ಕನ್ನಡಪ್ರಭ ವಾರ್ತೆ ಗದಗ

ಸಧೃಡ ಆರೋಗ್ಯಕ್ಕೆ ಯೋಗ ಅತ್ಯವಶ್ಯಕ. ಆರೋಗ್ಯ ಇದ್ದರೆ ನಾವು ಏನನ್ನಾದರೂ ಸಾಧಿಸಬಲ್ಲೆವು. ಅದಕ್ಕಾಗಿ ಪ್ರತಿದಿನ ತಪ್ಪದೇ ಯೋಗ ಮಾಡಬೇಕು. ಯೋಗದಿಂದ ಜ್ಞಾಪಕ ಶಕ್ತಿ ಹೆಚ್ಚಾಗುವುದು ಎಂದು ಜಿಲ್ಲಾ ಆಯುಷ್‌ ಅಧಿಕಾರಿ ಡಾ. ಮಲ್ಲಿಕಾರ್ಜುನ ಎಸ್. ಉಪ್ಪಿನ ಹೇಳಿದರು.

ನಗರದ ಡಾ. ಬಿ.ಆರ್. ಅಂಬೇಡ್ಕರ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದಲ್ಲಿ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕುರಿತು ನಡೆದ ಪೂರ್ವಭಾವಿ ಸಭೆ, ಯೋಗೋತ್ಸವ ಹಾಗೂ ಆಯುಷ್ ಪರಿಚಯ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.

ಕೇವಲ ಜೂ. 21ರಂದು ಯೋಗದಿನ ಅಂಗವಾಗಿ ಮಾತ್ರ ಯೋಗ ಮಾಡುವುದು ಅಲ್ಲ. ದಿನನಿತ್ಯ ಯೋಗಾಭ್ಯಾಸ ಮಾಡಬೇಕು. ಪ್ರತಿ ವರ್ಷ ಯೋಗದಿನ ಆಚರಿಸುತ್ತಿದ್ದು ಈ ವರ್ಷದಿಂದ ಯೋಗೋತ್ಸವ ಎಂಬ 10 ದಿನದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಯೋಗದಿಂದ ಆಗುವ ಪ್ರಯೋಜನ ಬಗ್ಗೆ ತಿಳಿಸುವ ಉದ್ದೇಶ ಹೊಂದಿದೆ. ಅದಕ್ಕಾಗಿ ಶಾಲಾ, ಕಾಲೇಜು, ವಸತಿ ನಿಲಯಗಳಲ್ಲಿ ಯೋಗದ ತರಬೇತಿಯನ್ನು ಯೋಗ ಶಿಕ್ಷಕರಿಂದ ಕೊಡಲಾಗುತ್ತಿದೆ ಎಂದರು.

ಆಯುಷ್ ವೈದ್ಯಾಧಿಕಾರಿ ಡಾ. ಸಂಜೀವ ನಾರಪ್ಪನವರ ಮಾತನಾಡಿ, ಪ್ರತಿದಿನ ಕೇವಲ ಅರ್ಧಗಂಟೆ ಸಮಯವನ್ನು ಯೋಗಕ್ಕಾಗಿ ಮೀಸಲಿಟ್ಟರೆ ನಾವು ಜೀವನ ಪೂರ್ತಿ ಆರೋಗ್ಯವಂತರಾಗಿ ಇರಬಲ್ಲೆವು ಎಂದು ತಿಳಿಸಿದರು.


ಈ ವೇಳೆ ಜಯಶ್ರೀ ಮೇವುಂಡಿ, ಕವಿತಾ, ಪಾರ್ವತಿ, ರೇಣುಕಾ ಕೆಸ್ಠೆ, ಗಂಗಕ್ಕ ಚಕ್ರಣ್ಣವರ, ಡಾ. ಅಶೋಕ ಮತ್ತಿಗಟ್ಟಿ, ಡಾ. ಸಾಯಿಪ್ರಕಾಶ, ಡಾ. ಕಮಲಾಕರ, ಯೋಗ ತರಬೇತಿದಾರರಾದ ರೇಖಾ ತಿಮ್ಮನಗೌಡ್ರ, ಆಯುಷ್ ಸಿಬ್ಬಂದಿ ಯಲ್ಲರಡ್ಡಿ ಬಸವರಡ್ಡಿ, ಸಲ್ಮಾ ಹಣಗಿ ಹಾಗೂ ವಸತಿ ಶಾಲೆಯ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.