ಸಾರಾಂಶ
ಹೊಸಕೋಟೆ: ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಕೆರೆ ಕಟ್ಟೆ, ಕುಡಿಯುವ ನೀರು ತುಂಬಿಸಲು ಸರ್ಕಾರ ಪಣ ತೊಟ್ಟಿದ್ದು 2027ರ ವೇಳೆಗೆ ಮಹತ್ವದ ಯೋಜನೆಯಾದ ಎತ್ತಿನಹೊಳೆ ಯೋಜನೆ ನೀರನ್ನು ಕೊಡುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ನಗರದ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ತಾಲೂಕು ಪಂಚಾಯಿತಿ ಹೊಸಕೋಟೆ ಹಾಗೂ 28 ಗ್ರಾಮ ಪಂಚಾಯತಿಗಳ ವತಿಯಿಂದ ಇ-ಸ್ವತ್ತು, ಹಕ್ಕು ಪತ್ರ ಹಾಗೂ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯಗಳ ವಿತರಣಾ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ ಬೆಂಗಳೂರು ನಗರಕ್ಕೆ ಹೊಂದಿಕೊಂಡಿದ್ದು ತಾಲೂಕುಗಳ ಅಭಿವೃದ್ಧಿಗೆ ಎಲ್ಲಾ ರೀತಿಯ ನೆರವು ನೀಡಲಾಗುವುದು. ಹೊಸಕೋಟೆಯೂ ಸಹ ಬಹಳ ವೇಗವಾಗಿ ಅಭಿವೃದ್ಧಿ ಕಾಣುತ್ತಿದ್ದು ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಮೆಟ್ರೋ ಸಂಪರ್ಕ ಹೊಸಕೋಟೆಗೆ ಕಲ್ಪಿಸಲಾಗುವುದು. ಇದಕ್ಕಾಗಿ ಡಿಪಿಆರ್ ಸಿದ್ದಪಡಿಸಲು ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದು ಹೇಳಿದರು.
6ನೇ ಗ್ಯಾರಂಟಿಯೇ ಇ-ಸ್ವತ್ತು:ಇಂದು ಹೊಸಕೋಟೆಯಲ್ಲಿ 6,000 ಇ-ಸ್ವತ್ತು ನೀಡಲಾಗುತ್ತಿದೆ. ರಾಜ್ಯಾದ್ಯಂತ 1.11 ಕೋಟಿ ಸ್ವತ್ತು ನೀಡಲಾಗುತ್ತಿದೆ. ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಬಿ ಖಾತೆಯಿಂದ ಎ ಖಾತೆಗೆ ಆಸ್ತಿ ವರ್ಗ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ. ರೈತರ ಕೃಷಿ ಭೂಮಿಗಳಿಗೆ 19000 ಕೋಟಿ ರು.ಗಳ ವೆಚ್ಚದಲ್ಲಿ 10 ಎಚ್ಪಿವರೆಗೆ ವಿದ್ಯುತ್ ಅನ್ನು ಪ್ರತಿ ನಿತ್ಯ 7 ಗಂಟೆ ನೀಡುತ್ತಿದ್ದೇವೆ. ಇದನ್ನು ಬಿಜೆಪಿ ಅವಧಿಯಲ್ಲಿ ಮಾಡಿದ್ದಲ್ಲ ಎಂದು ಹೇಳಿದರು.
ಬಿಜೆಪಿ ವಿರುದ್ದ ವಾಗ್ದಾಳಿ:ರಾಜ್ಯ ಸರ್ಕಾರ ನೀಡುತ್ತಿರುವ 5 ಗ್ಯಾರಂಟಿಗಳಿಂದ ನಮ್ಮ ಕೈಗೆ ಶಕ್ತಿ ತುಂಬಿದೆ. ಬೆಲೆ ಏರಿಕೆ, ಆದಾಯ ಪಾತಾಳಕ್ಕೆ ಇಳಿದ ಸಂದರ್ಭದಲ್ಲಿ ಗ್ಯಾರಂಟಿಗಳನ್ನು ಜಾರಿಗೆ ತಂದೆವು. ಈಗ ಅದೇ ಗ್ಯಾರಂಟಿ ಗಳು ದೇಶಕ್ಕೆ ಮಾದರಿ ಎನಿಸಿಕೊಂಡಿದೆ. ಇತರೆ ರಾಜ್ಯಗಳು ನಮ್ಮ ಗ್ಯಾರಂಟಿಗಳನ್ನು