ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಪ್ರತೀ ಕ್ಷೇತ್ರದಲ್ಲೂ ಮಹಿಳೆಯರು ಯಶಸ್ವಿಯಾಗಿ ಮುನ್ನಡೆಯುತ್ತ ಇತಿಹಾಸ ನಿರ್ಮಿಸುತ್ತಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.ನವುಲೆಯ ರೋಟರಿ ರಿವರ್ ಸೈಡ್ ಸಭಾಂಗಣದಲ್ಲಿ ಮಲೆನಾಡು ಮಲ್ಲಿಗೆ ವೇದಿಕೆ ಶಿವಮೊಗ್ಗ, ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ, ನೌಕರರ ಸಂಘ ತಾಲೂಕು ಘಟಕ ಶಿಕಾರಿಪುರ ಮತ್ತು ಜಿಲ್ಲಾ ಘಟಕ ಶಿವಮೊಗ್ಗ, ರೋಟರಿ ಕ್ಲಬ್ ನವಲೆ ಸಹಯೋಗದೊಂದಿಗೆ ಏರ್ಪಡಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಹಾಗೂ ಸಾಹಿತ್ಯ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಮಹಿಳೆಯರ ಸಮರ್ಪಣೆ ಮತ್ತು ಕಠಿಣ ಪರಿಶ್ರಮ ಬಲಿಷ್ಠ ಮತ್ತು ಅದ್ಭುತ ಎಂದು ತಿಳಿಸಿದರು.
ಮಲೆನಾಡು ಮಲ್ಲಿಗೆ ವೇದಿಕೆ ಶಿವಮೊಗ್ಗ ಮುಖ್ಯಸ್ಥೆ ಆಶಾ ರಾಣಿ ಮಾತನಾಡಿ, ನಿಮ್ಮ ಶಕ್ತಿ, ಧೈರ್ಯ ಮತ್ತು ಬುದ್ಧಿವಂತಿಕೆಯು ನಿಮ್ಮ ಸುತ್ತಲಿನ ಎಲ್ಲರಿಗೂ ಸ್ಫೂರ್ತಿ ನೀಡುತ್ತಲೇ ಇರಬೇಕು. ಮಹಿಳೆಯ ದೃಢಸಂಕಲ್ಪವು ಯಾವುದೇ ಸವಾಲನ್ನು ಜಯಿಸಬಹುದು. ಪ್ರತಿಯೊಬ್ಬ ಯಶಸ್ವಿ ಮಹಿಳೆಯ ಹಿಂದೆ ಆಕೆಯ ಸ್ವಂತ ದೃಢಸಂಕಲ್ಪವಿದೆ ಎಂದರು.ಇಸಿಒ ಶಶಿರೇಖಾ ಮಾತನಾಡಿ, ಬೇರೆ ಯಾರೂ ನಂಬದಿದ್ದಾಗ ನೀವು ನಿಮ್ಮ ಮೇಲೆ ನಂಬಿಕೆ ಇಡಬೇಕು ಎಂದು ತಿಳಿಸಿದರು.
ಅಹಮದೀಯ ಮುಸ್ಲಿಂ ಮಹಿಳಾ ಸಂಘಟನೆಯ ರಿಜ್ವಾನ್ ಸಿದ್ದಿಕ್ಕಿ ಮಾತನಾಡಿ, ಮನೆಯಲ್ಲಿ ಶಾಂತಿ ಸಮೃದ್ಧಿಯನ್ನು ಸ್ಥಾಪಿಸುವುದು ಮಹಿಳೆಯರಿಂದ ಮಾತ್ರ ಸಾಧ್ಯ. ಭವಿಷ್ಯವು ಮಹಿಳೆಯದ್ದಾಗಿದೆ. ದೊಡ್ಡ ಕನಸು ಕಾಣಿರಿ ಎಂದರು.
ಲೆಕ್ಕ ಪರಿಶೋಧಕ ಆರ್.ಮನೋಹರ ಮಾತನಾಡಿ, ವಿವಿಧ ಕ್ಷೇತ್ರಗಳಲ್ಲಿ ಯಶಸ್ಸು ಸಾಧಿಸಿದ ಮಹಿಳೆಯರು ಇತರ ಮಹಿಳೆಯರಿಗೂ ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಸಮಾಜ ಸೇವಕ ಕೆ.ಇ.ಕಾಂತೇಶ್ ಅವರು ಅಹಮದೀಯ ಮುಸ್ಲಿಂ ಮಹಿಳಾ ಸಂಘಟನೆ ಅವರು ಕೊಡುಗೆಯಾಗಿ ನೀಡಿದ ಪೋಡಿಯಂ ಅನ್ನು ಅಬ್ಬಲಗೆರೆ ಸರ್ಕಾರಿ ಶಾಲೆಗೆ ಹಸ್ತಾಂತರಿಸಿದರು.ಜಯಮ್ಮ, ಶಿವಮೂರ್ತಿ, ಶಿವಶಂಕರ, ಗುಡ್ಡದಯ್ಯ, ಮಲೆನಾಡು ಮಲ್ಲಿಗೆ ವೇದಿಕೆಯ ತ್ರಿವೇಣಿ, ಪೂರ್ಣಿಮಾ, ನಾಗರತ್ನ, ಶೋಭಾ, ಹರೀಶ್ ಇತರರಿದ್ದರು.