ್ಞಾನ ಮುಂದುವರೆಯುತ್ತಿರುವ ಸನ್ನಿವೇಶದಲ್ಲಿ ಮಕ್ಕಳನ್ನು ಸ್ಪರ್ಧಾತ್ಮಕ ಯುಗಕ್ಕೆ ಪರಿಚಯಿಸಬೇಕಿದೆ. ಉತ್ತಮ ಸಂಸ್ಕಾರ ಮತ್ತು ಮೌಲ್ಯಯುತ ಶಿಕ್ಷಣ ಕಲಿಸುವುದು ಅಗತ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಆರ್.ಲೋಕೇಶ್ ಅಭಿಪ್ರಾಯಪಟ್ಟರು.

ತಾಲೂಕಿನ ಗದ್ದೆಭೂವನಹಳ್ಳಿ ಸಮೀಪವಿರುವ ರಿಷಿಶ್ರೀ ವಿದ್ಯಾನಿಕೇತನ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಮತ್ತು ರಿಷಿ ಕಲಾ ಸಂಭ್ರಮದಲ್ಲಿ ಮಾತನಾಡಿ, 21ನೇ ಶತಮಾನಕ್ಕೆ ಮಕ್ಕಳನ್ನು ಅಣಿಗೊಳಿಸುವ ಸನ್ನಿವೇಶದಲ್ಲಿ ನಾವಿದ್ದೇವೆ. ಹಾಗಾಗಿ ಮಕ್ಕಳಿಗೋಸ್ಕರ ಪೋಷಕರು ಸಾಕಷ್ಟು ಆಸ್ತಿ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು ಎಂದರು.

ಮಕ್ಕಳಿಗೆ ಚಿಕ್ಕಂದಿನಿಂದಲೇ ಗುಣ ಮಟ್ಟದ ಶಿಕ್ಷಣ, ಸಂಸ್ಕಾರ ಮತ್ತು ಮೌಲ್ಯಗಳನ್ನು ಕಲಿಸಿದ್ದೇ. ಆದರೆ, ಅಂತಹ ಮಕ್ಕಳು ತಮ್ಮ ಸ್ವಂತ ಶಕ್ತಿಯಿಂದ ಸುಂದರ ಬದುಕನ್ನು ಕಟ್ಟಿಕೊಳ್ಳುತ್ತಾರೆ. ಹಿಂದಿನ ಕಾಲದಲ್ಲಿ ಅವಿಭಕ್ತ ಕುಟುಂಬವಿತ್ತು. ಹಿರಿಯರು ಹೇಗೆ ಬದುಕಬೇಕೆಂಬುದನ್ನು ಮಕ್ಕಳಿಗೆ ಕಲಿಸುತ್ತಿದ್ದರು. ಆದರೀಗ ಆ ಪರಸ್ಥಿತಿ ಇಲ್ಲ ಎಂದರು.

ಖ್ಯಾತ ಬರಹಗಾರ ಸತೀಶ್ ಜವರೇಗೌಡ ಮಾತನಾಡಿ, ಪ್ರಕೃತಿಯ ಸಂಪತ್ತನ್ನು ಹೆಚ್ಚಿಸಿದ ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ ನಾಡಿಗೆ ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ಯಾವ ಮನುಷ್ಯ ಪ್ರಕೃತಿಯ ಆಸರೆಯಲ್ಲಿ ಬದುಕುತ್ತಾನೋ ಆ ವ್ಯಕ್ತಿ ಸಮಾಜದಲ್ಲಿ ಉತ್ತಮ ನಾಗರೀಕನಾಗುತ್ತಾನೆ ಎಂದರು.

ಮಕ್ಕಳ ಭವಿಷ್ಯ ರೂಪಿಸುವ ಜೊತೆಗೆ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರಹಾಕುವ ಕೆಲಸವನ್ನು ಶಿಕ್ಷಣ ಸಂಸ್ಥೆ ಮಾಡುತ್ತಿದೆ. ಮಕ್ಕಳ ಸುರಕ್ಷತೆಗೆ ಪೂರಕವಾಗಿ ಯಾವೆಲ್ಲಾ ಸೌಕರ್ಯ ಕಲ್ಪಿಸಬೇಕೋ ಅವೆಲ್ಲವನ್ನೂ ಈ ಶಿಕ್ಷಣ ಸಂಸ್ಥೆ ಹೊಂದಿದೆ ಎಂದರು.

ಶಿಕ್ಷಣ ಮತ್ತು ಆರೋಗ್ಯ ಮನುಷ್ಯನಿಗೆ ನಿಜವಾದ ಸಂಪತ್ತು. ಒಬ್ಬ ವ್ಯಕ್ತಿ ಶಿಕ್ಷಣ ಪಡೆದರೆ ಆತ ಎಂದಿಗೂ ಕೂಡ ಕಳೆದುಕೊಳ್ಳುವುದಿಲ್ಲ. ಮಕ್ಕಳು ಶಾಲೆ ಬಿಟ್ಟು ಮನೆಗೆ ಬಂದಾಗ ಅವರಿಗಾಗಿ ಪೋಷಕರು ಒತ್ತಡದ ನಡುವೆ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಸಮಯ ಕೊಡಬೇಕು ಎಂದರು.

