ಕುಂದಾಪುರ: ಶ್ರೀರಾಮ ಮಂದಿರದ ಹಣಕಾಸು ಅವ್ಯವಹಾರ ಆರೋಪಗಳ ಕುರಿತು ನ್ಯಾಯಮೂರ್ತಿಗಳ ಸ್ವತಂತ್ರ ಆಯೋಗದ ಮೂಲಕ ಸಮಗ್ರ ತನಿಖೆ ನಡೆಸಬೇಕು ಎಂದು ಹಿರಿಯ ವಕೀಲ ಕೆ.ಸಿ.ಶೆಟ್ಟಿ ಒತ್ತಾಯಿಸಿದ್ದಾರೆ. ಈ ಕುರಿತು ಪತ್ರಿಕಾ‌ ಹೇಳಿಕೆ ನೀಡಿರುವ ಅವರು, ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ಶ್ರೀರಾಮ ಮಂದಿರವು ಕೋಟ್ಯಾಂತರ ಭಾರತೀಯರ ಭಕ್ತಿ ಮತ್ತು ನಂಬಿಕೆಯ ಸಂಕೇತವಾಗಿದೆ. ಈ ಮಂದಿರ ನಿರ್ಮಾಣದ ವಿಚಾರವನ್ನು ದೇಶದ ರಾಜಕೀಯದಲ್ಲಿ ವ್ಯಾಪಕವಾಗಿ ಬಳಸಲಾಗಿದೆ. ಅನೇಕರು ಶ್ರೀರಾಮ ಮಂದಿರ ನಿರ್ಮಾಣಕ್ಕೆ ಎನ್‌‌ಡಿಎ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವೇ ಪ್ರಮುಖ ಕಾರಣ ಎಂಬ ನಂಬಿಕೆಯನ್ನು ಇರಿಸಿಕೊಂಡಿದ್ದರು. ಇದೇ ವಿಚಾರವನ್ನು ಚುನಾವಣೆಗಳಲ್ಲಿಯೂ ಪ್ರಮುಖವಾಗಿ ಪ್ರಸ್ತುತ ಪಡಿಸಲಾಗಿತ್ತು. ಆದರೆ ಇತ್ತೀಚೆಗೆ ಶ್ರೀರಾಮ ಮಂದಿರ ನಿರ್ಮಾಣ ಹಾಗೂ ಸಂಬಂಧಿತ ಹಣಕಾಸು ವ್ಯವಹಾರಗಳ ಕುರಿತು ವಿವಿಧ ರೀತಿಯ ಅವ್ಯವಹಾರ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಇಂತಹ ಗಂಭೀರ ಆರೋಪಗಳು ಕೇಳಿಬರುತ್ತಿರುವ ಸಂದರ್ಭದಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದ ಈವರೆಗೂ ಯಾವುದೇ ರೀತಿಯ ಸ್ಪಷ್ಟನೆ ಹಾಗೂ ಸಾರ್ವಜನಿಕ ಪ್ರತಿಕ್ರಿಯೆ ಇಲ್ಲದಿರುವುದು ದೇಶವಾಸಿಗಳಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದಿದ್ದಾರೆ.ಶ್ರೀರಾಮನ ಹೆಸರಿನಲ್ಲಿ ದೇಶದ ಜನರ ಅಪಾರ ನಂಬಿಕೆ ಮತ್ತು ಭಾವನೆಗಳು ಬೆಸೆದುಕೊಂಡಿರುವುದರಿಂದ, ಈ ವಿಚಾರದಲ್ಲಿ ಯಾವುದೇ ಅನುಮಾನಗಳಿಗೆ ಅವಕಾಶ ನೀಡದೆ ಪಾರದರ್ಶಕ ಮತ್ತು ಸ್ವತಂತ್ರ ತನಿಖೆ ನಡೆಸಿ ಸತ್ಯಾಂಶವನ್ನು ದೇಶದ ಜನತೆಗೆ ತಿಳಿಸಬೇಕಾಗಿರುವುದು ಅವರ ಕರ್ತವ್ಯ ಹಾಗೂ ಬದ್ಧತೆ. ಇದರಿಂದ ಶ್ರೀರಾಮ ಮಂದಿರದ ಪಾವಿತ್ರ್ಯ ಹಾಗೂ ಸಾರ್ವಜನಿಕರ ವಿಶ್ವಾಸ ಮತ್ತಷ್ಟು ಬಲಗೊಳ್ಳುತ್ತದೆ. ಶ್ರೀ ರಾಮ ಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷರಾಗಿದ್ದ ನೃಪೇಂದ್ರ ಮಿಶ್ರ ಅವರು ಹಿರಿಯ ನಿವೃತ್ತ ಐಎಎಸ್ ಅಧಿಕಾರಿಯಾಗಿದ್ದು, ಹಿಂದೆ ತಮ್ಮ ಕರ್ತವ್ಯದ ಅವಧಿಯಲ್ಲಿ ಅವರು ಪ್ರಧಾನ ಮಂತ್ರಿ ಕಾರ್ಯಾಲಯದ ಪ್ರಧಾನ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿರುವುದರಿಂದಾಗಿ, ಪ್ರಸ್ತುತ ನಡೆದಿರುವ ಹಗರಣದಲ್ಲಿ ಅನೇಕ ಕಾಣದ ಕೈಗಳ ಕೈವಾಡ ಇರಬಹುದು ಎನ್ನುವ ಸಾರ್ವಜನಿಕ ಶಂಕೆಗಳು ಬಲವಾಗಿರುವುದರಿಂದಾಗಿ, ಪ್ರಕರಣದ ನಿಷ್ಪಕ್ಷಪಾತ ತನಿಖೆಗೆ ಅವಕಾಶವಾಗುವಂತೆ, ಸರ್ವೋಚ್ಚ ನ್ಯಾಯಾಲಯದ ಮೂವರು ನಿವೃತ್ತ ನ್ಯಾಯಮೂರ್ತಿಗಳನ್ನು ಒಳಗೊಂಡಿರುವ ಸ್ವತಂತ್ರ ತನಿಖಾ ವಿಚಾರಣಾ ಆಯೋಗವನ್ನು ಕೇಂದ್ರ ಸರ್ಕಾರ ಘೋಷಣೆ ಮಾಡಬೇಕು ಎಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.