ಸಾರಾಂಶ
ಕೋಲಾರ : ರಾಜ್ಯಕ್ಕೆ ಕೇಂದ್ರದ ಅನುದಾನ ತರುವುದು ಬಿಜೆಪಿ ಹೊಣೆಯಾಗಿದೆ. ಬರಗಾಲದಲ್ಲೂ ನಿರೀಕ್ಷಿತ ಪರಿಹಾರ ಸಿಕ್ಕಿಲ್ಲ. ಜಿಎಸ್ಟಿ ತೆರಿಗೆಯಲ್ಲಿ ರಾಜ್ಯಕ್ಕೆ ಬರಬೇಕಾದ ಕನಿಷ್ಠ ಪಾಲು ನೀಡದೆ ವಂಚನೆಯಾಗಿದೆ ಎಂದು ರಾಜ್ಯ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಆರೋಪಿಸಿದರು. ನಗರದ ವಾಲ್ಮೀಕಿ ಸಮುದಾಯದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೂ ಮೊದಲು ಸುದ್ಧಿಗಾರರೊಂದಿಗೆ ಮಾತನಾಡಿ, ಕೇಂದ್ರದ ಬಜೆಟ್ನಲ್ಲಿ ರಾಜ್ಯಕ್ಕೆ ಅಗಿರುವ ಅನ್ಯಾಯದ ಬಗ್ಗೆ ಮುಖ್ಯ ಮಂತ್ರಿಗಳು ಈಗಾಗಲೇ ಸ್ವಷ್ಟವಾಗಿ ವಿವರಿಸಿದ್ದಾರೆ ಎಂದರು.
ಪ್ರತಿಪಕ್ಷಗಳ ಆರೋಪಕ್ಕೆ ಉತ್ತರ
ರಾಜ್ಯ ಬಜೆಟ್ನ ಅಭಿವೃದ್ದಿಯ ಅನುದಾನಗಳನ್ನು ಪಂಚ ಗ್ಯಾರಂಟಿ ಯೋಜನೆಗಳಿಗೆ ಬಳಿಸಿದ್ದಾರೆ ಎಂಬುವುದು ಪ್ರತಿಪಕ್ಷಗಳ ಆರೋಪವಾಗಿದೆ, ಪ್ರತಿಪಕ್ಷಗಳಿಗೆ ಆರೋಪಿಸುವ ಹಕ್ಕಿದೆ. ಬಜೆಟ್ನಲ್ಲಿ ಗ್ಯಾರಂಟಿಗಳಿಗೆ ಪ್ರತ್ಯೇಕವಾಗಿ ಅನುದಾನ ಮೀಸಲಿಟ್ಟಿರುವುದು, ಬಜೆಟ್ ದಾಖಲೆಗಳಿಗೆ ಸಂಬಂಧಿಸಿದಂತೆ ಯಾರು ಬೇಕಾದರು ಪಡೆಯಬಹುದಾಗಿದೆ, ಈಗಾಗಲೇ ಅವರ ಆರೋಪಗಳಿಗೆ ಸರ್ಕಾರವು ಸ್ಪಷ್ಟನೆ ನೀಡಿದೆ ಎಂದರು.ಎಸ್.ಟಿ.ಪಿ.ಎಸ್.ಸಿ, ವಾಲ್ಮೀಕಿ ಹಗರಣ, ಮುಡಾ ಹಗರಣಗಳ ಆರೋಪದ ಬಗ್ಗೆ ಈಗಾಗಲೇ ಸರ್ಕಾರವು ತನಿಖೆ ಮಾಡಲು ಮೂರು ಸಂಸ್ಥೆಗಳಿಗೆ ವಹಿಸಿದೆ. ಎಲ್ಲವನ್ನು ಒಂದೇ ಬಾರಿ ಸರಿ ಮಾಡಲು ಸಾಧ್ಯವಿಲ್ಲ ಎಲ್ಲವೂ ಹಂತ, ಹಂತವಾಗಿ ಮಾಡಲು ಸಮಯಾವಕಾಶಬೇಕಾಗಿದೆ. ಅದುವರೆಗೆ ತಾಳ್ಮೆಯಿಂದ ಕಾಯಬೇಕು. ತನಿಖೆಗಳು ಪೂರ್ಣಗೊಂಡ ನಂತರ ಸರ್ಕಾರವು ಕಾನೂನು ಬದ್ಧವಾಗಿ ಕ್ರಮ ಕೈಗೊಳ್ಳಲಿದೆ ಎಂದು ಸಮರ್ಥಿಸಿಕೊಂಡರು.
