ಕನ್ನಡಪ್ರಭ ವಾರ್ತೆ, ತುಮಕೂರು

ಕೊರಟಗೆರೆ ತಾಲೂಕಿನ ಎಲೆರಾಂಪುರ ಹಾಗೂ ನೀಲಗೊಂಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಜಿಪಂ ಸಿಇಒ ಬಿ.ವಿ.ಅಶ್ವಿಜಾ ಅವರು ಶುಕ್ರವಾರ ದಿಢೀರ್ ಭೇಟಿ ನೀಡಿ ಕುಡಿಯುವ ನೀರು ಹಾಗೂ ಆಶ್ರಯ ಯೋಜನೆಯಡಿ ನಿವೇಶನ ಹಂಚಿಕೆಗೆ ಮಂಜೂರಾದ ಸ್ಥಳ ಪರಿಶೀಲನೆ ನಡೆಸಿ, ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದರು.

ಕೊರಟಗೆರೆ ತಾಲೂಕಿನ ಎಲೆರಾಂಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇರಕಸಂದ್ರ ಗ್ರಾಮದ ಇರಕಸಂದ್ರ ಕೆರೆ ಅಂಗಳದ ಕೊಳವೆ ಬಾವಿಯು ನೀರಿನಿಂದ ಮುಳುಗಿ ಹೂಳು ತುಂಬಿದ್ದು, ಕೊಳವೆ ಬಾವಿಯನ್ನು ಪುನಶ್ಚೇತನಗೊಳಿಸಿ ಗ್ರಾಮದ ಜನರಿಗೆ ಕುಡಿಯುವ ನೀರು ಪೂರೈಸಲು ಅಧಿಕಾರಿಗಳಿಗೆ ಸೂಚಿಸಿದ ಅವರು ಕೊರಟಗೆರೆ ತಾಲೂಕಿನ ನೀಲಗೊಂಡನಹಳ್ಳಿ ಗ್ರಾಮದ ಸರ್ವೆ ನಂಬರ್ 27ರಲ್ಲಿ ಮಂಜೂರಾದ 2 ಎಕರೆ ಹಾಗೂ ಸರ್ವೆ ನಂಬರ್ 39ರಲ್ಲಿ ನಿವೇಶನ ಹಂಚಿಕೆಗೆ ಮಂಜೂರಾದ 4 ಎಕರೆ ಜಾಗವನ್ನು ಹಾಗೂ ಸರ್ವೆ ನಂಬರ್ 61ರ ಸರ್ಕಾರಿ ಗೋಮಾಳದ ಸ್ಥಳಕ್ಕೂ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಕೊರಟಗೆರೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅಪೂರ್ವ ಸಿ. ಅನಂತರಾಮು, ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಎಂ.ಬಿ.ಗುರುಮೂರ್ತಿ, ತಾಲೂಕು ಪಂಚಾಯಿತಿ ವಸತಿ ಶಾಖೆಯ ತಾಲೂಕು ನೋಡೆಲ್ ಅಧಿಕಾರಿ ವೈ.ಆರ್. ಶಿವಪ್ರಸನ್ನ, ಕೊರಟಗೆರೆ ಗ್ರಾಮಾಂತರ ಮತ್ತು ನಗರ ಯೋಜನಾ ಪ್ರಾಧಿಕಾರದ ಅಧಿಕಾರಿ ಧರಣೇಶ್, ಉಪ ತಹಸೀಲ್ದಾರ್ ಮಧುಚಂದ್ರ, ನೀಲಗೊಂಡನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಎನ್. ಮಂಜುಳ ಸೇರಿದಂತೆ ಗ್ರಾಮದ ಮುಖಂಡರು ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಜರಿದ್ದರು.