- ಜಿಮ್, ಫಿಟ್ನೆಸ್ ಸೆಂಟರ್ ಮಾಲೀಕರು, ಟ್ರೈನಿಗಳ ಸಭೆ ಕರೆಯಲು ಡಿಸಿ, ಎಸ್ಪಿಗೆ ಒತ್ತಾಯ - ಮಹಿಳೆಯರಿಗೆ ಮಹಿಳೆಯಿಂದ ತರಬೇತಿ, ಡ್ರೆಸ್ ಕೋಡ್ಗೆ ಹಿಂದೂ ಮುಖಂಡರ ಆಗ್ರಹ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಪ್ರಭಾವಿಗಳು, ಶ್ರೀಮಂತರು, ಉದ್ಯಮಿಗಳು, ಅಧಿಕಾರಿಗಳು ಹೀಗೆ ಉಳ್ಳವರ ಮನೆಯ ಹೆಣ್ಣುಮಕ್ಕಳನ್ನೇ ಗುರಿಯಾಗಿಸಿಕೊಂಡು ಲವ್ ಜಿಹಾದ್ ಮಾಡುತ್ತಿರುವ ಹಿನ್ನೆಲೆ ದಾವಣಗೆರೆಯ ಎಲ್ಲಾ ಜಿಮ್, ಫಿಟ್ನೆಸ್ ಸೆಂಟರ್ಗಳ ಮಾಲೀಕರು, ಟ್ರೈನರ್ಗಳ ಸಭೆ ಮಾಡಿ, ಮಹಿಳೆಯರ ಸುರಕ್ಷೆಗೆ ಸಂಬಂಧಿಸಿದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಹಿಂದೂ ಸಂಘಟನೆಗಳು ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆಗೆ ಒಕ್ಕೊರಲಿನಿಂದ ಒತ್ತಾಯಿಸಿವೆ.ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಮಣಿಕಂಠ ಸರ್ಕಾರ್, ಜಿಲ್ಲಾ ಕೇಂದ್ರದ ಎಲ್ಲ ಜಿಮ್, ಫಿಟ್ನೆಸ್ ಸೆಂಟರ್ಗಳ ಮಾಲೀಕರು, ತರಬೇತುದಾರರ ಸಭೆ ಮಾಡಿ, ವಿದ್ಯಾರ್ಥಿನಿಯರು, ಯುವತಿಯರು, ಹೆಣ್ಣುಮಕ್ಕಳ ರಕ್ಷಣೆಗೆ ಅಗತ್ಯ ಸುರಕ್ಷತಾ, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು, ಅವುಗಳನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಬೇಕು ಎಂದರು.
ಜಿಮ್, ಫಿಟ್ನೆಸ್ ಸೆಂಟರ್ಗೆ ಬರುವ ಯುವತಿಯರು, ವಿದ್ಯಾರ್ಥಿನಿಯರು, ಗೃಹಿಣಿಯರಿಗೆ ಮಹಿಳೆಯರಿಂದಲೇ ಕಡ್ಡಾಯವಾಗಿ ತರಬೇತಿ ಕೊಡಿಸಬೇಕು. ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ತರಗತಿಗಳಾಗುವಂತೆ ಕ್ರಮ ಕೈಗೊಳ್ಳಬೇಕು. ಹೆಣ್ಣು ಮಕ್ಕಳಿಗೆ ತರಬೇತಿ ನೀಡುವವರಿಗೆ ಇನ್ನು ಮುಂದೆ ಕಡ್ಡಾಯವಾಗಿ ತರಬೇತಿ, ಪ್ರಮಾಣಪತ್ರ ಹೊಂದಿದ್ದು, ಅಂತಹವರು ಹೆಣ್ಣು ಮಕ್ಕಳೇ ಆಗಿರಬೇಕು. ಜಿಮ್ ಮಾಲೀಕರು, ತರಬೇತುದಾರರ ಸಭೆಯನ್ನು ಡಿಸಿ, ಎಸ್ಪಿ ನೇತೃತ್ವದಲ್ಲಿ ಹಿಂದೂ ಸಂಘಟನೆಗಳ ಮುಖಂಡರಿಗೆ ಆಹ್ವಾನಿಸಿ, ಮಾಧ್ಯಮಗಳ ಸಮ್ಮುಖದಲ್ಲೇ ಸಭೆ ಮಾಡಬೇಕು ಎಂದು ಅವರು ಆಗ್ರಹಿಸಿದರು.