ಮಕ್ಕಳು ಓದುವ ಸಮಯದಲ್ಲಿ ಪೋಷಕರು ಟಿವಿ, ಮೊಬೈಲ್‌ನಿಂದ ದೂರವಿರಬೇಕು. ಆಗ ಮಕ್ಕಳು ಪುಸ್ತಕವನ್ನು ಕೇಂದ್ರೀಕರಿಸಿ ಕಲಿಕಾ ಆಸಕ್ತಿ ಹೆಚ್ಚಿಸಿಕೊಳ್ಳುತ್ತಾರೆ. ಮಕ್ಕಳು ಪುಸ್ತಕದ ಒಡನಾಟಕ್ಕೆ ಹೋದಾಗ ಟಿವಿ ಮೊಬೈಲ್ ನಿಂದ ದೂರ ಉಳಿಯುತ್ತಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಮೈಸೂರಿನ ಜೆಎಸ್‌ಎಸ್ ಮಹಿಳಾ ಕಾಲೇಜಿನ ಪ್ರಾಧ್ಯಾಪಕ ಹೊನ್ನಶೆಟ್ಟಿ ಮಾತನಾಡಿ, ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಬಹುಮುಖ್ಯ. ಮಕ್ಕಳಿಗೆ ವಿದ್ಯೆ, ವಿನಯ, ವಿವೇಕದ ಜೊತೆಗೆ ಒಳ್ಳೆಯ ಮಾತುಗಳನ್ನಾಡುವುದನ್ನು ಕಲಿಸಿದರೆ ಅಂತಹ ಮಕ್ಕಳು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳುತ್ತಾರೆ ಎಂದರು.

ಹೊಸಕೊಪ್ಪಲು ಗ್ರಾಮದ ಬ್ರಿಲಿಯಂಟ್ ಪಬ್ಲಿಕ್ ಶಾಲೆ ಪ್ರಾಂಶುಪಾಲ ಶ್ರೀನಿವಾಸ್ ಮಾತನಾಡಿದರು. ವೇದಿಕೆಯಲ್ಲಿ ಶಾಲೆ ಪ್ರತಿಭಾನ್ವಿತ ವಿದ್ಯಾರ್ಥಿನಿ ಭವ್ಯ ಅವರಿಗೆ ಪ್ರಶಸ್ತಿ ಪತ್ರ ನೆನಪಿನ ಕಾಣಿಕೆ ಕೊಟ್ಟು ಸನ್ಮಾನಿಸಲಾಯಿತು. ಶಾಲೆ ಮಕ್ಕಳು ಎಲ್ಲ ಶಿಕ್ಷಕರಿಗೆ ಗುರುವಂದನೆ ಸಲ್ಲಿಸಿದರು.

ಶಾಲಾ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಆಯೋಜಿಸಿದ್ದ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಸಮಾರಂಭವನ್ನು ರಿಷಿಶ್ರೀ ವಿದ್ಯಾನಿಕೇತನ ವಿದ್ಯಾಸಂಸ್ಥೆ ಅಧ್ಯಕ್ಷೆ ಲಕ್ಷ್ಮಮ್ಮ ಉದ್ಘಾಟಿಸಿದರು. ಕ್ಷೇತ್ರ ಸಮನ್ವಯಾಧಿಕಾರಿ ಕೆ.ರವೀಶ್, ಕ್ಷೇತ್ರ ಸಂಪನ್ಮೂಲ ಅಧಿಕಾರಿ ವಿರೂಪಾಕ್ಷ, ಕರಡಹಳ್ಳಿ ಸಿಆರ್‌ಸಿ ಸಂಪನ್ಮೂಲ ವ್ಯಕ್ತಿ ಎನ್.ಎಸ್.ಸುರೇಶ್, ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ನಟರಾಜು, ಖಜಾಂಚಿ ಎಸ್.ವಿ.ಮಂಜುನಾಥ್, ಶಾಲೆ ಮುಖ್ಯ ಶಿಕ್ಷಕ ಎನ್.ಗುರುಪ್ರಸಾದ್, ವಿಸ್ಡ ಪಬ್ಲಿಕ್ ಶಾಲೆ ಬೋರೇಗೌಡ ಸೇರಿದಂತೆ ವಿವಿಧ ಶಾಲೆಗಳ ಮುಖ್ಯ ಶಿಕ್ಷಕರು ಹಾಗೂ ವಿದ್ಯಾರ್ಥಿ ಪೋಷಕರು ಇದ್ದರು.