ಕನ್ನಡಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ

ಎಲ್ಲಾ ದಾರ್ಶನಿಕರು ಸಮಾಜದ ಒಳಿತಿಗಾಗಿ ಸಂದೇಶವನ್ನು ನೀಡಿದ್ದಾರೆ. ಅಂತಹವರನ್ನು ನಾವು ತಿಳಿದುಕೊಳ್ಳುವ ಜೊತೆಗೆ ನಮ್ಮ ಜೀವನದಲ್ಲಿ ಅವರ ತತ್ವಾದರ್ಶ ಆಳವಡಿಸಿಕೊಂಡು ಸಮಾಜದಲ್ಲಿ ಪ್ರೀತಿ ವಿಶ್ವಾಸದಿಂದ ನೆಮ್ಮದಿ ಜೀವನ ನಡೆಸಿದರೆ ಅದೇ ಸಾರ್ಥಕ ಎಂದು ಶಾಸಕ ಸಿ.ಬಿ. ಸುರೇಶ್‌ಬಾಬು ತಿಳಿಸಿದರು.

ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಏರ್ಪಡಿಸಲಾಗಿದ್ದ ಶ್ರೀ ಯೋಗಿ ನಾರೇಯಣ ಯತೀಂದ್ರರ ೩೦೦ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಎಲ್ಲಾ ದಾರ್ಶನೀಕರ ಜಯಂತಿ ಒಂದೇ ವೇದಿಕೆಯಲ್ಲಿ ಆಚರಿಸುವ ಮೂಲಕ ಸಮಾಜದ ಎಲ್ಲಾ ಜನಾಂಗದವರು ಒಂದೇ ಎಂಬ ಭಾವನೆ ಮೂಡಿಸಲಾಗಿದೆ. ಅದರಂತೆ ಇಂದು ಸಾಂಕೇತಿಕವಾಗಿ ಯೋಗಿನಾರೇಯಣ ಜಯಂತಿ ಆಚರಿಸಲಾಗುತ್ತಿದ್ದು ಎಲ್ಲಾ ಮಹನೀಯರು ಸಮಾಜದ ಉದ್ಧಾರಕ್ಕೆ, ನೆಮ್ಮದಿಯ ಜೀವನ ಕಂಡುಕೊಳ್ಳುವುದಕ್ಕಾಗಿ ಏನು ಮಾಡಬೇಕೆಂದು ತಿಳಿಸಿದರು. ಅವರ ತತ್ವಾದರ್ಶಗಳನ್ನು ನಾವು ನಮ್ಮ ಜೀವನದಲ್ಲಿ ಆಳವಡಿಸಿಕೊಳ್ಳುವ ಮೂಲಕ ಉತ್ತಮ ಬದುಕನ್ನು ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.

ಮೊಬೈಲ್‌ ಬಳಕೆಯನ್ನು ನಾವು ಕಡಿಮೆ ಮಾಡಬೇಕಿದೆ. ಇಂದು ಎಲ್ಲರೂ ಮೊಬೈಲ್ ಹಿಡಿದುಕೊಂಡು ತಮ್ಮವರನ್ನೇ ದೂರಮಾಡುವಂತಹ ಸ್ಥಿತಿ ನಿರ್ಮಾಣವಾಗುತ್ತಿದೆ. ಕನಿಷ್ಠ ದಿನದಲ್ಲಿ ಒಂದೆರಡು ಗಂಟೆ ಮೊಬೈಲ್‌ ಬಿಟ್ಟು ತಮ್ಮವರೊಂದಿಗೆ ಸಮಯ ಕಳೆಯುವುದನ್ನು ಅಭ್ಯಾಸ ಮಾಡಿಕೊಳ್ಳ ಬೇಕು ಎಂದು ಹೇಳಿದರು.

ತಹಸೀಲ್ದಾರ್ ಮಮತಾ ಎಂ. ಮಾತನಾಡಿ ಕಾಲಜ್ಞಾನವನ್ನು ಬರೆದ ಯೋಗಿ ನಾರೇಯಣರು ಜಾತಿವ್ಯವಸ್ಥೆಯನ್ನು ವಿರೋಧಿಸಿದ್ದವರು. ಅವರು ನಮ್ಮೆಲ್ಲರಿಗೂ ಇಂದಿಗೂ ಪ್ರಸ್ತುತವೆನಿಸಿದ್ದು ಅವರ ತತ್ವಾದರ್ಶಗಳನ್ನು ಪಾಲಿಸಬೇಕಿದೆ ಎಂದು ಹೇಳಿದರು.


ನಿವೃತ್ತ ತಹಸೀಲ್ದಾರ್ ಲಕ್ಷ್ಮಣಪ್ಪ ಮಾತನಾಡಿ ೧೭೩೬ರ ಪಾಲ್ಗುಣ ಮಾಸದ ಹುಣ್ಣಿಮೆಯಂದು ಜನಿಸಿದ ಯಾಗಿ ನಾರೇಯಣ ಅವರು ಸಾಮಾನ್ಯ ಬಡಕುಟುಂಬದಲ್ಲಿ ಬೆಳೆದವರು. ತಿಪಟೂರಿನ ಕೆರೆಗೋಡಿಯ ಮಠದಲ್ಲಿ ದೀಕ್ಷೆಯನ್ನು ಪಡೆದ ಅವರು ಸಮಾಜದಲ್ಲಿನ ಜಾತಿ ವ್ಯವಸ್ಥೆ, ಅನೇಕ ಕಟ್ಟುಪಾಡುಗಳನ್ನು ವಿರೋಧಿಸಿ ಅನೇಕ ಕೃತಿಗಳನ್ನು ಬರೆದರು. ಕಾಲಜ್ಞಾನವನ್ನು ಬರೆಯುವ ಮೂಲಕ ಮುಂದಿನ ಸಮಾಜದ ಬದುಕು ಯಾವರೀತಿ ಇರಬೇಕೆಂದು ತಿಳಿಸಿದರು. ಅವರ ಅದರ್ಶಗಳನ್ನು ಇಂದಿಗೂ ನಾವು ಅನುಸರಿಸುತ್ತಾ ಬರುತ್ತಿದ್ದೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಯಂತೋತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಹಾಗೂ ಬಲಿಜ ಸಮುದಾಯದ ಮುಖಂಡರಾದ ನಿವೃತ್ತ ಪೊಲೀಸ್ ಅಧಿಕಾರಿ ಕೃಷ್ಣಪ್ಪ, ನಿವೃತ್ತ ಪಶುವೈದ್ಯರಾದ ಚಂದ್ರಶೇಖರ್, ಮುಖಂಡರಾದ ಆಶೋಕ್, ದಯಾನಂದ್, ಪ್ರಕಾಶ್, ಸೇರಿದಂತೆ ಇತರರು ಇದ್ದರು.