ಕೊಪ್ಪಳ: ಕಟ್ಟಡ ಕಾರ್ಮಿಕರ ಬಾಕಿ ಸೌಲಭ್ಯಗಳನ್ನು ಶೀಘ್ರ ಬಿಡುಗಡೆ ಮಾಡಬೇಕು, ಕಲ್ಯಾಣ ಮಂಡಳಿ ನಿಧಿಯ ದುರ್ಬಳಕೆ ತಡೆಯಬೇಕು ಎಂದು ಆಗ್ರಹಿಸಿ ಕೊಪ್ಪಳ ಜಿಲ್ಲಾ ಕಟ್ಟಡ ಕಾರ್ಮಿಕ ಸಂಘಟನೆಗಳ ಸಮನ್ವಯ ಸಮಿತಿ ವತಿಯಿಂದ ನಗರದ ಅಶೋಕ ವೃತ್ತದಿಂದ ಜಿಲ್ಲಾ ಆಡಳಿತ ಭವನದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು. ಬಳಿಕ ಜಿಲ್ಲಾ ಕಾರ್ಮಿಕ ಅಧಿಕಾರಿ ಸುಧಾ ಗರಗ ಅವರ ಮೂಲಕ ಮುಖ್ಯಮಂತ್ರಿ ಹಾಗೂ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಐಎಫ್‌ಟಿಯು ಜಿಲ್ಲಾ ಮುಖ್ಯ ಸಂಚಾಲಕ ಬಸವರಾಜ ಶೀಲವಂತರ್, ಸಿಐಟಿಯು ಮುಖಂಡ ಖಾಸಿಮ್ ಸರ್ದಾರ್, ಎಐಯುಟಿಯುಸಿ ಜಿಲ್ಲಾ ಮುಖಂಡ ಶರಣು ಗಡ್ಡಿ, ಐಎಫ್‌ಟಿಯು ಸಂಘಟನಾ ಸಂಚಾಲಕ ತುಕಾರಾಮ ಪಾತ್ರೋಟಿ, ಎಸ್.ಎ. ಗಫಾರ್ ಮಾತನಾಡಿ, ಬಾಕಿ ಶೈಕ್ಷಣಿಕ ಸಹಾಯಧನ ಬಿಡುಗಡೆ, ಪಿಂಚಣಿ ಹಾಗೂ ಮದುವೆ ಸಹಾಯಧನ ಹೆಚ್ಚಳ, ಕಿಟ್‌ ಖರೀದಿ ಪದ್ಧತಿ ಸ್ಥಗಿತ, ಬೋಗಸ್ ಕಾರ್ಡ್‌ ರದ್ದು, ಬಾಕಿ ಅರ್ಜಿಗಳ ಶೀಘ್ರ ವಿಲೇವಾರಿಗೆ ಆಗ್ರಹಿಸಿದರು.

ಎಐಸಿಸಿಟಿಯು ಮುಖಂಡ ಹನುಮಂತಪ್ಪ ಹುಲಿಹೈದರ, ಪಾಸ್ಟರ್ ಅಸೋಸಿಯೇಷನ್ ಅಧ್ಯಕ್ಷ ಚನ್ನಬಸಪ್ಪ ಅಪ್ಪಣ್ಣವರ್, ಮೌಲಾ ಹುಸೇನ್ ಹಣಗಿ, ಮೌಲಾಸಾಬ್ ಕಪಾಲಿ, ಮಖಬೂಲ್ ರಾಯಚೂರು, ಗಾಳೆಪ್ಪ ಮುಂಗೋಲಿ, ಅಮೀರ್ ಪಾಷಾ, ಮಂಜುನಾಥ, ದೇವಪ್ಪ ಕಟ್ಟಿಮನಿ, ರೇಣುಕಮ್ಮ, ರಾಜೇಶ್ವರಿ, ಲಕ್ಷ್ಮಿ ಉಪ್ಪಾರ ಸೇರಿದಂತೆ 500ಕ್ಕೂ ಹೆಚ್ಚು ಕಾರ್ಮಿಕರು ಭಾಗವಹಿಸಿದ್ದರು.