ಸಾರಾಂಶ
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರೇ ಸ್ವತಃ ಮುಖ್ಯಮಂತ್ರಿ ಆಗಿದ್ದಾಗ ಬದಲಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದು, ಬರೋಬ್ಬರಿ 32,800 ಚದರಡಿ ನಿವೇಶನ ನೀಡಲು ಮುಡಾ ನಿರ್ಣಯ ತೆಗೆದುಕೊಂಡಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.
ಬೆಂಗಳೂರು : ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರೇ ಸ್ವತಃ ಮುಖ್ಯಮಂತ್ರಿ ಆಗಿದ್ದಾಗ ಬದಲಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದು, ಬರೋಬ್ಬರಿ 32,800 ಚದರಡಿ ನಿವೇಶನ ನೀಡಲು ಮುಡಾ ನಿರ್ಣಯ ತೆಗೆದುಕೊಂಡಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.
1985ರಲ್ಲಿ ಮೈಸೂರು ನಗರದ ಕಿಲ್ಲೆ ಮೊಹಲ್ಲ ಕೈಗಾರಿಕಾ ಉಪನಗರದಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರು 17-ಬಿ1 ನಿವೇಶನ ಸಂಖ್ಯೆಯ 21,000 (75*280) ಚದರಡಿ ಕೈಗಾರಿಕಾ ನಿವೇಶನ ಪಡೆದಿದ್ದರು.
ಈ ಸಂಬಂಧ ಬರೋಬ್ಬರಿ 32 ವರ್ಷಗಳ ಬಳಿಕ 2017ರ ಫೆಬ್ರುವರಿಯಲ್ಲಿ ಮೂಡಗೆ ಮನವಿ ಸಲ್ಲಿಸಿದ್ದ ಎಚ್.ಡಿ. ಕುಮಾರಸ್ವಾಮಿ ಅವರು ತಮಗೆ ಹಂಚಿಕೆಯಾಗಿರುವ ನಿವೇಶನವು 21,000 ಚದರಡಿಗೆ ಬದಲಿಗೆ 13,064 (46/284) ಚದರಡಿ ಮಾತ್ರ ಇದೆ. ಹೀಗಾಗಿ ಬದಲಿ ನಿವೇಶನ ಮಂಜೂರು ಮಾಡಿ ಎಂದು ಕೋರಿದ್ದು, ಮುಡಾ ವತಿಯಿಂದ ಬದಲಿ ನಿವೇಶನವಾಗಿ 2023ರ ಜ.1 ನಡೆದ ಪ್ರಾಧಿಕಾರದ ಸಭೆಯಲ್ಲಿ ಇಂಡಸ್ಟ್ರಿಯಲ್ ಸಬರ್ಬ್ 3ನೇ ಹಂತದ ಬಡಾವಣೆಯ 23-ಇ ನಿವೇಶನ ಸಂಖ್ಯೆಯ 32,800 (82*400) ಚದರಡಿ ವಿಸ್ತೀರ್ಣದ ನಿವೇಶನ ಹಂಚಿಕೆ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.