ಹೈಕಮಾಂಡ್ ನಿರ್ಧಾರಕ್ಕೆ
ಮುಖ್ಯ ಮಂತ್ರಿಗಳ ಬದಲಾವಣೆ ಚಿಂತನೆ ನಮ್ಮಲ್ಲಿ ಇಲ್ಲ, ಉಪ ಮುಖ್ಯ ಮಂತ್ರಿಗಳ ಪ್ರಶ್ನೆ ಹಿಂದೆ ಪ್ರಸ್ತಾಪವಾಗಿತ್ತು, ಆದರೆ ಚುನಾವಣೆ ಮುಗಿದ ನಂತರ ಅತರಹದ ಯಾವುದೇ ಚರ್ಚೆಗಳು ಇಲ್ಲ, ಅದರ ಅವಶ್ಯಕತೆಯೂ ಇಲ್ಲವಾಗಿದೆ. ವಾಲ್ಮೀಕಿ ಸಮುದಾಯದಿಂದ ಈ ಹಿಂದೆ ನಾನು ಸಹ ಆಕಾಂಕ್ಷಿಯಾಗಿದ್ದೆ ಎಂಬುವುದು ನಿಜ. ನಮ್ಮಲ್ಲಿ ಉಪಮುಖ್ಯ ಮಂತ್ರಿ ಸ್ಥಾನಕ್ಕೆ ಅರ್ಹರಾದವರ ಸಂಖ್ಯೆ ಹೆಚ್ಚಾಗಿಯೇ ಇದೆ. ಯಾವುದೇ ಸ್ಥಾನಗಳ ಬಗ್ಗೆ ನಿರ್ಧರಿಸಲು ನಮ್ಮಲ್ಲಿ ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಉತ್ತರಿಸಿದರು.ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ ಓ.ಬಿ.ಸಿ. ಮತ್ತು ಮೀಸಲಾತಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿ ಇರುವುದರಿಂದ ಚುನಾವಣೆಗಳು ನಿಗದಿತ ಅವಧಿಯಲ್ಲಿ ಮಾಡಲು ಸಾಧ್ಯವಾಗದೆ ವಿಳಂಬವಾಗುತ್ತಿದೆಯೇ ಹೊರತು ಇದರಲ್ಲಿ ಸರ್ಕಾರದ್ದು ಯಾವುದೇ ನಿರ್ಲಕ್ಷತೆ ಅಥವಾ ಲೋಪದೋಷಗಳಿಲ್ಲ ಎಂದರು.
ವವಮಳೆ ಹಾನಿ ಪರಿಹಾರ ಕಾರ್ಯ
ರಾಜ್ಯದಲ್ಲಿ ಎಲ್ಲಾ ನದಿಗಳು ತುಂಬಿ ಹರಿಯುತ್ತಿದೆ. ಹೆಚ್ಚಿನ ಪ್ರಮಾಣದ ನೀರನ್ನು ಹೊರಗೆ ಬಿಡಲಾಗುತ್ತಿದೆ. ಮಳೆ ಹೆಚ್ಚಾಗಿ ಕೆಲವಡೆ ರಸ್ತೆಗಳು ಮುಚ್ಚಿ ಹೋಗಿ ಹಾನಿಯಾಗಿದೆ. ಈ ಕುರಿತು ಸರ್ಕಾರವು ಸಂಬಂಧಪಟ್ಟ ಅಧಿಕಾರಿಗಳಿಗೆ ಕ್ರಮಕೈಗೊಳ್ಳಲು ಸೂಚಿಸಿದ್ದು ಪರಿಹಾರದ ಕಾರ್ಯಗಳು ಪ್ರಗತಿಯಲ್ಲಿದೆ. ಮಣ್ಣು ಕುಸಿತದಿಂದ ರಸ್ತೆಗಳು ಮುಚ್ಚಿ ಹೋಗಿರುವ ಭಾಗದಲ್ಲಿ ತೆರವು ಕಾರ್ಯಚರಣೆಯನ್ನು ತ್ವರಿತವಾಗಿ ಮಾಡಲಾಗುತ್ತಿದೆ ಎಂದರು. ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ನ್ಯಾ.ದೇಸಾಯಿ ಅವರಿಂದ ತನಿಖೆ ನಡೆಯುತ್ತಿದೆ. ತನಿಖೆಯ ವರದಿ ಬರುವವರೆಗೆ ಕಾಯದೆ ತನಿಖೆಯ ವರದಿ ಬರುವ ಮೊದಲೇ ಪ್ರತಿಭಟನೆಗಳು ನಡೆಸುವಂತ ಅವಶ್ಯಕತೆ ಇಲ್ಲ. ರಾಜ್ಯದ ಸಮಸ್ಯೆಗಳಿಗೆ ಒತ್ತು ನೀಡಲು ಪ್ರತಿಪಕ್ಷಗಳು ಅವಕಾಶ ನೀಡಬೇಕು ಆದರೆ ಅವಕಾಶ ನೀಡದೆ ಪ್ರತಿಭಟಿಸುವ ಮೂಲಕ ಸದನದ ಕಾಲಹರಣ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.