ಉಡುಪಿ: ಉಡುಪಿ ಜಿಲ್ಲೆಯ ನೂತನ ಆಡಳಿತಾತ್ಮಕ ನ್ಯಾಯಮೂರ್ತಿಯಾಗಿ ನೇಮಕಗೊಂಡ ನ್ಯಾ.ಜೆ.ಎಂ.ಖಾಝಿ ಅವರಿಗೆ ಉಡುಪಿ ವಕೀಲರ ಸಂಘದ ವತಿಯಿಂದ ಸ್ವಾಗತ ಹಾಗೂ ಜಿಲ್ಲೆಯ ನಿಕಟಪೂರ್ವ ಆಡಳಿತಾತ್ಮಕ ನ್ಯಾಯಮೂರ್ತಿ ಇ.ಎಸ್.ಇಂದಿರೇಶ್ ಅವರಿಗೆ ಬಿಳ್ಕೋಡುಗೆ ಕಾರ್ಯಕ್ರಮ ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ನಡೆಯಿತು.ಸನ್ಮಾನ ಸ್ವೀಕರಿಸಿ ಮಾತನಾಡಿದ ನೂತನ ಆಡಳಿತಾತ್ಮಕ ನ್ಯಾಯಮೂರ್ತಿ ಜೆ. ಎಂ. ಖಾಝಿ ಅವರು, ನ್ಯಾಯಾಲಯಕ್ಕೆ ಬರುವ ಪ್ರತಿ ಪ್ರಕರಣದಲ್ಲೂ ಮಾನವೀಯ ಮೌಲ್ಯ ಅಡಗಿದೆ. ಅದನ್ನು ನಾವು ಕಂಡುಕೊಳ್ಳುವ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.

ನಿರ್ಗಮನ ನ್ಯಾಯಮೂರ್ತಿ ಇ. ಎಸ್. ಇಂದಿರೇಶ್ ಸನ್ಮಾನ ಸ್ವೀಕರಿಸಿ ಮಾತನಾಡಿ, ಭಾರತದ ಸಂವಿಧಾನದಲ್ಲಿ ಎಲ್ಲಾ ಸಮಸ್ಯೆಗಳಿಗೂ ಪರಿಹಾರವಿದೆ. ಕಾನೂನು ಉಲ್ಲಂಘನೆ ಮಾಡದೇ ಸಂವಿಧಾನದ ಮೇಲೆ ನಂಬಿಕೆ ಇಟ್ಟು ಕಾರ್ಯ ನಿರ್ವಹಿಸಬೇಕು. ಕಾನೂನನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು.ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ್ ಎಸ್. ಗಂಗಣ್ಣವರ್ ಅಧ್ಯಕ್ಷತೆ ವಹಿಸಿದ್ದರು. ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್, ವಕೀಲರ ಸಂಘದ ಮಾಜಿ ಅಧ್ಯಕ್ಷ ಬಿ. ನಾಗರಾಜ್, ಜಿಲ್ಲಾ ಸರಕಾರಿ ವಕೀಲೆ ಮೇರಿ ಎ. ಆರ್. ಶ್ರೇಷ್ಠಾ, ರಾಜೇಶ್ ಎ. ಆರ್. ಉಪಸ್ಥಿತರಿದ್ದರು. ನ್ಯಾಯವಾದಿ ರಾಜಶೇಖರ್ ಶ್ಯಾಮರಾಮ್ ನಿರೂಪಿಸಿದರು