ರೋಣ: ಮಹಿಳೆಯರು ಸಬಲರಾಗಿ, ಸ್ವಾವಲಂಬನೆ ಜೀವನ ಸಾಗಿಸುವ ಜತೆಗೆ ಸದೃಢ ಸಮಾಜ ನಿರ್ಮಾಣದಲ್ಲಿ ಬಹು ಮುಖ್ಯ ಪಾತ್ರ ವಹಿಸಬೇಕು ಎಂದು ವೈ. ಉಮಾ ಗೌಡಪ್ಪಗೌಡ್ರ ಹೇಳಿದರು.

ಪಟ್ಟಣದ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ , ಕದಳಿ ಮಹಿಳಾ ವೇದಿಕೆ ಮತ್ತು ಸ್ಪಂದನಾ ಮಹಿಳಾ ಮಂಡಳ ಸಹಯೋಗದಲ್ಲಿ ಭಾನುವಾರ ಜರುಗಿದ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಜರುಗಿದ ಜನಪದ ಸ್ಪರ್ಧೆಗಳ ಸಮಾರೋಪ ಸಮಾರಂಭವನ್ನು ಬೀಸು ಕಲ್ಲು ಬೀಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳೆ ಪ್ರತಿಯೊಂದು ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರಬೇಕು. ಈ ಮೂಲಕ ತನ್ನಲ್ಲಿರುವ ಶಕ್ತಿ, ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಪ್ರತಿ ಮಗುವಿಗೆ ಮನೆಯೇ ಮೊದಲ ಪಾಠಶಾಲೆ. ಹಾಗೆಯೇ ತಾಯಿಯೇ ಮೊದಲ ಗುರು. ಮಹಿಳೆ ಒಂದು ಸಮುದಾಯ ಹಾಗೂ ದೇಶದ ಅಭಿವೃದ್ಧಿಗೆ ಕಾರಣೀಕರ್ತಳಾಗುತ್ತಾಳೆ. ಅವರಿಗೆ ಸಿಗಬೇಕಾದ ಸ್ಥಾನಮಾನ, ಗೌರವ ಕೊಡುವುದು ಎಲ್ಲರ ಕರ್ತವ್ಯ. ಪ್ರತಿ ಮಹಿಳೆ ಸಾಮಾಜಿಕ ವ್ಯವಹಾರಗಳ ಮೂಲಕ ಆರ್ಥಿಕ ಭದ್ರತೆ ಕಂಡುಕೊಳ್ಳಬೇಕು. ಶೈಕ್ಷಣಿಕವಾಗಿ, ಆರ್ಥಿಕವಾಗಿ ಸ್ವಾವಲಂಬಿಗಳಾದಾಗ ಮಾತ್ರ ಸಮಗ್ರ ಅಭಿವೃದ್ಧಿ ಸಾಧ್ಯವಾಗುವುದು. ಸ್ತ್ರೀಯರು ಪ್ರತಿಯೊಂದು ರಂಗದಲ್ಲೂ ಅಭಿವೃದ್ಧಿ ಹೊಂದುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು. ಮಹಿಳೆ ತನ್ನ ಕುಟುಂಬದಲ್ಲಿ ತಾಯಿ, ಮಗಳು, ಸೊಸೆ ಎಂಬ ಪ್ರಮುಖ ಪಾತ್ರ ನಿರ್ವಹಿಸುತ್ತಾಳೆ. ಸಮಾಜದಲ್ಲಿ ಮಹಿಳೆಗೆ ಅರ್ಹ ಸ್ಥಾನಮಾನಗಳು ಸಿಗುವಂತಾಗಬೇಕು. ಈ ದಿಶೆಯಲ್ಲಿ ಮಹಿಳೆಯರು ಸಮಾಜಮುಖಿ ಕಾರ್ಯಗಳಲ್ಲಿ ತೊಡಬೇಕು. ಸ್ತ್ರೀಶಕ್ತಿ, ಸಾಮರ್ಥ್ಯ ಸಮಾಜಕ್ಕೆ ಗೊತ್ತಾಗಬೇಕು. ಈ ದಿಶೆಯಲ್ಲಿ ಮಹಿಳೆಯರು ಶ್ರಮಿಸಬೇಕು ಎಂದರು.

