ಸಾರಾಂಶ
ಹಾನಗಲ್ಲ: ಕಾರ್ಮಿಕ ಇಲಾಖೆಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಹೈಟೆಕ್ ಸಂಚಾರಿ ಆರೋಗ್ಯ ಕ್ಲಿನಿಕ್ಗೆ ಶಾಸಕ ಶ್ರೀನಿವಾಸ ಮಾನೆ ಚಾಲನೆ ನೀಡಿದರು. ಶನಿವಾರ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರು ಮತ್ತು ಅವರ ಅವಲಂಬಿತರಿಗೆ ಕೈಗೆಟುಕುವ ರೀತಿಯಲ್ಲಿ ಆರೋಗ್ಯ ಸೇವೆಯನ್ನು ಮನೆ ಬಾಗಿಲಿನಲ್ಲಿ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ಹೈಟೆಕ್ ಸಂಚಾರಿ ಆರೋಗ್ಯ ಕ್ಲಿನಿಕ್ ಸೇವೆ ನೀಡುತ್ತಿದೆ. ಕ್ಲಿನಿಕ್ನಲ್ಲಿ ವೈದ್ಯರನ್ನು ಒಳಗೊಂಡಂತೆ ಆರು ಜನ ವೈದ್ಯಕೀಯ ಸಿಬ್ಬಂದಿ ಅಗತ್ಯ ಪ್ರಾಥಮಿಕ ಚಿಕಿತ್ಸೆ ನೀಡಲಿದ್ದಾರೆ. ಕಟ್ಟಡ ಮತ್ತು ಇತರ ಕಾರ್ಮಿಕರ ಆರೋಗ್ಯವನ್ನು ಸುಧಾರಿಸುವುದು, ಸುಲಭವಾಗಿ ಮತ್ತು ಉಚಿತವಾಗಿ ವೈದ್ಯಕೀಯ ಸೇವೆ ಒದಗಿಸುವ ಉದ್ದೇಶದೊಂದಿಗೆ ಸಂಚಾರಿ ಕ್ಲಿನಿಕ್ ಆರಂಭಿಸಲಾಗಿದೆ. ಇಸಿಜಿ, ಬಿಪಿ, ರಕ್ತ ಪರೀಕ್ಷೆ ಸೇರಿದಂತೆ ವಿವಿಧ ರೀತಿಯ ತಪಾಸಣೆಗಳಿಗೆ ಅತ್ಯಾಧುನಿಕ ಉಪಕರಣಗಳನ್ನು ಸಂಚಾರಿ ಕ್ಲಿನಿಕ್ನಲ್ಲಿ ಅಳವಡಿಸಲಾಗಿದೆ. 15 ದಿನಗಳ ಮೊದಲು ರೂಟ್ ಮ್ಯಾಪ್ ತಯಾರಿಸಿಕೊಂಡು, ಮಾಹಿತಿ ನೀಡಿ ಆರೋಗ್ಯ ಸೇವೆ ನೀಡಲಾಗುವುದು. ಕೆಲಸದ ಸ್ಥಳದಲ್ಲಿಯೇ ಆರೋಗ್ಯ ಸೇವೆ ಸಿಗುವುದರಿಂದ ಕಾರ್ಮಿಕರಿಗೆ ಸಮಯ ಮತ್ತು ಹಣ ಉಳಿತಾಯವಾಗಲಿದೆ ಎಂದು ಶಾಸಕ ಮಾನೆ ಈ ಸಂದರ್ಭದಲ್ಲಿ ಹೇಳಿದರು. ಕೆಪಿಸಿಸಿ ಸದಸ್ಯ ಟಾಕನಗೌಡ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹನುಮಂತಪ್ಪ ಮರಗಡಿ, ಮಂಜು ಗೊರಣ್ಣನವರ, ತಾಪಂ ಕೆಡಿಪಿ ಸದಸ್ಯ ಹನೀಫ್ ಬಂಕಾಪೂರ, ಕಾರ್ಮಿಕ ನಿರೀಕ್ಷಕಿ ಮೀನಾಕ್ಷಿ ಸಿಂದಿಹಟ್ಟಿ, ಮುಖಂಡರಾದ ರವೀಂದ್ರ ದೇಶಪಾಂಡೆ, ಮಧು ಪಾಣಿಗಟ್ಟಿ, ಸುರೇಶ ಕೆರೆಪ್ಪನವರ, ಗನಿ ಪಟೇಲ್, ಮಕ್ಬೂಲ್ ಬಡಗಿ, ರಾಜೇಂದ್ರ ಜಿನ್ನಣ್ಣನವರ, ಮಹಾಂತೇಶ ವಾಲಿಕಾರ, ರಾಮಚಂದ್ರ ತಳವಾರ, ರವಿ ಜಾಧವ, ಮಂಜುನಾಥ ಬಾರ್ಕಿ, ಲಲಿತಾ ಗಾಂಜಿಯವರ, ಮಹಾಂತೇಶ ನಾಯ್ಕ, ಡಾ.ವಿನಯ, ಸಂಗೀತಾ ಪಾಟೀಲ, ಪ್ಯಾರಿಜಾನ, ಅಶ್ವಿನಿ ಅರಸನಾಳ, ದೇವರಾಜ ಹಿರೇಮಠ ಈ ಸಂದರ್ಭದಲ್ಲಿ ಇದ್ದರು.