ಕನ್ನಡಪ್ರಭ ವಾರ್ತೆ ಶಿರಾ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರ ನಾರಿ ಶಕ್ತಿ ವಂದನ್ ಅಧಿನಿಯಮವನ್ನು ಜಾರಿಗೆ ತರಲು ಲೋಕಸಭೆಯಲ್ಲಿ ಮಂಡಿಸಿದ್ದ ಮಸೂದೆಯನ್ನು ಕಾಂಗ್ರೆಸ್ ಪಕ್ಷ ವಿರೋಧಿಸಿದ್ದು, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ನಿರ್ನಾಮ ಮಾಡಲು ಹೋರಾಡುತ್ತೇವೆ. ಮುಂಬರುವ ಚುನಾವಣೆಯಲ್ಲಿ ಸಂಪೂರ್ಣ ಅಧಿಕಾರಕ್ಕೆ ಬಂದು ಬಿಲ್ ಪಾಸ್ ಮಾಡುತ್ತೇವೆ ಎಂದು ಬಿಜೆಪಿ ಮಧುಗಿರಿ ಸಂಘಟನಾತ್ಮಕ ಜಿಲ್ಲಾಧ್ಯಕ್ಷರು ಹಾಗೂ ವಿಧಾನಪರಿಷತ್ ಸದಸ್ಯರಾದ ಚಿದಾನಂದ್ ಎಂ.ಗೌಡ ಹೇಳಿದರು. ಶನಿವಾರ ನಗರದ ಸೇವಾ ಸದನದಲ್ಲಿ ಬಿಜೆಪಿ ಮಧುಗಿರಿ ಸಂಘಟನಾತ್ಮಕ ಜಿಲ್ಲೆಯ ವತಿಯಿಂದ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಮಹಿಳಾ ಮೀಸಲಾತಿ ಬಿಲ್ ಒಂದು ಕೇಂದ್ರ ಸರ್ಕಾರದ ಐತಿಹಾಸಿಕ ಕ್ರಮವಾಗಿತ್ತು. ಇದರಿಂದ ದೇಶದ ಮಹಿಳೆಯರಿಗೆ ರಾಜಕೀಯ ಹಕ್ಕು ದೊರಕುತ್ತಿತ್ತು. ಮಹಿಳಾ ಮೀಸಲಾತಿ ಜಾರಿಗೆ ತರಲು ಬಿಜೆಪಿ ಪಕ್ಷ ಸಾಕಷ್ಟು ಹೋರಾಟ ಮಾಡಿದೆ. ಆದರೂ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ ಇದರ ವಿರುದ್ಧವಾಗಿದ್ದರಿಂದ ಬಿಲ್ ಪಾಸ್ ಆಗಲಿಲ್ಲ. ಇಂಡಿಯಾ ಒಕ್ಕೂಟದ ನಡೆ ಮಹಿಳಾ ವಿರೋಧಿ ನಡೆಯಾಗಿದೆ. ಅವರ ಉದ್ದೇಶ ಮಹಿಳೆಯರು ಮನೆಯಲ್ಲಿ ಅಡುಗೆ ಮಾಡಿಕೊಂಡು ಮನೆಯಲ್ಲೇ ಇರಬೇಕು ಎಂಬುದಾಗಿದೆ. ಮಹಿಳೆಯರು ಭ್ರಷ್ಟಾಚಾರ ರಹಿತ ಆಡಳಿತ ಕೊಡುತ್ತಾರೆ. ಕಾಂಗ್ರೆಸ್‌ಗೆ ಅದು ಇಷ್ಟವಿಲ್ಲ. ಕಾಂಗ್ರೆಸ್ ಕಳೆದ ೭೦ ವರ್ಷದಿಂದ ಭ್ರಷ್ಟಾಚಾರ ಮಾಡಿದೆ. ಮಹಿಳಾ ಬಿಲ್ ಪಾಸಾಗದಿದ್ದನ್ನು ಕಾಂಗ್ರೆಸ್‌ ವಿಕೃತ ಮನಸ್ಸುಗಳು ಸಂಭ್ರಮಿಸಿದ್ದಾರೆ. ಮುಂದಿನ ದಿನಗಳಲ್ಲಿ ಬಿಜೆಪಿ ಪಕ್ಷದಿಂದ ಕಾಂಗ್ರೆಸ್ ಪಕ್ಷದ ವಂಚನೆ ದ್ರೋಹವನ್ನು ಜನರಿಗೆ ತೋರಿಸುತ್ತೇವೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಎಂಜಲಗೆರೆ ಮೂರ್ತಿ, ರವಿ ಪಾವಗಡ ಹಾಗೂ ಕೊರಟಗೆರೆ ದಯಾಮಣಿ, ಶಿರಾ ಗ್ರಾಮಾಂತರ ಮಂಡಲ ಅಧ್ಯಕ್ಷರಾದ ಈರಣ್ಣ ಪಟೇಲ್, ಮಧುಗಿರಿ ಮಂಡಲ ಅಧ್ಯಕ್ಷರಾದ ಹನುಮಂತರೆಡ್ಡಿ, ಪಾವಗಡ ಮಂಡಲ ಅಧ್ಯಕ್ಷರಾದ ಅಶೋಕ್, ಕೊರಟಗೆರೆ ಮಂಡಲ ಅಧ್ಯಕ್ಷರಾದ ರುದ್ರೇಶ್, ಜಿಲ್ಲಾ ಉಪಾಧ್ಯಕ್ಷರಾದ ಮದ್ದೇವಳ್ಳಿ ರಾಮಕೃಷ್ಣಪ್ಪ, ರಾಜ್ಯ ಕಾರ್ಯಕಾರಿಣಿ ಸದಸ್ಯ ಬರಗೂರು ಶಿವಕುಮಾರ್, ಶಿರಾ ತಾಲೂಕು ಮಂಡಲ ಪ್ರಧಾನ ಕಾರ್ಯದರ್ಶಿ ಭಾಸ್ಕರ್, ಮಧುಗಿರಿ ಮಂಡಲ ಪ್ರಧಾನ ಕಾರ್ಯದರ್ಶಿ ರಮೇಶ್ ಮತ್ತು ಮೋಹನ್, ಕೊರಟಗೆರೆ ಮಂಡಲ ಅಧ್ಯಕ್ಷರಾದ ರಘು, ಪಾವಗಡ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಗೋಲ್ಡನ್ ಮಂಜು ಮತ್ತು ಹನುಮಂತರೆಡ್ಡಿ, ಓಬಿಸಿ ಮೋರ್ಚಾ ಅಧ್ಯಕ್ಷರಾದ ಗೌಡಪ್ಪ, ಯುವ ಮೋರ್ಚಾ ಅಧ್ಯಕ್ಷರಾದ ಹರೀಶ್, ಹಿರಿಯ ಮುಖಂಡರಾದ ಸಿದ್ದಲಿಂಗಪ್ಪ, ಮುಖಂಡರಾದ ವೀರೇಶ್, ಕೊಟ್ಟ ಸಿದ್ದಪ್ಪ ಸೇರಿದಂತೆ ಅನೇಕ ಪ್ರಮುಖರು ಹಾಜರಿದ್ದರು.