ಕರ್ನಾಟಕ ಸಮೃದ್ಧ ನೈಸರ್ಗಿಕ ಸಂಪನ್ಮೂಲ ಹೊಂದಿದ್ದು, ಅದನ್ನು ಸಮರ್ಪಕವಾಗಿ ಮತ್ತು ಜವಾಬ್ದಾರಿಯುತವಾಗಿ ನಿರ್ವಹಣೆ ಮಾಡಬೇಕು. ನೈಸರ್ಗಿಕ ಸಂಪನ್ಮೂಲಗಳಿಗೆ ಎದುರಾಗುವ ಸಮಸ್ಯೆಗಳನ್ನು ನಿವಾರಿಸಲು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಹೇಳಿದರು.
ಬೆಂಗಳೂರು : ಕರ್ನಾಟಕ ಸಮೃದ್ಧ ನೈಸರ್ಗಿಕ ಸಂಪನ್ಮೂಲ ಹೊಂದಿದ್ದು, ಅದನ್ನು ಸಮರ್ಪಕವಾಗಿ ಮತ್ತು ಜವಾಬ್ದಾರಿಯುತವಾಗಿ ನಿರ್ವಹಣೆ ಮಾಡಬೇಕು. ನೈಸರ್ಗಿಕ ಸಂಪನ್ಮೂಲಗಳಿಗೆ ಸಂಬಂಧಿಸಿದಂತೆ ಎದುರಾಗುವ ಸಮಸ್ಯೆಗಳನ್ನು ತಂತ್ರಜ್ಞಾನದ ಮೂಲಕ ಪರಿಣಾಮಕಾರಿಯಾಗಿ ನಿವಾರಿಸಲು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಹೇಳಿದರು.
ತಂತ್ರಜ್ಞಾನ ಪ್ರದರ್ಶನ, ಕಾರ್ಯಾಗಾರ
ರಾಜ್ಯ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ಸ್ ಸೆಂಟರ್ (ಕೆಎಸ್ಆರ್ಎಸ್ಎಸಿ)ನಿಂದ ಆಯೋಜಿಸಲಾಗಿರುವ 2 ದಿನಗಳ ರಾಜ್ಯ ಮಟ್ಟದ ತಂತ್ರಜ್ಞಾನ ಪ್ರದರ್ಶನ, ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಡಾ.ಶಾಲಿನಿ ರಜನೀಶ್, ನೀರು, ಗಾಳಿ ಸೇರಿದಂತೆ ಪ್ರಮುಖ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಅತ್ಯಗತ್ಯ. ಮಾಲಿನ್ಯ ಮತ್ತು ಪರಿಸರ ಹಾನಿಯಂತಹ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಅಗತ್ಯವಿದೆ. ಕರ್ನಾಟಕದ ನೈಸರ್ಗಿಕ ಸಂಪನ್ಮೂಲ ಸಮೃದ್ಧವಾಗಿದೆ. ಅದರ ಬಳಕೆಗೆ ಸಮರ್ಪಕ ಯೋಜನೆ ಹಾಗೂ ಜವಾಬ್ದಾರಿಯುತ ನಿರ್ವಹಣೆ ಮಾಡಬೇಕು. ನೈಸರ್ಗಿಕ ಸಂಪನ್ಮೂಲಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ತಂತ್ರಜ್ಞಾನದ ಮೂಲಕ ಮೇಲ್ವಿಚಾರಣೆ ಮಾಡಬೇಕು ಎಂದರು.
ಕಾಲಕಾಲಕ್ಕೆ ವಿಶ್ಲೇಷಣೆ ಮಾಡುವುದು ಅತ್ಯಗತ್ಯ
ಜಲಾನಯನ ಪ್ರದೇಶಗಳ ಮೇಲೆ ನಿಗಾ, ನೀರನ ಲಭ್ಯತೆ ಮೌಲ್ಯಮಾಪನ, ಮಣ್ಣಿನ ಅಗೆತದ ಮೇಲ್ವಿಚಾರಣೆ, ತ್ಯಾಜ್ಯ ನಿರ್ವಹಣೆ, ಪ್ರವಾಹದ ಮೇಲೆ ನಿಗಾ, ನೀರಿನ ಸಂಗ್ರಹದ ಕುರಿತ ವಿಚಾರಗಳನ್ನು ಕಾಲಕಾಲಕ್ಕೆ ವಿಶ್ಲೇಷಣೆ ಮಾಡುವುದು ಅತ್ಯಗತ್ಯ. ಕೆರೆಗಳ ಅತಿಕ್ರಮಣ, ಜಲ ಮಾರ್ಗಗಳಲ್ಲಿ ಹೂಳು ತುಂಬುದರಿಂದ ಉಂಟಾಗುವ ಅಡೆತಡೆಗಳನ್ನು ಜಿಐಎಸ್ ತಂತ್ರಜ್ಞಾನದ ಮೂಲಕ ಸಮರ್ಥವಾಗಿ ನಿರ್ವಹಿಸಬೇಕಿದೆ. ಅದಕ್ಕೆ 2 ದಿನಗಳ ರಾಜ್ಯ ಮಟ್ಟದ ತಂತ್ರಜ್ಞಾನ ಪ್ರದರ್ಶನ, ಕಾರ್ಯಾಗಾರ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಪ್ರಧಾನ ಕಾರ್ಯದರ್ಶಿ ಪಂಕಜ್ಕುಮಾರ್ ಪಾಂಡೆ, ಕೆಎಸ್ಆರ್ಎಸ್ಎಸಿ ನಿರ್ದೇಶಕ ಡಾ. ಎನ್.ಎಲ್. ರಾಜೇಶ್, ಕೆಎಸ್ಆರ್ಎಸ್ಎಸಿಯ ಪ್ರೊ. ಡಾ.ಎಚ್. ಹೊನ್ನೆಗೌಡ ಇತರರಿದ್ದರು.