ಉಡುಪಿ: ಇಲ್ಲಿನ ಕನ್ನರ್ಪಾಡಿಯ ಸಾರ್ವಜನಿಕ ಶ್ರೀ ಗಣೇಶೋತ್ಸವದ 21ನೇ ವರ್ಷದ ಆಚರಣೆ ಬಗ್ಗೆ ಸಮಿತಿ ಅಧ್ಯಕ್ಷ ಸಮಾಜ ಸೇವಕ ಕೆ. ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮುಲ್ಕಿ ಅಧ್ಯಕ್ಷತೆಯಲ್ಲಿ ಕನ್ನರ್ಪಾಡಿ ಶ್ರೀ ಜಯದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಮಹಾಸಭೆ ನಡೆಯಿತು.
ಕಳೆದ ಬಾರಿ 20ನೇ ವರ್ಷದ ಗಣೇಶೋತ್ಸವಕ್ಕೆ ಲಕ್ಷಾಂತರ ಭಕ್ತರು ಆಗಮಿಸಿ, ಪಂಚಮುಖಿ ಗಣಪತಿಯ ದರ್ಶನ ಪಡೆದು ತಮ್ಮ ಮನಸ್ಸಿನ ಸಕಲ ಇಷ್ಟಾರ್ಥಗಳನ್ನು ಈಡೇರಿಸಿಕೊಂಡಿದ್ದಾರೆ. ವಿಶೇಷವಾಗಿ ಆಗ ಉಪಮುಖ್ಯಮಂತ್ರಿಯಾಗಿದ್ದ ಡಿ.ಕೆ. ಶಿವಕುಮಾರ್ ಗಣೇಶೋತ್ಸವಕ್ಕೆ ಆಗಮಿಸಿದ್ದು, ಇತಿಹಾಸ ಪ್ರಸಿದ್ದ ಶ್ರೀ ಜಯದುರ್ಗಪರಮೇಶ್ವರಿ ತಾಯಿಯ ಸನ್ನಿಧಿಯಲ್ಲಿ, ಪಂಚಮುಖಿ ಮಹಾಗಣಪತಿಯಲ್ಲಿ ಮುಂದಿನ ಬಾರಿ ಗಣೇಶೋತ್ಸವದಲ್ಲಿ ತಾವೂ ಮುಖ್ಯಮಂತ್ರಿಯಾಗುವಿರಿ ಎಂದು ಅರ್ಚಕ ಗುರುರಾಜ್ ಭಟ್ ಸಗ್ರಿ ಪ್ರಾರ್ಥಿಸಿ ಪ್ರಸಾದ ನೀಡಿದ್ದರು. ಅದೀಗ ಈಡೇರಿದೆ. ಇದು ತಮ್ಮೆಲ್ಲರಿಗೂ ಹೆಮ್ಮೆ ಸಂತಸವನ್ನುಂಟು ಮಾಡಿದೆ ಎಂದು ಕೃಷ್ಣಮೂರ್ತಿ ಆಚಾರ್ಯ ಹೇಳಿದರು.ಕಳೆದ ಬಾರಿಯ ಗಣೇಶೋತ್ಸವದ ನೆನಪಿಗಾಗಿ ಕಿನ್ನಿಮುಲ್ಕಿ ಲೇಬರ್ ಕಾಲೊನಿಯಲ್ಲಿ ಬಡವರಿಗಾಗಿ 3 ಮನೆ ನಿರ್ಮಿಸಲು ನಿರ್ಧರಿಸಿದ್ದು, ಭಾನುವಾರ ಬೆಳಗ್ಗೆ 10.30 ಗಂಟೆಗೆ ಶಂಕುಸ್ಥಾಪನೆ ನಡೆಸಲಾಗುವುದು. ಈ ಮನೆಗಳನ್ನು ಮುಖ್ಯಮಂತ್ರಿ ಅವರಿಂದಲೇ ಉದ್ಘಾಟಿಸುವುದೆಂದು ಸಭೆಯಲ್ಲಿ ನಿರ್ಧರಿಸಲಾಯಿತು. ಅಲ್ಲದೇ 21ನೇ ವರ್ಷದ ಗಣೇಶೋತ್ಸವವನ್ನು 10 ದಿನ ವಿಜೃಂಭಣೆಯಿಂದ ಮಾಡುವುದಾಗಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ಹಿರಿಯರಾದ ನಾರಾಯಣ ರಾವ್ ಕನ್ನರ್ಪಾಡಿ, ಸಂಜೀವ ಎ. ಕನ್ನರ್ಪಾಡಿ, ಮುರಳೀಧರ್ ರಾವ್ ಕನ್ನರ್ಪಾಡಿ. ಭಾಸ್ಕರ್ ಸುವರ್ಣ ಕನ್ನರ್ಪಾಡಿ, ಪತಂಜಲಿ ಬಲ್ಲಾಳ್ ಕನ್ನರ್ಪಾಡಿ, ಸುಜನ್ ಶೆಟ್ಟಿ ಒಡ್ಡಾಡಿ, ಜೀವನ್ ಶೆಟ್ಟಿ ಬಾಲಾಜಿ ಲೇಔಟ್, ಸದಾನಂದ ಆಚಾರ್ಯ ಬಿ.ಬಿ. ನಗರ ಸಹಿತ ಅನೇಕ ಹಿರಿಯರು ಹಾಜರಿದ್ದರು.ಕಾರ್ಯಕ್ರಮವನ್ನು ಪ್ರಧಾನ ಕಾರ್ಯದರ್ಶಿ ಜಯಕರ ಶೇರಿಗಾರ್ ಕನ್ನರ್ಪಾಡಿ ನಿರೂಪಿಸಿದರು, ಕಾರ್ಯದರ್ಶಿ ನವೀನ್ ಶೆಟ್ಟಿ ಒಡ್ಡಾಡಿ ವಂದಿಸಿದರು.