ದಾವಣಗೆರೆಯ ಕೆಟಿಜೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸರಸ್ವತಿ ಬಡಾವಣೆ ಜಿಮ್ನ ಅನ್ಯ ಕೋಮಿನ ಟ್ರೈನರ್ವೊಬ್ಬ ಯುವತಿಯರು, ಮಹಿಳೆಯರನ್ನು ತಾನು ಅವಿವಾಹಿತ, ಹಿಂದೂ ಧರ್ಮಕ್ಕೆ ಸೇರಿದವನೆಂದೆಲ್ಲಾ ನಂಬಿಸಿ, ಪ್ರೀತಿ ಹೆಸರಲ್ಲಿ ಲೈಂಗಿಕವಾಗಿ ಬಳಸಿ, ಖಾಸಗಿ ಕ್ಷಣಗಳ ಸೆರೆ ಹಿಡಿದುಕೊಂಡು ಕುಟುಂಬದವರಿಗೆ ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡಿದ್ದಾನೆ. ಇಂತಹ ಘಟನೆಗಳನ್ನು ಗಂಭೀರವಾಗಿ ಪರಿಗಣಿಸುವ ಕೆಲಸ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ಸೂಕ್ತ ಕ್ರಮಕ್ಕೆ ಮುಂದಾಗಬೇಕು. ಸಂತ್ರಸ್ಥರು ದೂರು ನೀಡಿಲ್ಲವೆಂದು ಕೈಚೆಲ್ಲಿ ಕೂಡುವ ಕೆಲಸ ಬೇಡ ಎಂದು ಹೇಳಿದರು.
ಜಿಮ್, ಫಿಟ್ನೆಸ್ ಸೆಂಟರ್ಗೆ ಬರುವ ಪ್ರತಿಷ್ಟಿತ, ಶ್ರೀಮಂತ ಕುಟುಂಬಗಳ ಒಂದು ಸಮುದಾಯದ ವಿದ್ಯಾರ್ಥಿನಿ, ಯುವತಿ, ಮಹಿಳೆಯರ ಗುರಿಯಾಗಿಸಿಕೊಂಡು ಪ್ರೀತಿ, ಪ್ರೇಮದ ಹೆಸರಿನಲ್ಲಿ ದೈಹಿಕವಾಗಿ ಸಂಪರ್ಕಿಸಿದ್ದಲ್ಲದೆ ಅಂತಹ ಖಾಸಗಿ ಕ್ಷಣಗಳ ವಿಡಿಯೋ, ಫೋಟೋಗಳಿಟ್ಟುಕೊಂಡು ಹಣಕ್ಕಾಗಿ ಪೀಡಿಸುತ್ತಿದ್ದ ಆರೋಪಿ ವಿರುದ್ಧ ಇಲಾಖೆ ಕ್ರಮ ಕೈಗೊಳ್ಳುತ್ತಿಲ್ಲ. ಕೆಲವರು ಕುಟುಂಬದವರಿಗೆ ನೇರವಾಗಿ ಫೋಟೋ, ವಿಡಿಯೋ ಕಳಿಸಿ, ಲಕ್ಷಾಂತರ ರು.ಗಳಿಗೆ ಬೇಡಿಕೆ ಇಟ್ಟು, ಬ್ಲ್ಯಾಕ್ ಮೇಲ್ ಮಾಡಿದ್ದಾನೆ. ಹುಬ್ಬಳ್ಳಿ, ಧಾರವಾಡ, ಬೆಂಗಳೂರು, ಮೈಸೂರು, ಮಂಗಳೂರು ಇತರೆಡೆ ನಂತರ ಈಗ ದಾವಣಗೆರೆಯಲ್ಲೂ ಜಿಮ್ ಜಿಹಾದ್ ನಡೆಸಿದ್ದಾರೆ ಎಂದು ಅವರು ಆರೋಪಿಸಿದರು.