ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ಐಎಎಸ್ ಅಧಿಕಾರಿ ಎಸ್.ಆರ್.ಉಮಾಶಂಕರ್ ಅವರು ದಕ್ಷ ಆಡಳಿತ ನಡೆಸಿ, ಒಂದೂ ಕಪ್ಪುಚುಕ್ಕೆ ಇಲ್ಲದಂತೆ ಕೆಲಸ ಮಾಡಿ ನಿವೃತ್ತರಾಗುವ ಮೂಲಕ ಬದುಕಿನಲ್ಲಿ ಸಾರ್ಥಕತೆ ಕಂಡುಕೊಂಡಿದ್ದಾರೆ ಎಂದು ಶ್ರೀಕ್ಷೇತ್ರ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಗುಣಗಾನ ಮಾಡಿದರು.ಪಟ್ಟಣದ ಟಿಎಪಿಸಿಎಂಎಸ್ ರೈತಸಭಾಂಗಣದಲ್ಲಿ ಪಾಂಡವ ಬಳಗದ ವತಿಯಿಂದ ಆಯೋಜಿಸಿದ್ದ ನಿವೃತ್ತ ಐಎಎಸ್ ಅಧಿಕಾರಿ ಎಸ್.ಆರ್.ಉಮಾಶಂಕರ್ ಅವರಿಗೆ ‘ಉತ್ತಮ ಪಾಂಡವ ಉಮಾಶಂಕರ’ ಎಂಬ ಬಿರುದಿನೊಂದಿಗೆ ತವರಿನ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮನುಷ್ಯ ಜೀವನದಲ್ಲಿ ಎಷ್ಟೇ ಎತ್ತರಕ್ಕೆ ಬೆಳೆದರೂ, ಬದುಕಿನಲ್ಲಿ ಎಷ್ಟೇ ತಿರುವುಗಳು ಬಂದರೂ ಅವನು ಹುಟ್ಟಿ ಬೆಳೆದಂತಹ ಜಾಗದಲ್ಲಿ ಮಾತ್ರ ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳಲು ಸಾಧ್ಯ. ಹಾಗೆಯೇ ಎಸ್.ಆರ್.ಉಮಾಶಂಕರ್ ಅವರು ಒಬ್ಬ ಅಧಿಕಾರಿಯಾಗಿ ದೊಡ್ಡ ಮಟ್ಟದಲ್ಲಿ ಬೆಳೆದರೂ ಸಹ ಎಲ್ಲೂ ಅವರು ಮುಕ್ತವಾಗಿ ತಮ್ಮ ಮನದಾಳದ ಮಾತು ಹಂಚಿಕೊಳ್ಳಲಿಲ್ಲ. ತವರಿನಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಮುಕ್ತವಾಗಿ ತಮ್ಮ ಮನಸ್ಸಿನೊಳಗಿರುವ ಭಾವನೆಗಳನ್ನು ಹಂಚಿಕೊಂಡಿದ್ದಾರೆ ಎಂದರು.ಎಸ್.ಆರ್.ಉಮಾಶಂಕರ್ ಅಧಿಕಾರಿಯಾಗಿದ್ದಾಗ ಜನರ ಬದುಕಿಗೆ ಸ್ಪಂದಿಸಿ ಕೆಲಸ ಮಾಡಿದ್ದಾರೆ. ಉತ್ತಮ ಆಡಳಿತದ ಮೂಲಕ ಬಡ ಜನರ ಕಣ್ಣೀರು ಒರೆಸುವ ಕೆಲಸ ಮಾಡಿದ್ದಾರೆ. ಹಣ, ಅಧಿಕಾರದ ಹಿಂದೆ ಓಡದೇ ಸಿಕ್ಕಂತಹ ಅವಕಾಶದಲ್ಲಿ ಸಾರ್ವಜನಿಕರಿಗೆ ನೇರವಾಗಿ ಸಮಾಜಮುಖಿಯಾಗಿ ಬದುಕಿದ್ದಾರೆ ಎಂದು ಬಣ್ಣಿಸಿದರು.
ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ಎಚ್ಡಿಕೆ ಮುಖ್ಯಮಂತ್ರಿಗಳಾಗಿದ್ದ ಎಸ್.ಆರ್.ಉಮಾಶಂಕರ್ ಅವರು ಶಿಕ್ಷಣ ಇಲಾಖೆಯಲ್ಲಿ ಜವಾಬ್ದಾರಿ ನಿರ್ವಹಿಸುವ ವೇಳೆ ಸಾವಿರಾರು ಶಾಲೆ, ಕಾಲೇಜುಗಳನ್ನು ಮಂಜೂರು ಮಾಡುವ ಮೂಲಕ ರಾಜ್ಯದಲ್ಲಿ ಶೈಕ್ಷಣಿಕ ಕ್ರಾಂತಿಯನ್ನೇ ನಡೆಸಿದ್ದರು ಎಂದರು.ಉಮಾಶಂಕರ್ ಅವರು ಮೇಲುಕೋಟೆ ವಿಧಾನಸಭಾ ಕ್ಷೇತ್ರಕ್ಕೆ 12 ಪ್ರೌಢಶಾಲೆ, 5 ಪಿಯು ಕಾಲೇಜು, 3 ಡಿಗ್ರಿ ಕಾಲೇಜುಗಳನ್ನು ಮಂಜೂರು ಮಾಡಿಕೊಟ್ಟರು. ಅಲ್ಲದೆ ಜಿಲ್ಲೆಯ ಅಭಿವೃದ್ದಿಗೆ ಸಾಕಷ್ಟು ನೆರವು ನೀಡಿದ್ದಾರೆ. ಅಧಿಕಾರಿಯಾಗಿ ಆಡಳಿತ ನಡೆಸಿದ 33 ವರ್ಷದಲ್ಲಿ ಒಂದೇ ಒಂದು ಕಪ್ಪುಚುಕ್ಕೆ ಇಲ್ಲದಂತೆ ಪ್ರಾಮಾಣಿಕವಾಗಿ ಕೆಲಸ ಮಾಡಿ ಮಂಡ್ಯ ಜಿಲ್ಲೆಗೆ ಹೆಸರು ತಂದುಕೊಡುವ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
ಅಭಿನಂದನೆ ಸ್ವೀಕರಿಸಿದ ನಿವೃತ್ತ ಐಎಎಸ್ ಅಧಿಕಾರಿ ಎಸ್.ಆರ್.ಉಮಾಶಂಕರ್ ಮಾತನಾಡಿ, ನಾನು ಅಧಿಕಾರದ ಅವಧಿಯಲ್ಲಿ ಎಂದೂ ಹಣ, ಅಧಿಕಾರದ ವ್ಯಾಮೋಹಕ್ಕೆ ಒಳಗಾಗಿ ಯಾರ ಹಿಂದೆ ಹೋದವನಲ್ಲ. ನನಗೆ ಸಿಕ್ಕಂಥ ಅವಕಾಶದಲ್ಲಿ ಪ್ರಾಮಾಣಿಕವಾಗಿ ಜನಸೇವೆ ಮಾಡಿ ನಿವೃತ್ತಿ ಹೊಂದಿದ್ದೇನೆ. ನಾನು ಮಾಡಿದ ಕೆಲಸದಿಂದ ನನಗೆ ಆತ್ಮತೃಪ್ತಿ, ಸಾರ್ಥಕತೆಯ ಭಾವ ಮೂಡಿಸಿದೆ. ಆತ್ಮ ಸಾಕ್ಷಿಗೆ ವಿರುದ್ಧವಾಗಿ ನಾನೆಂದೂ ಕೆಲಸ ಮಾಡಿಲ್ಲ ಎಂದು ತಿಳಿಸಿದರು.ನಾನು ಬಹಳ ಕಷ್ಟಪಟ್ಟು ಓದಿ ಐಎಎಸ್ ಬರೆದು ಅಧಿಕಾರಿಯಾಗಿದ್ದೇನೆ. ನನ್ನ ಬೆಳವಣಿಗೆಗೆ ನನ್ನ ಪೋಷಕರು, ಸ್ನೇಹಿತರು ಅಪಾರ ಬೆಂಬಲ, ಸಹಕಾರ ನೀಡಿದ್ದಾರೆ. ಸರಕಾರದಲ್ಲೂ ನನಗೆ ಒಳ್ಳೆಯ ಅವಕಾಶಗಳು ಬಂದವು. ಅಧಿಕಾರದಲ್ಲಿ ಇದ್ದಷ್ಟು ದಿನವೂ ಸಹ ಜನರ ಪರವಾಗಿ ಕೆಲಸ ಮಾಡಿದ್ದೇನೆ. ಒಂದೇ ಒಂದು ದಿನ ಸಹ ನನ್ನ ಫೋನ್ ಸ್ವಿಚ್ಆಫ್ ಮಾಡದೆ ಕೆಲಸ ಮಾಡಿದ್ದೇನೆ ಎಂದರು.
ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್ಗೌಡ ಮಾತನಾಡಿ, ಕರ್ನಾಟಕ ಸಂಘ ಕಟ್ಟಿದವನು ನಾನಲ್ಲ. ಅದರ ಬೆಳವಣಿಗೆಯಲ್ಲಿ ಮಾತ್ರ ನಾನು ಕೆಲಸ ಮಾಡಿದ್ದೇನೆ. ಕರ್ನಾಟಕ ಸಂಘದ ಬೆಳವಣಿಗೆಗೆ ಉಮಾಶಂಕರ್ ಅವರ ಕೊಡುಗೆ ಅಪಾರವಿದೆ. ಕರ್ನಾಟಕ ಸಂಘದ ನಿವೇಶನವನ್ನು ಶಿಕ್ಷಣ ಇಲಾಖೆಯಿಂದ 30 ವರ್ಷಗಳ ಕಾಲ ಲೀಜ್(ಗುತ್ತಿಗೆ)ಕೊಡಿಸುವಲ್ಲಿ ಉಮಾಶಂಕರ್ ಅವರ ಪಾತ್ರ ಅಪಾರವಾಗಿದೆ. ಉಮಾಶಂಕರ್ ಅವರು ಸ್ವಂತ ಶಕ್ತಿ, ಪರಿಶ್ರಮದಿಂದ ಬೆಳೆದು ಮೇಲೆ ಬಂದ ವ್ಯಕ್ತಿ ಎಂದು ಬಣ್ಣಿಸಿದರು.ಪ್ರೊ.ಎಂ.ಕೃಷ್ಣೇಗೌಡರು ಅಭಿನಂದನಾ ಭಾಷಣ ಮಾಡಿದರು. ಇದೇ ವೇಳೆ ನಿವೃತ್ತ ಐಎಎಸ್ ಅಧಿಕಾರಿ ಎಸ್.ಆರ್.ಉಮಾಶಂಕರ್ ಅವರಿಗೆ ’ಉತ್ತಮ ಪಾಂಡವ ಉಮಾಶಂಕರ’ ಎಂಬ ಬಿರುದು ನೀಡಿ ತವರಿನ ಸನ್ಮಾನ ಮಾಡಿ ಅಭಿನಂದಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಪಟ್ಟಣ ಐದು ದೀಪದ ವೃತ್ತದಿಂದ ತೆರೆದ ವಾಹನಗಳೊಂದಿಗೆ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಲಕ್ಷ್ಮೀಸಾಗರದ ಸೋಬಾನೆ ರಾಜೇಶ್ ಅವರ ಕಲಾತಂಡಗಳು ಭಾಗವಹಿಸಿದ್ದವು.
ಸಮಾರಂಭದಲ್ಲಿ ತ್ರಿವೇಣಿ ಉಮಾಶಂಕರ್, ಮನ್ಮುಲ್ ನಿರ್ದೇಶಕ ಸಿ.ಶಿವಕುಮಾರ್, ಪಾಂಡವ ಬಳಗದ ಎಂ.ಎಸ್.ಮರಿಸ್ವಾಮೀಗೌಡ, ಪ್ರೊ.ಎಚ್.ಆರ್.ತಿಮ್ಮೇಗೌಡ, ಬಿ.ಎಸ್.ಜಯರಾಮು, ಎಸ್.ನಾರಾಯಣಗೌಡ, ರಾಮಕೃಷ್ಣೇಗೌಡ, ಎಂ.ರಮೇಶ್, ಪ್ರೊ.ಎಸ್.ಎಚ್.ಪ್ರಕಾಶ್, ಮೇನಾಗರ ಪ್ರಕಾಶ್ಗೌಡ, ಚಂದ್ರಶೇಖರ್, ನಾಗಲಿಂಗೇಗೌಡ, ಧನ್ಯಕುಮಾರ್, ಚಿನಕುರಳಿ ತಮ್ಮೇಗೌಡ(ತಮ್ಮಣಿ) ಮಾಣಿಕ್ಯನಹಳ್ಳಿ ಅಶೋಕ್ ಸೇರಿದಂತೆ ಹಲವರು ಇದ್ದರು.