ಕಾಪಿ ಮಾಡುತ್ತಿದ್ದಾರೆ. ನರೇಗಾ ಯೋಜನೆ, ಆಹಾರ ಭದ್ರತೆ ಕಾಯ್ದೆ, ಉಳುವವನಿಗೆ ಭೂಮಿ, ಭಗರ್ ಹುಕುಂ, ಕ್ಷೀರಧಾರೆ ಸಬ್ಸಿಡಿ, ಐದು ಗ್ಯಾರಂಟಿ ಮುಂತಾದ ಯೋಜನೆಗಳು ಕೇಂದ್ರ ಹಾಗೂ ರಾಜ್ಯಗಳಲ್ಲಿ ನಮ್ಮ ಸರ್ಕಾರ ಇದ್ದಾಗಲೇ ಜಾರಿಯಾದವು. ಆದರೆ ಏನೂ ಮಾಡದ ಬಿಜೆಪಿಯವರು ಸುಮ್ಮನೆ ಟೀಕೆ ಮಾಡುತ್ತಿದೆ. ಬಿಜೆಪಿಗರಿಗೆ ನಮ್ಮ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, ಚುನಾವಣೆಯಲ್ಲಿ ಮಾತು ನೀಡಿದಂತೆ ನಾವು ಎಲ್ಲಾ ಗ್ಯಾರಂಟಿ ಯೋಜನೆಗಳು ಜಾರಿಗೊಳಿಸಿದ್ದು, ನುಡಿದಂತೆ ನಡೆದಿದ್ದೇವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಮೆಟ್ರೋ, ಯುಜಿಡಿ, ಎತ್ತಿನಹೊಳೆ ಯೋಜನೆ ಶೀಘ್ರ ಪೂರ್ಣಗೊಳಿಸಬೇಕೆಂಬುದೆ ನನ್ನ ಒತ್ತಾಸೆ. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇದನ್ನು ಸಾಕಾರಗೆಳಿಸಬೇಕು ಎಂದರು.ಕಾರ್ಯಕ್ರಮದಲ್ಲಿ ಶಾಸಕ ಶರತ್ ಬಚ್ಚೇಗೌಡ, ನೆಲಮಂಗಲ ಶಾಸಕ ಶ್ರೀನಿವಾಸ್, ೫ನೇ ಹಣಕಾಸು ಆಯೋಗದ ಅಧ್ಯಕ್ಷ ಸಿ ನಾರಾಯಣಸ್ವಾಮಿ, ಎಂಎಲ್ಸಿ ರವಿ, ಗ್ಯಾರಂಟಿ ಯೋಜನೆ ಅನುಷ್ಟಾನ ಸಮಿತಿಯ ಜಿಲ್ಲಾ ಅಧ್ಯಕ್ಷ ರಾಜಣ್ಣ, ಜಿಲ್ಲಾಧಿಕಾರಿ ಎ.ಬಿ ಬಸವರಾಜು, ಜಿಪಂ ಸಿಇಒ ಡಾ.ಕೆ.ಎನ್ ಅನುರಾಧ, ಬಮೂಲ್ ನಿರ್ದೇಶಕ ಬಿವಿ.ಸತೀಶ್ಗೌಡ ಇತರರು ಹಾಜರಿದ್ದರು.
ಬಾಕ್ಸ್.............ಗ್ಯಾರಂಟಿ ಯೋಜನೆ ಟೀಕಿಸುವುದೇ ಬಿಜೆಪಿ ಕೆಲಸ
ಹೊಸಕೋಟೆ: ಬಡವರ ಬದುಕನ್ನು ಹಸನಾಗಿಸಲು ಜಾರಿ ಮಾಡಿದ ೫ ಗ್ಯಾರಂಟಿಗಳ ಬಗ್ಗೆ ಪ್ರತಿದಿನ ಟೀಕೆ ಮಾಡುವುದೇ ಬಿಜೆಪಿ ಕೆಲಸ ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದರು.ಪಲಾನುಭವಿಗಳಿಗೆ ವಿವಿಧ ಸವಲತ್ತು ವಿತರಿಸಿ ಮಾತನಾಡಿದ ಅವರು, ಸರ್ವರಿಗೂ ಸಮಾನ ಅವಕಾಶ ಎಂಬ ಧ್ಯೇಯ ದೊಂದಿಗೆ ಎಲ್ಲಾ ವರ್ಗದವರಿಗೂ ಸೌಲಭ್ಯ ನೀಡಲಾಗುತ್ತಿದೆ. ನವ ಕರ್ನಾಟಕ ನಿರ್ಮಾಣದ ದಿಟ್ಟ ಹೆಜ್ಜೆ ಇಟ್ಟಿರುವ ನಮ್ಮ ಸರ್ಕಾರ ಐದು ಗ್ಯಾರಂಟಿ ಯೋಜನೆ ಜಾರಿಗೆ ತಂದಿದ್ದೇವೆ. ವಿರೋದ ಪಕ್ಷಗಳು ವಿರೋದ ಮಾಡಿದರು ನಾವು ಜಾರಿಗೆ ತಂದ ಗ್ಯಾರಂಟಿ ಯೋಜನೆಗಳನ್ನು ಇಡೀ ದೇಶದಲ್ಲಿ ಯಾರು ಜಾರಿಗೆ ತಂದಿಲ್ಲ. ಪ್ರತಿ ಕುಟುಂಬ 5-6 ಸಾವಿರ ಪ್ರತಿ ತಿಂಗಳು ಉಳಿತಾಯ ಮಾಡಲಾಗುತ್ತಿದೆ.
