ಕನ್ನಡಪ್ರಭ ವಾರ್ತೆ ಪಾಂಡವಪುರ

ಮನ್‌ಮುಲ್ ನಿರ್ದೇಶಕನಾಗಿ ಆಯ್ಕೆಯಾದ ಬಳಿಕ ಕಳೆದ ಒಂದು ವರ್ಷದಿಂದೀಚೆಗೆ ತಾಲೂಕಿನ ರೈತರಿಗೆ ವಿವಿಧ ಯೋಜನೆಯಡಿ ಒಕ್ಕೂಟದಿಂದ ₹3 ಕೋಟಿಗೂ ಅಧಿಕ ಚೆಕ್ ವಿತರಿಸಲಾಗಿದೆ ಎಂದು ನಿರ್ದೇಶಕ ಸಿ.ಶಿವಕುಮಾರ್ ಹೇಳಿದರು.

ಪಟ್ಟಣದ ಮನ್ಮುಲ್ ಉಪವ್ಯವಸ್ಥಾಪಕರ ಕಚೇರಿಯಲ್ಲಿ ರೈತರಿಗೆ ರಾಸು ವಿಮೆ, ರೈತ ಕಲ್ಯಾಣ ಟ್ರಸ್ಟ್, ಗುಂಪುವಿಮೆ, ಹಾಲು ಕರೆಯುವ ಯಂತ್ರದ ಸಬ್ಸಿಡಿ ಸೇರಿದಂತೆ ವಿವಿಧ ಯೋಜನೆಯಿಂದ ₹25.83 ಲಕ್ಷದ ಚೆಕ್ ವಿತರಿಸಿ ಮಾತನಾಡಿದರು.

ಒಕ್ಕೂಟವು ರೈತರನ್ನು ಪ್ರೋತ್ಸಾಹಿಸಲು ಹಲವು ಯೋಜನೆ, ಸವಲತ್ತುಗಳನ್ನು ನೀಡುತ್ತಿದೆ. ಆ ಯೋಜನೆಗಳನ್ನು ತಳಮಟ್ಟದ ರೈತರಿಗೆ ತಲುಪಿಸುವ ಕೆಲಸವನ್ನು ಒಕ್ಕೂಟದ ಅಧಿಕಾರಿಗಳು, ನೌಕರರು ಹಾಗೂ ಡೈರಿ ಆಡಳಿತ ಮಂಡಳಿಯವರು ಮಾಡಬೇಕು. ನಾನು ನಿರ್ದೇಶಕನಾಗಿ ಆಯ್ಕೆಯಾದ ಬಳಿಕ ಪ್ರತಿ ತಿಂಗಳೂ ಸಭೆ ನಡೆಸಿ ಅಂದಾಜು ₹3 ಕೋಟಿಗೂ ಅಧಿಕ ಮೊತ್ತದ ಚೆಕ್ ಅನ್ನು ಫಲಾನುಭವಿಗಳಿಗೆ ವಿತರಿಸಿದ್ದೇನೆ ಎಂದರು.

ಇತ್ತೀಚಿನ ದಿನಗಳಲ್ಲಿ ರಾಸುಗಳ ಬೆಲೆ ದುಬಾರಿಯಾಗಿದೆ. ಹೀಗಾಗಿ ಆಡಳಿತ ಮಂಡಳಿಯಲ್ಲಿ ಚರ್ಚಿಸಿ ರಾಸುಗಳ ವಿಮೆ ಮೊತ್ತವನ್ನು ಸಹ ಹೆಚ್ಚಿಸಲಾಗಿದೆ. ಮೊದಲು ಮರಣ ಹೊಂದಿದ ರಾಸುಗಳಿಗೆ ₹40 ರಿಂದ ₹60 ಸಾವಿರ ವರೆಗೆ ಮಾತ್ರ ವಿಮೆ ಬರುತ್ತಿತ್ತು. ಈಗ ಅದರ ಮೊತ್ತವನ್ನು ₹80 ಸಾವಿರಕ್ಕೆ ಏರಿಕೆ ಮಾಡಲಾಗಿದೆ. ರೈತರು ಕಡ್ಡಾಯವಾಗಿ ತಮ್ಮ ರಾಸುಗಳಿಗೆ ವಿಮೆ ಮಾಡಿಸಬೇಕು. ಉತ್ಪಾದಕ ರೈತರು, ಷೇರುದಾರರು ಸಹ ಗುಂಪು ವಿಮೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.