ಲೈಂಗಿಕ ಶೋಷಣೆ, ದೌರ್ಜನ್ಯ, ಬ್ಲ್ಯಾಕ್ ಮೇಲ್ಗೊಳಗಾದ ವಿದ್ಯಾರ್ಥಿನಿಯರು, ಯುವತಿಯರು, ಮಹಿಳೆಯರು ಕೇಸ್ ದಾಖಲಿಸಲು ಮುಂದೆ ಬರುವುದಿಲ್ಲವೆಂಬುದನ್ನೇ ಬಂಡವಾಳವಾಗಿ ಮಾಡಿಕೊಂಡ ಇಂತಹ ಜಿಮ್ ಜಿಹಾದಿಗಳ ಪ್ರಕರಣ ಈಗ ಬೆಳಕಿಗೆ ಬಂದಿದೆ. ಪೊಲೀಸ್ ಇಲಾಖೆ ಸುಮುಟೋ ಕೇಸ್ ಹಾಕಲು ಬರುವುದಿಲ್ಲ ಎಂದು ಕೈಚೆಲ್ಲುತ್ತಿದ್ದಾರೆ. ಸಮಾಜದಲ್ಲಿ ಕೋಮು ಸಂಘರ್ಷಕ್ಕೆ ಕಾರಣವಾಗುತ್ತಿರುವ ಬಗ್ಗೆ ದೂರು ದಾಖಲಿಸಿ, ಯಾಕೆ ಕ್ರಮ ಕೈಗೊಳ್ಳಲಾಗುವುದಿಲ್ಲ ಎಂದು ಅವರು ಪ್ರಶ್ನಿಸಿದರು.
ಹಿಂದೂ ಜಾಗರಣಾ ವೇದಿಕೆಯ ಪ್ರಾಂತ್ಯ ಸಂಚಾಲಕ ಸತೀಶ ಪೂಜಾರಿ, ವಿದ್ಯಾರ್ಥಿನಿಯರು, ಯುವತಿಯರು, ಗೃಹಿಣಿಯರನ್ನು ಜಿಮ್, ಫಿಟ್ನೆಸ್ ಸೆಂಟರ್ ಗೆ ಕಳಿಸಬೇಡಿ ಅಂತೆಲ್ಲಾ ಹೇಳುವುದಿಲ್ಲ. ನಿಮ್ಮ ಮನೆಯ ಹೆಣ್ಣು ಮಕ್ಕಳನ್ನು ಜಿಮ್, ಫಿಟ್ನೆಸ್ ಸೆಂಟರ್ಗೆ ಕಳಿಸಿದ ನಂತರ ಪೋಷಕರು, ಕುಟುಂಬ ಸದಸ್ಯರು ನಿಗಾ ಇಡಬೇಕು. ಮಹಿಳೆಯರೇ ಟ್ರೈನರ್, ಪರ್ಸನಲ್ ಟ್ರೈನರ್ ಆಗಿರುವಲ್ಲಿ ಮಾತ್ರ ಕಳಿಸಿ. ತರಬೇತಿ ಪ್ರಮಾಣಪತ್ರ ಹೊಂದಿರುವ ಮಹಿಳಾ ಟ್ರೈನರ್ ಇರಬೇಕು. ಅಂತಹ ಕಡೆಗೆ ಕಳಿಸಿ, ನಿಮ್ಮ ಮನೆಯ ಹೆಣ್ಣು ಮಕ್ಕಳ ಸುರಕ್ಷತೆ, ಗೌರವಕ್ಕೆ ಚ್ಯುತಿಯಾಗದಂತೆ ಗಮನ ಕೊಡಿ ಎಂದರು.ಜಿಮ್, ಫಿಟ್ನೆಸ್ ಸೆಂಟರ್ಗಳಲ್ಲಿ ಎಲ್ಲ ಅಗತ್ಯ ಸುರಕ್ಷಾ ಕ್ರಮಗಳ ಬಗ್ಗೆ ಪೋಷಕರು, ಪೊಲೀಸರು ಖಾತ್ರಿಪಡಿಸಿಕೊಳ್ಳುವಂತಾಗಬೇಕು. ಜಿಲ್ಲಾ ಪೊಲೀಸ್ ಇಲಾಖೆಯಿಂದ ನಿರಂತರವಾಗಿ ಜಿಮ್ನ ತಪಾಸಣೆ, ಸಿಸಿ ಕ್ಯಾಮೆರಾಗಳ ತಪಾಸಣೆ, ಅಂತಹ ಸೆಂಟರ್ಗಳ ಮೇಲೆ ನಿಗಾ ಇಡಬೇಕು. ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನರವರು ಮಹಿಳೆಯರ ಮಾನ, ರಕ್ಷಣೆಯ ನಿಟ್ಟಿನಲ್ಲಿ ಸಂಬಂಧಿಸಿದ ಜಿಮ್ ವಿರುದ್ಧ ಸೂಕ್ತ ಕ್ರಮಕ್ಕೆ ಜಿಲ್ಲಾಡಳಿತ, ರಕ್ಷಣಾ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಸಂಸದೆ ಡಾ.ಪ್ರಭಾರ ಮೂಲಕ ಮಹಿಳೆಯರಿಗೆ ರಕ್ಷಣೆಯರಿಗೆ ಸುರಕ್ಷತೆಯ ಭರವಸೆ ಸಿಗಲಿ ಎಂದು ಅವರು ಒತ್ತಾಯಿಸಿದರು.
