ಸಾರಾಂಶ
ತುರುವೇಕೆರೆ ತಾಲೂಕಿನ ತಂಗಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒತ್ತುವರಿ ಮಾಡಿಕೊಂಡಿದ್ದ ಜಾಗವನ್ನು ತಾಲೂಕು ಆಡಳಿತ ತೆರವುಗೊಳಿಸಲಾಯಿತು.
ಕನ್ನಡಪ್ರಭ ವಾರ್ತೆ ತುರುವೇಕೆರೆ
ತಾಲೂಕಿನ ತಂಡಗ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸೇರಿದ ಸರ್ಕಾರಿ ಜಮೀನನ್ನು ಒತ್ತವರಿ ಮಾಡಿಕೊಂಡು ತೆಂಗಿನ ಸಸಿಗಳನ್ನು ನೆಟ್ಟಿದ್ದ ಪ್ರಕರಣವನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದ ತಾಲೂಕು ಆಡಳಿತ ಒತ್ತುವರಿ ಮಾಡಿದ್ದ ಸರ್ಕಾರಿ ಜಮೀನನ್ನು ತೆರವುಗೊಳಿಸಿ ರಸ್ತೆ ನಿರ್ಮಿಸಿದ ಘಟನೆ ನಡೆಯಿತು.ದಬ್ಬೇಘಟ್ಟ ಹೋಬಳಿಯ ತಂಡಗದ ಸರ್ವೇ ನಂಬರ್ ೩೪೯, ೩೫೦ ಮತ್ತು ೩೫೫ ಮತ್ತು ಹುಣುಸೇಮರದಹಳ್ಳಿಯ ೧೩ ರ ಒಟ್ಟು ೪೯ ಎಕರೆ ಗೋಮಾಳವನ್ನು ಹಲವಾರು ಮಂದಿ ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿದ್ದರು. ಈ ಜಮೀನಿನ ಮಧ್ಯ ಸರ್ಕಾರದಿಂದ ಮಾಡಲಾಗಿದ್ದ ರಸ್ತೆಯನ್ನೂ ಸಹ ಕೆಲವರು ಒತ್ತುವರಿ ಮಾಡಿಕೊಂಡು ತೆಂಗಿನ ಗಿಡಗಳನ್ನು ನೆಟ್ಟು ಸಾರ್ವಜನಿಕರಿಗೆ ತೊಂದರೆಯನ್ನು ಉಂಟು ಮಾಡಿದ್ದರು.
ಸಾರ್ವಜನಿಕರ ದೂರಿನನ್ವಯ ತಿಪಟೂರು ಉಪವಿಭಾಗಾಧಿಕಾರಿ ಸಪ್ತಾಶ್ರೀ ಸ್ಥಳಕ್ಕೆ ಭೇಟಿ ನೀಡಿ, ಭೂ ಮಾಪನಾ ಅಧಿಕಾರಿಗಳಿಗೆ ಎರಡೂ ಗ್ರಾಮಗಳ ಗಡಿಯನ್ನು ಗುರುತಿಸಿ ಸಾರ್ವಜನಿಕರಿಗೆ ಅಗತ್ಯವಿರುವ ರಸ್ತೆ ನಿರ್ಮಾಣ ಮಾಡುವಂತೆಯೂ ಸರ್ಕಾರದ ಭೂಮಿಗಳನ್ನೂ ಸಹ ಗುರುತಿಸುವಂತೆ ಸೂಚನೆ ನೀಡಿದ್ದರು.ಉಪವಿಭಾಗಾಧಿಕಾರಿಗಳ ಸೂಚನೆಯ ಮೇರೆಗೆ ತಹಸೀಲ್ದಾರ್ ವೈ.ಎಂ. ರೇಣುಕುಮಾರ್ ಸ್ಥಳಕ್ಕೆ ಕಂದಾಯ ಇಲಾಖಾ ಅಧಿಕಾರಿಗಳು, ಭೂ ಮಾಪನಾ ಇಲಾಖಾ ಅಧಿಕಾರಿಗಳೊಂದಿಗೆ ತೆರಳಿ ಸರ್ಕಾರಿ ಭೂಮಿಯನ್ನು ಗುರುತಿಸುವ ಕಾರ್ಯ ಮಾಡಿದರು.
ಭೂಮಾಪನಾ ಇಲಾಖಾ ಸಹಾಯಕ ನಿರ್ದೇಶಕ ಶಿವಶಂಕರ್, ಸರ್ವೇಯರ್ ರಮೇಶ್ ಹಾಗೂ ಸಿಬ್ಬಂದಿ ಎರಡೂ ಗ್ರಾಮಗಳ ಗಡಿಯನ್ನು ಗುರುತಿಸಲಾಯಿತು. ಈ ಹಿಂದೆ ಇದ್ದ ರಸ್ತೆಯನ್ನೂ ಗುರುತಿಸಲಾಯಿತು. ಅಲ್ಲದೇ ಕೂಡಲೇ ಜೆಸಿಬಿ ಸಹಾಯದಿಂದ ಸಾರ್ವಜನಿಕರಿಗೆ ಅನುಕೂಲವಾಗುವಂತೆ ರಸ್ತೆಯನ್ನೂ ಸಹ ನಿರ್ಮಾಣ ಮಾಡಲಾಯಿತು.ಯಾರೇ ಆಗಲಿ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದರೆ, ಅಲ್ಲದೇ ಸಾರ್ವಜನಿಕರಿಗೆ ಓಡಾಡಲು ರಸ್ತೆ ಮುಚ್ಚುವ ಕಾರ್ಯವನ್ನು ಮಾಡಿದಲ್ಲಿ ಮುಲಾಜಿಲ್ಲದೇ ಕಾನೂನು ಕ್ರಮ ಜರುಗಿಸಿ ಸರ್ಕಾರಿ ಜಮೀನನ್ನು ಸರ್ಕಾರದ ವಶಕ್ಕೆ ಪಡೆಯುವುದಾಗಿ ತಹಸೀಲ್ದಾರ್ ವೈ.ಎಂ. ರೇಣುಮಾರ್ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸಬ್ ಇನ್ಸ್ಪೆಕ್ಟರ್ ಸಂಗಮೇಶ ಮೇಟಿ, ಎಎಸ್ಐ ಸುರೇಶ್, ತಂಡಗ ಗ್ರಾಮ ಪಂಚಾಯ್ತಿ ಸದಸ್ಯ ಚನ್ನಬಸವೇಗೌಡ, ಕಂದಾಯ ತನಿಖಾಧಿಕಾರಿಗಳಾದ ಮಲ್ಲಿಕಾರ್ಜುನಯ್ಯ, ಶಿವಕುಮಾರ್ ಸೇರಿದಂತೆ ಹಲವಾರು ಮಂದಿ ಇದ್ದರು.