ಶಿಕ್ಷಕ ಪಂಚಯ್ಯ ಆರ್. ಹಿರೇಮಠ ದತ್ತಿ ಉಪನ್ಯಾಸ ನೀಡಿ, ಸ್ತ್ರೀಯರನ್ನು ಗೌರವ, ಪೂಜ್ಯ ಭಾವನೆಯಿಂದ ಕಂಡಲ್ಲಿ ಮಾತ್ರ ಸಮಾಜ ಸುಸಂಸ್ಕೃತವಾಗುವುದು. ಮಹಿಳೆಯು ಮಾತೆಯಾಗಿದ್ದು, ಸಹನಾಮೂರ್ತಿ, ಪ್ರೀತಿ, ವಾತ್ಸಲ್ಯದ ಮೇರು ಶಿಖರ. ಸಮಾಜದಲ್ಲಿ ಮಹಿಳೆಯರು ಮತ್ತು ಪುರುಷರು ಸರಿ ಸಮಾನರು. ಎಲ್ಲಿ ಮಹಿಳೆಯರನ್ನು ಪೂಜಿಸುತ್ತಾರೋ ಅಲ್ಲಿ ದೇವರು ನೆಲೆಸಿರುತ್ತಾರೆ ಎನ್ನುವ ಭಾವನೆ ಮೂಡಬೇಕು. ಸಹನೆ, ಸೃಜನತೆ ಮತ್ತು ತಾಳ್ಮೆ ಮಹಿಳೆಯರಲ್ಲಿದೆ. ಹೀಗಾಗಿ ಸ್ತ್ರೀಯರನ್ನು ಪೂಜ್ಯ, ಮಾತೆಯ ಸ್ಥಾನದಲ್ಲಿ ನೋಡಲಾಗುತ್ತದೆ ಎಂದರು.

ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಶಶಿಕಲಾ ಎಸ್. ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲ ರಂಗದಲ್ಲಿ ಮಹಿಳೆಯರು ಸಹಭಾಗಿತ್ವ ಅತಿ ಮುಖ್ಯವಾಗಿದೆ. ಮಹಿಳೆಯರು ಸಬಲರು ಎನ್ನುವುದನ್ನು ತೋರಿಸಬೇಕು ಎಂದರು.


ಮಾತೋಶ್ರೀ ಬಸಮ್ಮ ಎಸ್. ಪಾಟೀಲ ಅವರ ಭಾವಚಿತ್ರಕ್ಕೆ ಅಕ್ಕಮಹಾದೇವಿ ಮಹಿಳಾ ಮಂಡಳ ಅಧ್ಯಕ್ಷೆ ಅನ್ನಪೂರ್ಣಾ ಜಿ. ಪಾಟೀಲ ಪುಷ್ಪಾರ್ಚನೆಗೈದರು. ಡಂಬಳ, ನರೇಗಲ್ಲ, ಗಜೇಂದ್ರಗಡ, ರೋಣ ಪಟ್ಟಣದಲ್ಲಿ ಜರುಗಿದ ಜನಪದ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ, ಸನ್ಮಾನಿಸಲಾಯಿತು.

ವೈ. ಕಮಲಾಕ್ಷಿ ಪುರುಷೋತ್ತಮಗೌಡ, ವೈ. ಲಲಿತಾ ರುದ್ರಗೌಡ, ಈರಮ್ಮ ಎಸ್. ಪಾಟೀಲ, ಗಿರಿಜಮ್ಮ ಪಾಟೀಲ, ಮಂಜುಳಾ ಹುಲ್ಲಣ್ಣವರ ಉಪಸ್ಥಿತರಿದ್ದರು. ಗೀತಾ ಕೊಪ್ಪದ ಕಾರ್ಯಕ್ರಮ ನಿರೂಪಿಸಿದರು. ಲಕ್ಷ್ಮೀ ಗಡಗಿ ಸ್ವಾಗತಿಸಿದರು. ನಾಜಬೇಗಂ ಯಲಿಗಾರ ವಂದಿಸಿದರು.