ಸಾರಾಂಶ
ನವದೆಹಲಿ: ತಿಹಾರ್ ಜೈಲಿನಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಅವರ ದೇಹದ ತೂಕದ 8 ಕೆಜಿಯಷ್ಟು ಇಳಿದಿದೆ ಎಂಬ ಆಪ್ ನಾಯಕರ ಆರೋಪವನ್ನು ಜೈಲಧಿಕಾರಿಗಳು ತಳ್ಳಿಹಾಕಿದ್ದಾರೆ.
ಕೇಜ್ರಿವಾಲ್ ಅವರ ಆರೋಗ್ಯದ ಮೇಲೆ ಏಮ್ಸ್ನ ವೈದ್ಯರ ತಂಡ ಸತತ ನಿಗಾ ಇಟ್ಟಿದೆ. ಅವರ ದೇಹದ ತೂಕದಲ್ಲಿ 2 ಕೆಜಿಯಷ್ಟು ಮಾತ್ರವೇ ಇಳಿಕೆಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಆಪ್ ನಾಯಕರ ಆರೋಪ, ಜನರಲ್ಲಿ ಗೊಂದಲ ಮೂಡಿಸುವ ಮತ್ತು ಸಾರ್ವಜನಿಕರ ದಿಕ್ಕು ತಪ್ಪಿಸುವಂತಿದೆ ಎಂದು ಜೈಲಧಿಕಾರಿಗಳು ದೆಹಲಿ ಸರ್ಕಾರ ಗೃಹ ಇಲಾಖೆಗೆ ಮಾಹಿತಿ ರವಾನಿಸಿದ್ದಾರೆ.
ಈ ನಡುವೆ ಜೈಲಧಿಕಾರಿಗಳ ವಾದ ತಳ್ಳಿಹಾಕಿರುವ ಆಪ್ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್, ‘ಕೇಜ್ರಿವಾಲ್ ಬಂಧನವಾದ ಬಳಿಕ ಅವರ ದೇಹದ ತೂಕ 8.5 ಕೆಜಿಯಷ್ಟು ಇಳಿಕೆಯಾಗಿದೆ. ರಕ್ತದಲ್ಲಿನ ಸಕ್ಕರೆ ಅಂಶ 5 ಬಾರಿ 50 ಎಂಜಿ/ಡಿಎಲ್ಗಿಂತ ಕೆಳಗೆ ಇಳಿದಿದೆ. ಇದು ಅವರನ್ನು ಕೋಮಾಕ್ಕೆ ತಳ್ಳಬಹುದು ಅಥವಾ ಸಾವಿಗೂ ಕಾರಣವಾಗಬಹುದು ಎಂದು ಆರೋಪಿಸಿದ್ದಾರೆ.