ಗ್ರಾಮೀಣಾಭಿವೃದ್ಧಿ ಇಲಾಖೆ, ಐಟಿ ಇಲಾಖೆಯಲ್ಲಿ ರಾಜ್ಯ ನಂಬರ್ ಒನ್ ಸ್ಥಾನದಲ್ಲಿದ್ದೇವೆ. ನರೇಗಾ ಯೋಜನೆಯಡಿ 13 ಕೋಟಿ ಮಾನವ ದಿನಗಳು ಸೃಷ್ಠಿಸಿ, ನರೇಗಾ ಕೂಲಿ ಕಾರ್ಮಿಕರ ಮಕ್ಕಳಿಗೆ ಕೂಸಿನ ಮನೆಗಳನ್ನು ನಿರ್ಮಿಸಿದ್ದೇವೆ. ಅಲ್ಲಿ 50,000 ಮಕ್ಕಳು ಕಲಿಯುತ್ತಿದ್ದಾರೆ. ರಾಜ್ಯದಲ್ಲಿ 8760 ಕಿ.ಮೀ. ಗ್ರಾಮೀಣ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಈಗಾಗಲೇ ರಾಜ್ಯಾದ್ಯಂತ ಮಾದರಿ ತಾಪಂ ನಿರ್ಮಿಸಲು ಉದ್ದೇಶಿಸಲಾಗಿದ್ದು ಹೊಸಕೋಟೆಯಲ್ಲಿ ಮೊದಲ ಮಾದರಿ ತಾಲ್ಲೂಕು ಪಂಚಾಯಿತಿ ನಿರ್ಮಿಸಲಾಗುವುದು ಎಂದರು.ಬಾಕ್ಸ್ ...........
ಎಂಟಿಬಿಗೆ ಸದನದಲ್ಲೆ ಚಾಲೆಂಜ್ ಮಾಡಿದ್ದೆಬಿಜೆಪಿಯಿಂದ ಶಾಸಕರಾದವರು ನಿಮ್ಮ ಬಳಿಗೆ ಬಂದು ಸಮಸ್ಯೆ ಕೇಳುತ್ತಿದ್ದಾರಾ? ಅವರು ಇಂದು ಈ ಕಾರ್ಯಕ್ರಮಕ್ಕೆ ಬಂದು ವೇದಿಕೆ ಮೇಲೆ ಕುಳಿತು ಸರ್ಕಾರದ ಜನಪರ ಯೋಜನೆ ಸವಲತ್ತು ವಿತರಣೆ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಬೇಕಾಗಿತ್ತು. ಬಹುಶಃ ಅವರಿಗೆ ಬರೋಕೆ ಧಮ್ ಇಲ್ಲ ಅನ್ಸುತ್ತೆ. ಎಂಟಿಬಿ ನಾಗರಾಜ್ ಅವರು ಆಪರೇಷನ್ ಕಮಲಕ್ಕೆ ಒಳಾಗದ ಸಂದರ್ಭದಲ್ಲಿ ಸದನದಲ್ಲೆ ಚಾಲೆಂಜ್ ಮಾಡುತ್ತಾ ರಣರಂಗದಲ್ಲಿ ಭೇಟಿ ಮಾಡೋಣ ಎಂದು ಹೇಳಿದ್ದೆ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ವಿರುದ್ಧ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಾಗ್ದಾಳಿ ಮಾಡಿದರು.
ಫೋಟೋ: 20 ಹೆಚ್ಎಸ್ಕೆ 2 ಮತ್ತು 32:ಹೊಸಕೋಟೆ ನಗರದಲ್ಲಿ ನಡೆದ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ತಾಲ್ಲೂಕು ಪಂಚಾಯಿತಿ ಹೊಸಕೋಟೆ ಹಾಗೂ 28 ಗ್ರಾಮ ಪಂಚಾಯತಿಗಳ ವತಿಯಿಂದ ಇ-ಸ್ವತ್ತು ಹಾಗೂ ಹಕ್ಕು ಪತ್ರ ಹಾಗೂ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯಗಳನ್ನು ಉಪಮುಖ್ಯಮಂತ್ರಿ ಡಿಕೆ.ಶಿವಕುಮಾರ್ ವಿತರಿಸಿದರು.
3: ವಿವಿಧ ಗ್ರಾಮ ಪಂಚಾಯತ್ ವತಿಯಿಂದ ನಿರ್ಮಿಸಿದ್ದ ಸ್ಟಾಲ್ಗಳಿಗೆ ತೆರಳಿ ಉಪಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅಧಿಕಾರಿಗಳಿಂದ ಮಾಹಿತಿ ಪಡೆದರು.ಫೋಟೋ: 20 ಹೆಚ್ಎಸ್ಕೆ 4
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಬೆಳ್ಳಿಗದೆ ನೀಡಿ ಶಾಸಕ ಶರತ್ ಬಚ್ಚೇಗೌಡ ಅಭಿನಂದಿಸಿದರು.