ಯಲಬುರ್ಗಾ:ರೈತ ಸಂಘದ ಪ್ರತಿಯೊಬ್ಬ ಪದಾಧಿಕಾರಿಗಳು ಗ್ರಾಮಮಟ್ಟದಲ್ಲಿ ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸುವ ಸಂಕಲ್ಪ ಮಾಡಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಬಿ. ಸುಖಮುನಿಯಪ್ಪ ಹೇಳಿದರು.

ತಾಲೂಕಿನ ಹಿರೇವಂಕಲಕುಂಟಾ ಗ್ರಾಮದ ಪ್ರವಾಸಿ ಮಂದಿರದಲ್ಲಿ ಹಿರೇವಂಕಲಕುಂಟಾ ಗ್ರಾಮ ಘಟಕದ ನೂತನ ಪದಾಧಿಕಾರಿಗಳಿಗೆ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.ರೈತರ ಹಕ್ಕುಗಳ ರಕ್ಷಣೆ, ಸಂಘಟನೆಯ ಬಲವರ್ಧನೆಗೆ ಪದಾಧಿಕಾರಿಗಳು ಶ್ರಮಿಸಬೇಕು ಎಂದರು.ಸಂಘನೆಯ ತಾಲೂಕಾಧ್ಯಕ್ಷ ಈಶಪ್ಪ ವಕ್ರ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ರೈತರ ಏಕತೆ ಮತ್ತು ಸಂಘಟನೆಯ ಅಗತ್ಯತೆ ಇದೆ. ರೈತರ ಹಿತಾಸಕ್ತಿಗಾಗಿ ನಿರಂತರ ಹೋರಾಟಕ್ಕೆ ಸಂಘದ ಪದಾಧಿಕಾರಿಗಳು ಮತ್ತು ರೈತರ ಸಹಕಾರ ಮತ್ತು ಪ್ರೋತ್ಸಾಹ ಅವಶ್ಯವಿದೆ. ಯಾವುದೇ ರೈತರಿಗೆ ಅನ್ಯಾಯವಾದರೆ ಅದನ್ನು ಸಹಿಸಿಕೊಳ್ಳಲಾಗುವುದಿಲ್ಲ. ತಾಲೂಕಿನಲ್ಲಿ ರೈತರ ಮೇಲೆ ನಡೆಯುವ ದೌರ್ಜನ್ಯ ದರ್ಪದ ವಿರುದ್ಧ ನಮ್ಮ ಸಂಘಟನೆ ಒಗ್ಗಟ್ಟಿನಿಂದ ಹೋರಾಡಲಿದೆ ಎಂದರು.ಗ್ರಾಮ ಘಟಕದ ಅಧ್ಯಕ್ಷ ಹನುಮೇಶ ಬಿಂಗಿ, ಜಿಲ್ಲಾ ಕಾರ್ಯಾಧ್ಯಕ್ಷ ಸಂತೋಷ ಮೂಲಿಮನಿ, ತಾಲೂಕು ಕಾರ್ಯಾಧ್ಯಕ್ಷ ವಿನಯ್ ಕುಮಾರ್ ಮಾಲಿಪಾಟೀಲ್ ಸೇರಿದಂತೆ ಮಾಟಲದಿನ್ನಿ, ಹಿರೇವಂಕಲಕುಂಟಾ ಗ್ರಾಮದ ರೈತರು ಸೇರಿದಂತೆ ಮತ್ತಿತರರು ಇದ್ದರು.