ಶ್ರೀರಾಮ ಸೇನೆಯ ಆಲೂರು ರಾಜಶೇಖರ, ಪಿ.ಸಾಗರ್, ಅನಿಲ ಸುರ್ವೆ, ಶಿವಕುಮಾರ ಪೂಜಾರ್, ಶ್ರೀಧರ್ ಕಮ್ಮಾಸ್, ಮಧು, ಚೇತನ್, ಮಧು, ವೀರೇಶ, ವಿನೋದರಾಜ, ರಾಜು ದೊಡ್ಡಮನಿ, ಮಂಜುನಾಥ ಇತರರು ಇದ್ದರು.- - -
(ಕೋಟ್) ದಾವಣಗೆರೆಯ ಜಿಮ್ ಮತ್ತು ಫಿಟ್ನೆಸ್ ಸೆಂಟರ್ಗಳಲ್ಲಿ ಹಿಂದೂ ಹೆಣ್ಣು ಮಕ್ಕಳು, ಯುವತಿಯರು, ವಿದ್ಯಾರ್ಥಿನಿಯರನ್ನೇ ಗುರಿಯಾಗಿಸಿಕೊಂಡು ಜಿಮ್ ಜಿಹಾರ್ ನಡೆಸಲಾಗುತ್ತಿದೆ. ಇದರ ಬಗ್ಗೆ ನಾವು ಧ್ನನಿ ಎತ್ತಿದರೆ ನಮ್ಮ ವಿರುದ್ಧವೇ ಪೊಲೀಸ್ ಇಲಾಖೆ ಕೇಸ್ ದಾಖಲಿಸುತ್ತದೆ. ಈ ಹಿಂದೆ ದಾವಣಗೆರೆಯಲ್ಲಿ ಡ್ರಗ್ಸ್ ಪೆಡ್ಲರ್ಗಳನ್ನೇ ಹಿಡಿದರೂ, ಗ್ರಾಹಕರೆಂದು ಕೇಸ್ ಮಾಡಿದ್ದರು. ಈಗ ಜಿಮ್ ಜಿಹಾದ್ ಕೇಸ್ ನಲ್ಲಿ ಸಂತ್ರಸ್ಥರೆ ದೂರು ನೀಡಲೆಂದು ಇಲಾಖೆ ಹೇಳುತ್ತಿದೆ. ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರು ದಾವಣಗೆರೆಯ ಜಿಮ್ ಜಿಹಾದ್ ಬಗ್ಗೆ ಸೂಕ್ತ ಕ್ರಮಕ್ಕೆ ಮುಂದಾಗಲಿ.- ಸತೀಶ ಪೂಜಾರಿ, ಹಿಂದೂ ಜಾಗರಣಾ ವೇದಿಕೆ.
- - --10ಕೆಡಿವಿಜಿ4: ದಾವಣಗೆರೆಯಲ್ಲಿ ಶುಕ್ರವಾರ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಮಣಿಕಂಠ ಸರ್ಕಾರ್, ಹಿಂದೂ ಜಾಗರಣಾ ವೇದಿಕೆ ಪ್ರಾಂತ್ಯ ಸಂಚಾಲಕ ಸತೀಶ ಪೂಜಾರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.