ಶೈಕ್ಷಣಿಕ ಕ್ಷೇತ್ರದ ಎಸ್ಸೆಸ್ಸೆಲ್ಸಿ ಹಂತ ದಾಟಿ ಪ್ರಥಮ ಪಿಯುಸಿ ಶಿಕ್ಷಣ ಪಡೆಯಲು ದಾಖಲಾಗಿದ್ದು, ಇನ್ನು ಮುಂದಿನ ವರ್ಷಗಳಲ್ಲಿ ಉತ್ತಮ ನಿರ್ಧಾರ, ಪೋಷಕರ ಆಶಯಗಳ ಪೂರೈಸಲು ಅಣಿಯಾಗುತ್ತಿದ್ದೀರಿ. ನಿಮ್ಮ ಮುಂದೆ ಉತ್ತಮ ಗುರು ಮತ್ತು ಗುರಿ ಇದೆ. ಗುರಿ ತಲುಪಲು ಶ್ರಮ, ನಿರಂತರ ಅಭ್ಯಾಸ ಬೇಕಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಯುವ ಜನರು ಸ್ವಂತ ಉದ್ಯಮಗಳನ್ನು ಸ್ಥಾಪಿಸುವ ಮೂಲಕ ಉದ್ಯೋಗದಾತರಾಗಬೇಕು. ಬೇರೆಯವರಿಗೂ ಉದ್ಯೋಗ ನೀಡುವತ್ತ ಗಮನ ಹರಿಸಬೇಕು ಎಂದು ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ ಅಧ್ಯಕ್ಷ ವಿನಯ್‌ಕುಮಾರ್ ಸಲಹೆ ನೀಡಿದರು.

ನಗರದ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ನವೋದಯ ಟ್ರಸ್ಟ್‌ನ ವೇದಂ ಎಕ್ಸೆಲ್ ಪಿಯು ಕಾಲೇಜು ವತಿಯಿಂದ ನಡೆದ ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಶೈಕ್ಷಣಿಕ ಕ್ಷೇತ್ರದ ಎಸ್ಸೆಸ್ಸೆಲ್ಸಿ ಹಂತ ದಾಟಿ ಪ್ರಥಮ ಪಿಯುಸಿ ಶಿಕ್ಷಣ ಪಡೆಯಲು ದಾಖಲಾಗಿದ್ದು, ಇನ್ನು ಮುಂದಿನ ವರ್ಷಗಳಲ್ಲಿ ಉತ್ತಮ ನಿರ್ಧಾರ, ಪೋಷಕರ ಆಶಯಗಳ ಪೂರೈಸಲು ಅಣಿಯಾಗುತ್ತಿದ್ದೀರಿ. ನಿಮ್ಮ ಮುಂದೆ ಉತ್ತಮ ಗುರು ಮತ್ತು ಗುರಿ ಇದೆ. ಗುರಿ ತಲುಪಲು ಶ್ರಮ, ನಿರಂತರ ಅಭ್ಯಾಸ ಬೇಕಾಗಿದೆ ಎಂದು ನುಡಿದರು.

ಪ್ರಸ್ತುತ ಸ್ಪರ್ಧಾತ್ಮಕ ಕ್ಷೇತ್ರದಲ್ಲಿ ಓದಿದ್ದನ್ನು ನೆನಪಿನಲ್ಲಿಟ್ಟುಕೊಂಡು ಶೈಕ್ಷಣಿಕ ಸಾಧನೆ ಮಾಡಬೇಕು. ಪದವೀಧರರು ಸ್ವಂತವಾಗಿ ದೊಡ್ಡ ದೊಡ್ಡ ಉದ್ಯೋಗ- ಉದ್ಯಮಗಳ ಸ್ಥಾಪನೆ ಬಗ್ಗೆ ಕನಸು ಕಾಣಬೇಕು. ಐಎಎಸ್, ಐಪಿಎಸ್, ಐಆರ್‌ಎಸ್‌ಎಫ್ ಸಾಧನೆಯೊಂದಿಗೆ ಎಂಎಲ್ ಎ, ಎಂಪಿ, ಸಿಎಂ, ಪಿಎಂ, ರಾಷ್ಟ್ರಪತಿಯಾಗುವ ಹಂಬಲವನ್ನು ಇರಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ವೇದಂ ಎಕ್ಸೆಲ್ ಪಿಯು ಕಾಲೇಜು ಶೈಕ್ಷಣಿಕ ಪಾಲುದಾರ ರವಿಕಿರಣ್ ಮಾತನಾಡಿ, ಸೋತಾಗ ಕುಸಿದುಬೀಳದೇ ಮತ್ತೆ ಪ್ರಯತ್ನಪಟ್ಟು ಗೆಲ್ಲಬೇಕು. ಓದಿನೊಂದಿಗೆ ವಿದ್ಯಾರ್ಥಿಗಳು ಭಾಷಣ ಕೇಳಬೇಕು, ಭಾಷಣ ಕೇಳಿಸಿಕೊಂಡವರು ಉತ್ತಮ ಸಾಧಕರಾಗಿದ್ದಾರೆ ಎಂದು ನುಡಿದರು.

ಇದೇ ವೇಳೆ ಪ್ರತಿಭಾವಂತ ವಿದ್ಯಾರ್ಥಿನಿ ಯಶು ನೃತ್ಯ ಪ್ರದರ್ಶಿಸಿದರು. ಸಮಾರಂಭದಲ್ಲಿ ಕಾಲೇಜಿನ ಶೈಕ್ಷಣಿಕ ಪಾಲುದಾರರಾದ ಡಾ. ಎಸ್.ಎ.ಮಹೇಶ್, ಕೆ.ಅರುಣ, ಮುಖ್ಯ ಶಿಕ್ಷಕ ಎಂ.ಎನ್.ರವಿ, ಪ್ರಾಂಶುಪಾಲ ಎಂ.ಸಂತೋಷ್‌ಕುಮಾರ್, ಶಿಕ್ಷಕರ ಸಂಘ ತಾಲೂಕು ಅಧ್ಯಕ್ಷ ಶಿವಣ್ಣ ಮಂಗಲ ಭಾಗವಹಿಸಿದ್ದರು.