ಬೇಸಿಗೆಯಲ್ಲೂ ಸಹ ಒಕ್ಕೂಟಕ್ಕೆ 12 ಲಕ್ಷ ಲೀಟರ್ ಗೂ ಅಧಿಕ ಹಾಲು ನಿತ್ಯ ಪೂರೈಕೆಯಾಗುತ್ತಿದೆ. ಮುಂದಿನ ದಿನಗಳಲ್ಲಿ 15 ಲಕ್ಷದವರೆಗೂ ಏರಿಕೆಯಾಗುವ ಸಾಧ್ಯತೆ ಇರುವುದರಿಂದ ಒಕ್ಕೂಟವು ಅದಕ್ಕೆ ಸಿದ್ಧತೆ ಮಾಡಿಕೊಳ್ಳಲು ಮುಂದಾಗಿದೆ. ರೈತರು ಸಹ ಡೈರಿಗೆ ಗುಣಮಟ್ಟದ ಹಾಲು ಪೂರೈಕೆ ಮಾಡಬೇಕು ಎಂದು ಮನವಿ ಮಾಡಿದರು.

ಮನ್ಮುಲ್ ಉಪವ್ಯವಸ್ಥಾಪಕ ಆರ್.ಪ್ರಸಾದ್ ಮಾತನಾಡಿ, ರೈತರು ಕಡ್ಡಾಯವಾಗಿ ರಾಸುಗಳ ವಿಮೆ ಮಾಡಿಸಬೇಕು, ವಿಮೆ ಮಾಡಿಸದ ರಾಸುಗಳು ಮರಣ ಹೊಂದಿದರೆ ನಯಾಪೈಸೆ ಪರಿಹಾರ ದೊರೆಯುವುದಿಲ್ಲ. ತಾಲೂಕಿನಲ್ಲಿ ಅಂದಾಜು 17,500- 18 ಸಾವಿರ ರಾಸುಗಳಿದ್ದು ಕಳೆದ ಬಾರಿ ಕೇವಲ 10,500 ರಾಸುಗಳಿಗೆ ಮಾತ್ರ ವಿಮೆ ಮಾಡಿಸಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಮನ್ಮುಲ್ ಸಹಾಯಕ ವ್ಯವಸ್ಥಾಪಕರಾದ ಪ್ರಕಾಶ್, ಸಂತೋಷ, ನೌಕರರ ಸಂಘದ ಅಧ್ಯಕ್ಷ ಶಿವಪ್ಪ, ಪ್ರಸಾದ್, ಸುರೇಶ್, ನಟರಾಜು, ಮಾರ್ಗ ವಿಸ್ತರ್ಣಾಧಿಕಾರಿಗಳಾದ ಮಧು, ನಾಗೇಂದ್ರ, ಪ್ರಜ್ವಲ, ಉಷಾ ಭಾಗವಹಿಸಿದ್ದರು.

------------

3ಕೆಎಂಎನ್ ಡಿ22

ಪಾಂಡವಪುರ ಮನ್ಮುಲ್ ಉಪವ್ಯವಸ್ಥಾಪಕರ ಕಚೇರಿಯಲ್ಲಿ ವಿವಿಧ ಫಲಾನುಭವಿಗಳಿಗೆ ₹25.83 ಲಕ್ಷ ಮೌಲ್ಯದ ಚೆಕ್ ವಿತರಿಸಲಾಯಿತು.